Thursday, January 12, 2012

ಶಿಸ್ತು ...ಅಂದರೆ ಹೀಗೇನೇ...

ರಾಧಿಕಾ ಕೆ. ವಿಟ್ಲ
ಎಲ್ಲಿ ನೋಡಿದರಲ್ಲಿ ಕಿಕ್ಕಿರಿದಿರುವ ಜನ ಜಂಗುಳಿ. ಒಂದೆಡೆ ತಮ್ಮ ಸರದಿಗಾಗಿ ಕಾದು ಕುಳಿತಿರುವ ಜನರಾದರೆ, ಇನ್ನೊಂದೆಡೆ ಗುಂಪಲ್ಲಿ ಕುಣಿಯುತ್ತಾ ಇಹವ ಮರೆವ ಜನರ ಗುಂಪು, ಇವೆಲ್ಲದರ ಮದ್ಯೆ ಅಗತ್ಯದ ಮಾಹಿತಿಗಾಗಿ ಹುಡುಕಾಡುವ ಗಲಿಬಿಲಿ ಕಂಗಳು ಇವರೆಲ್ಲರನ್ನೂ ಸಂಬಾಳಿಸಬೇಕಾದರೆ ಸ್ಕೌಟ್ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂಬ ಮಾತು ಕೇಳಿ ಬರುತ್ತಿರುವುದು ಮಂಗಳೂರಿನಲ್ಲಿ ನಡೆಯುತ್ತಿರುವ 17 ರಾಷ್ಟ್ರೀಯ ಯುವಜನೋತ್ಸವದಲ್ಲಿ.

ಮಂಗಳೂರಿನಲ್ಲಿ ನಡೆಯುತ್ತಿರುವ 17 ನೇ ರಾಷ್ಟ್ರೀಯ ಯುವಜನೋತ್ಸವ 2011, ಕಾರ್ಯಕ್ರಮ ತನ್ನ ಅಚ್ಚುಕಟ್ಟುತನವನ್ನು ಇಷ್ಟೊಂದು ಚೆನ್ನಾಗಿ ಕಾಪಾಡಿಕೊಳ್ಳಬೇಕಾದರೆ ಅದಕ್ಕೆ ಕಾರಣ ವಿವಿಧ ಕಾಲೇಜುಗಳಿಂದ ಬಂದಂತಹ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು. ಸಾವಿರಾರು ಜನ ಸೇರುವ ಇಂತಹ ಕಾರ್ಯಕ್ರಮದಲ್ಲಿ ಒಂದು ನಿಯಮಿತ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲೆಂದೆ ಜನ ಬೇಕಾಗುತ್ತದೆ. ಅದಕ್ಕೆಂದೇ ಬಂದಂತಹ ಬೇರೆ-ಬೇರೆ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ತಮ್ಮ ಕೆಲಸ ಕಾರ್ಯಗಳನ್ನು ಯಾವುದೇ ಲೋಪವಿಲ್ಲದೇ ಮಾಡುತ್ತಿರುವುದು ಶ್ಲಾಘನೀಯ.
ಸುಮಾರು 8 ಕಾಲೇಜಿನಿಂದ ನೂರಾ ಏಳು ಜನ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕಾರಾಗಿ ಬಂದಿದ್ದು ಇದರಲ್ಲಿ 82 ರೊವರ್ಸ್ ಹಾಗೂ 25 ರೇಂಜರ್ಸ್ಗಳಿದ್ದಾರೆ.

ರಾಜ್ಯದ ವಿವಿದೆಡೆಗಳಿಂದ ಬಂದಿರುವ ಇವರು ಒಟ್ಟಾಗಿ ಕಲೆತು ತಮ್ಮಲ್ಲಿ 3 ಗುಂಪು ಮಾಡಿ ಬೆಳಿಗ್ಗೆ ಮದ್ಯಾಹ್ನ ಹಾಗೂ ರಾತ್ರಿ ಅವದಿಗಳಿಗೆ ವಿಭಾಗಿಸಿಕೊಂಡು ದುಡಿಯುತ್ತಿದ್ದಾರೆ. ನೋಂದಣಿ ಮಾಡಿಸುವುದು, ಮಾಹಿತಿ ನೀಡುವುದು, ಸರದಿ ಕಾಪಾಡುವುದು, ಶಿಸ್ತು ಕಾಪಾಡುವುದು ಹೀಗೆ ಸಾವಿರ ಕೆಲಸಗಳನ್ನು ಹೂವೆತ್ತುವಂತೆ ಮಾಡುವುದು ಇವರಿಗೆ ಬಲುಸುಲಭದ ಮಾತು.
24 ರಾಜ್ಯಗಳಿಂದ ಬಂದಂತಹ ವಿವಿಧ ಭಾಷೆಗಳ ಜನರಿಗೆ ಸಹನೆಯಿಂದ ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಂತೆ ಕಾಪಾಡುವ ಇವರಿಗೆ 24ಗಂಟೆಗಳ ಕಾಲದ ಎಡೆಬಿಡದ ಕಾರ್ಯ. ಹಗಲು ರಾತ್ರಿಯೆನ್ನದೆ ಜನ ಬರ್ತಾರೆ, ಅವ್ರಿಗೆ ಯಾವುದೇ ಸಮಸ್ಯೆಯಾಗದಂತೆ ವಸತಿ ಹಾಗೂ ಇತರೆ ಏರ್ಪಾಡುಗಳನ್ನು ನಾವು ಮಾಡಿ ಕೊಡುತ್ತೇವೆ. ನಮಗಿಲ್ಲಿ ಯಾವುದೇ ತೊಂದರೆ ಇಲ್ಲ. ಸಂತೃಪ್ತಿಯಿಂದ ನಮ್ಮ ಕಾರ್ಯ ಮಾಡ್ತೇವೆ ಅಂತಾರೆ ಸ್ಕೌಟ್ ವಿದ್ಯಾರ್ಥಿ ನಿರಂಜನ್. ಸೇವೆಯೇ ಜೀವ ಎನ್ನುವ ಈ ವಿದ್ಯಾರ್ಥಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.