Sunday, May 31, 2009

ಲೈಂಗಿಕ ಅಸಮಾನತೆ ನಿವಾರಣೆಗೆ ಸಾಮಾಜಮುಖಿ ಚಿಂತನೆ ಅಗತ್ಯ: ಜಿಲ್ಲಾಧಿಕಾರಿ


ಮಂಗಳೂರು, ಮೇ 31: ಮುಂದುವರಿದ ಸುಶಿಕ್ಷಿತ ಜನರಿರುವ ಜಿಲ್ಲೆಯೆಂಬ ಹೆಗ್ಗಳಿಕೆಯಿರುವ ದಕ್ಷಿಣ ಕನ್ನಡದಲ್ಲೂ ಲಿಂಗಾನುಪಾತದಲ್ಲಿ ಕಂಡು ಬಂದಿರುವ ವ್ಯತ್ಯಾಸ ಆಘಾತಕಾರಿಯಾಗಿದ್ದು, ಈ ಬಗ್ಗೆ ಸಾಮಾಜಿಕ ಜವಾಬ್ದಾರಿ, ಜಾಗೃತಿಯ ಹೊಣೆ ಪ್ರತಿಯೊಬ್ಬರದ್ದು ಎಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಹೇಳಿದರು.
ಇಂದು ಐಎಂಎ ಕಟ್ಟಡ, ಅತ್ತಾವರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹೆಣ್ಣು ಮಗುವಿನ ಸಂರಕ್ಷಣೆ ಅಂಗವಾಗಿ ಜಿಲ್ಲಾ ಸಕ್ಷಮ ಪ್ರಾಧಿಕಾರ ಆಶ್ರಯದಲ್ಲಿ ಎಲ್ಲಾ ವೈದ್ಯಕೀಯ ಕಾಲೇಜುಗಳ ಪ್ರಾಂಶುಪಾಲರು, ಖಾಸಗಿ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ರೇಡಿಯಾಲಾಜಿಸ್ಟ್ ಗಳಿಗೆ ಏರ್ಪಡಿಸಲಾಗಿದ್ದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಲಿಂಗ ಪತ್ತೆ ಮಾಡುವ ತಂತ್ರ ದುರ್ಬಳಕೆ ಮತ್ತು ನಿಷೇಧ ಕಾಯಿದೆ ಕುರಿತ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ದಿನಗಳಲ್ಲಿ ಸಾಮಾಜಿಕ ಕೆಡುಕುಗಳ ವಿರುದ್ಧ ಧ್ವನಿಯೆತ್ತುವವರ ಸಂಖ್ಯೆ ಕ್ಷೀಣಿಸುತ್ತಿದ್ದು, ಎಲ್ಲರೂ ಸಾಮಾಜಿಕ ಹೊಣೆಯ ಬಗ್ಗೆ ಚಿಂತಿಸಲು ಇದು ಸಕಾಲವಾಗಿದೆ ಎಂದ ಜಿಲ್ಲಾಧಿಕಾರಿಗಳು ಕಾನೂನಿಂದ ಮಾತ್ರ ಕೆಡುಕುಗಳ ನಿವಾರಣೆ ಅಸಾಧ್ಯ ಎಂದರು. ಜಿಲ್ಲೆಯು ಕೇವಲ ಆರ್ಥಿಕ ಅಭಿವೃದ್ಧಿ ಹೊಂದಿದರೆ ಮಾತ್ರ ಮುಂದುವರಿದ ಜಿಲ್ಲೆ ಎಂದು ಗುರುತಿಸಲ್ಪಡುವುದಿಲ್ಲ; ಸಾಮಾಜಿಕ ಬದುಕು ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ; ಹಾಗಾಗಿ ಇಂತಹ ಮಾಹಿತಿ ಕಾರ್ಯಾಗಾರಗಳು ಇಂದಿನ ಅಗತ್ಯವಾಗಿದೆ ಎಂದರು. ಕಾನೂನುಗಳಲ್ಲು ಸಕಾಲಿಕ ಬದಲಾವಣೆಯ ಅಗತ್ಯವನ್ನು ಜಿಲ್ಲಾಧಿಕಾರಿಗಳು ಒತ್ತಿ ಹೇಳಿದರು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸತ್ರ ನ್ಯಾಯಾಧೀಶ ಶ್ರೀ ವಿ.ಸಿ. ಹಟ್ಟಿ ಅವರು ಮಾತನಾಡಿ, ಇತಿಹಾಸ ಹಾಗೂ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮ್ಮಲ್ಲಿ ಹೆಣ್ಣು ಮಕ್ಕಳಿಗೆ ನಿರೀಕ್ಷಿತ ಸ್ಥಾನ ಮಾನ ಸಿಕ್ಕಿಲ್ಲವೆಂಬ ಸತ್ಯ ಅರಿವಾಗುತ್ತದೆ ಎಂದರು. ನಾವು ವೈಜ್ಞಾನಿಕವಾಗಿ ಬಹಳಷ್ಟು ಮುಂದುವರಿದಿದ್ದರೂ ನಿಸರ್ಗಕ್ಕೆ ತನ್ನದೇ ಆದ ಶಕ್ತಿಯಿದೆ. ಮಾನವನ ಸ್ವಾರ್ಥದಿಂದ ನೈಸರ್ಗಿಕ ಜೀವನ ದುರ್ಬಳಕೆಯಾದಾಗ ಜೀವನ ಸಮತೋಲನ ತಪ್ಪುತ್ತದೆ; ಹೀಗಾದಾಗ ದುರಂತಗಳು ಸಂಭವಿಸುತ್ತದೆ. ಕಾನೂನುಗಳು ಸಮಯಕ್ಕೆ ಅನುಗುಣವಾಗಿ ಬದಲಾಗುವ ಅಗತ್ಯವಿದ್ದು, ಇಂತಹ ಕಾರ್ಯಾಗಾರಗಳಲ್ಲಿ ಅಭಿಪ್ರಾಯಗಳು ರೂಪುಗೊಂಡು ಅವುಗಳು ಕಾನೂನುಗಳಾಗುವಂತೆ ಅಥವಾ ಕಾನೂನಿನಲ್ಲಿ ಸೂಕ್ತ ಮಾರ್ಪಾಡುಗಳಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ಅನಿಷ್ಠ ಸಂಪ್ರದಾಯವಾದ ಭ್ರೂಣಹತ್ಯೆ ತಡೆಗೆ ಎಲ್ಲರ ಸಹಕಾರ ಅಗತ್ಯವಿದ್ದು, ಇದರಿಂದ ಮಾತ್ರ ಉತ್ತಮ ಸಮಾಜ ಸಾಧ್ಯ ಎಂದು ಹೇಳಿದರು. ಕಾರ್ಯಾಗಾರದಲ್ಲಿ ವಸ್ತುನಿಷ್ಠ ಸಮಸ್ಯೆಗಳು ಮತ್ತು ಕಾನೂನಿನ ಬಗ್ಗೆಯೂ ಸಾಕಷ್ಟು ಚರ್ಚೆ ನಡೆಯಿತು.
ಮುಖ್ಯ ಅತಿಥಿಗಳಾಗಿದ್ದ ರಾಜ್ಯ ಕಾನೂನು ಸಲಹೆಗಾರರಾದ ಶ್ರೀಮತಿ ರಾಜೇಶ್ವರಿ ದೇವಿ ಅವರು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ಲೈಂಗಿಕ ಅಸಮತೋಲನದ ಬಗ್ಗೆ ವಿವರವನ್ನು ನೀಡಿದರು. ಇವರ ಪ್ರಕಾರ ಚಾಮರಾಜ ನಗರ ಉಳಿದೆಲ್ಲ ಜಿಲ್ಲೆಗಳಿಗೆ ಮಾದರಿಯಾಗಿದ್ದು, ಮುಂದುವರಿದವರೆಂದು ಹೇಳಿಕೊಳ್ಳುವ ಎಲ್ಲರೂ ಸೋಲಿಗರಿಂದ ಕಲಿಯಬೇಕಾದ ಹಲವು ವಿಷಯಗಳನ್ನು ಕಾರ್ಯಾಗಾರದಲ್ಲಿ ವಿವರಿಸಿದರು. ಕೋಲಾರ ಹಿಂದುಳಿದ ಜಿಲ್ಲೆಯಾದರೂ ಇಲ್ಲಿ ಹೆಣ್ಣು ಗಂಡುಗಳ ಪ್ರಮಾಣ ಉತ್ತಮವಾಗಿದೆ. ಜಿಲ್ಲೆಯಲ್ಲಿ ಪ್ರಸವ ಪೂರ್ವ ಲಿಂಗಪತ್ತೆಯ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಮತ್ತು ಡಾಕ್ಟರುಗಳು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ಮಾಹಿತಿಯನ್ನು ನೀಡಿದರು. ಮುಖ್ಯ ನ್ಯಾಯಾಧೀಶರಾದ ಶ್ರೀ ಶಿವಲಿಂಗೇಗೌಡ, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ನ ಶ್ರೀಮತಿ ಹಿಲ್ಡಾ ರಾಯಪ್ಪನ್, ಕೆ ಎಂ ಸಿ ಪ್ರೊಫೆಸರ್ ಡಾ. ರತಿದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಕುಂತಳಾ ಡಾ. ಮೋಹನ್ ದಾಸ್ ಭಂಡಾರಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಜಗನ್ನಾಥ್ ಅವರು ಸ್ವಾಗತಿಸಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಭ್ರೂಣ ಹತ್ಯೆ ರಹಿತ ಜಿಲ್ಲೆಯಾಗಲಿ ದ.ಕ ಎಂಬ ಆಶಯದೊಂದಿಗೆ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ ರುಕ್ಮಿಣಿ ಅವರು ತಮ್ಮ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಕು. ಸ್ಮಿತ ಪ್ರಾರ್ಥಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ರಾಮಕೃಷ್ಣ ವಂದಿಸಿದರು. ಕಾರ್ಯಾಗಾರದಲ್ಲಿ ರೇಡಿಯಾಲಜಿಸ್ಟ್ ಡಾ. ರಾಘವೇಂದ್ರ ಭಟ್, ಲೇಡಿಗೋಷನ್ ಆಸ್ಪತ್ರೆಯ ಡಾಕ್ಟರ್ ಗಳು ಪ್ರಸಕ್ತ ಸಮಸ್ಯೆಗಳನ್ನು ಕಾನೂನು ಸಲಹೆಗಾರರಿಗೆ ಮನವರಿಕೆ ಮಾಡಿದರು.

Saturday, May 30, 2009

ಪರ್ಯಾಯ ಗೊಬ್ಬರ ಬಳಕೆಗೆ ರೈತರಿಗೆ ಸಲಹೆ

ಮಂಗಳೂರು, ಮೇ 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೂರಿಯಾ, ಡಿಎಪಿ, ರಾಕ್ ಪಾಸ್ಫೇಟ್ ಮತ್ತು ಎಂಒಪಿ ಗೊಬ್ಬರ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ರೈತರು ಸಂಯುಕ್ತ ಗೊಬ್ಬರಗಳ ಮೇಲೆ ಅವಲಂಬಿತರಾಗದೆ ಸಾಕಷ್ಟು ಪ್ರಮಾಣದಲ್ಲಿ ದೊರೆಯುವ ಯೂರಿಯಾ, ಡಿಎಪಿ, ರಾಕ್ ಪಾಸ್ಫೇಟ್ ಮತ್ತು ಎಂ ಓ ಪಿ ರಸಗೊಬ್ಬರಗಳಿಂದ ಸ್ವತ: ನಾನಾ ತರಹದ ಮಿಶ್ರಣಗಳನ್ನು ತಯಾರಿಸಬಹುದು.
ಈ ಬಗ್ಗೆ ಮಾಹಿತಿಯನ್ನು ರೈತರು ಜಂಟಿ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆಯಬಹುದಾಗಿದ್ದು, ಮಿಶ್ರಣ ಗೊಬ್ಬರದಿಂದ ಲಭ್ಯವಾಗುವ ಪೋಷಕಾಂಶಗಳ ಪ್ರಮಾಣದ ಬಗ್ಗೆಯೂ ಇಲಾಖೆಯಲ್ಲಿ ಹಸ್ತಪ್ರತಿಗಳು ಲಭ್ಯವಿದ್ದು, ರೈತರು ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ.

Thursday, May 28, 2009

ಜಿ. ಪಂ. ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ

ಮಂಗಳೂರು, ಮೇ 28:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಹಂಗಾಮಿ ಅಧ್ಯಕ್ಷರಾಗಿ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷ ಶ್ರೀ ವೆಂಕಟ್ ದಂಬೆಕೋಡಿ ಅವರು ಮೇ 28ರಂದು ಅಧಿಕಾರ ಸ್ವೀಕರಿಸಿದರು.

ಕ್ರಿಯಾಶೀಲ ಚಟುವಟಿಕೆಗೆ ಸಂಪೂರ್ಣ ಸಹಕಾರದ ಭರವಸೆಯೊಂದಿಗೆ ಮಾಜಿ ಅಧ್ಯಕ್ಷ ಶ್ರೀ ಸುಚರಿತ ಶೆಟ್ಟಿ ಅವರು ದಂಬೆಕೋಡಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

Wednesday, May 27, 2009

ಕರಾವಳಿ ಕಾವಲು ಪಡೆಗೆ ನೂತನ ಸ್ಪೀಡ್ ಬೋಟ್



ಮಂಗಳೂರು, ಮೇ. 27: ಪ್ರಸಕ್ತ ಸನ್ನಿವೇಶದಲ್ಲಿ ಕರಾವಳಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದರಡಿ 5 ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಕರಾವಳಿ ಕಾವಲು ಪಡೆಯನ್ನು ಸದೃಢಗೊಳಿಸಲು ಭವಿಷ್ಯದಲ್ಲಿ ಇನ್ನೂ 4 ಪೊಲೀಸ್ ಠಾಣೆಗಳನ್ನು 12 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗುವುದು ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಗೋಪಾಲ್ ಬಿ. ಹೊಸೂರ್ ಹೇಳಿದರು.
ಅವರು ಇಂದು ನವಮಂಗಳೂರು ಬಂದರು ಪಣಂಬೂರಿನಲ್ಲಿ ಕರಾವಳಿ ಕಾವಲು ಪಡೆಗೆ ನೂತನ ಸ್ಪೀಡ್ ಬೋಟನ್ನು ಕರ್ತವ್ಯಕ್ಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಮುಂದಿನ ದಿನಗಳಲ್ಲಿ ಭಟ್ಕಳ ಮತ್ತು ಮಂಗಳೂರಿನಲ್ಲಿ ಕರಾವಳಿ ಕಾವಲು ಪಡೆಯ ಉಪವಿಭಾಗ ತೆರೆಯಲಾಗುವುದಲ್ಲದೆ, ಕರಾವಳಿಯ ಭದ್ರತೆಗೆ ಗುಪ್ತಚರ ಇಲಾಖೆಯ ಸಹಾಯ ಪಡೆದು ಕರ್ತವ್ಯ ನಿರ್ವಹಿಸಲಾಗುವುದು. ಭದ್ರತಾ ಲೋಪಕ್ಕೆ ಅವಕಾಶ ನೀಡದಿರಲು ಸ್ಥಳೀಯ ಮಾಹಿತಿ ಸಂಗ್ರಹ ಹಾಗೂ ಮೀನುಗಾರರ ನೆರವನ್ನು ಪಡೆಯಲಾಗುವುದು ಎಂದ ಅವರು, ಭದ್ರತೆಗೆ ನೆರವು ನೀಡುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲುಇಲಾಖೆ ಕ್ರಮಕೈಗೊಳ್ಳಲಿದೆ ಎಂದರು.
ಸಮಾರಂಭದಲ್ಲಿ ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ತಮಿಳ್ ವಾಣನ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಕರಾವಳಿಕಾವಲು ಪಡೆಯ ಸಹಾಯಕ ಕಮಾಂಡೆಂಟ್ ಅಜಯಕುಮಾರ್ ಮುಗ್ದಲ್ ಉಪಸ್ಥಿತರಿದ್ದರು. ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಎಚ್. ಆರ್. ಭಗವಾನ್ ದಾಸ್ ಸ್ವಾಗತಿಸಿ, ಕರಾವಳಿ ಕಾವಲು ಪೊಲೀಸ್ ಠಾಣೆಯ ನಿರೀಕ್ಷಕ ಮುಕುಂದ್ ನಾಯಕ್ ವಂದಿಸಿದರು.

ಕಳವಾರ್ ಪದವಿನಲ್ಲಿ ಕಚ್ಚಾತೈಲ ಸಂಗ್ರಹಣಾಗಾರಕ್ಕೆ ಭೂಮಿಪೂಜೆ


ಮಂಗಳೂರು, ಮೇ 27: ದೇಶದ ಇಂಧನ ಭದ್ರತೆ ಯೋಜನೆಯಡಿ ಮಂಗಳೂರಿನ ಕಳವಾರು ಪದವಿನಲ್ಲಿ 1.5 ಮೆಟ್ರಿಕ್ ಟನ್ ಗಳಷ್ಟುಕಚ್ಚಾ ತೈಲ ಸಂಗ್ರಹಿಸುವ ಯೋಜನೆಗೆ ಇಂದು(ಮೇ27)ಭೂಮಿ ಪೂಜೆ ನೆರವೇರಿಸಲಾಯಿತು.ಸುಮಾರು ಒಂದು ಸಾವಿರ ಕೋಟಿ ರೂ.ಗಳ ಯೋಜನೆ ಇದಾಗಿದ್ದು, 2012ರಲ್ಲಿ ಕಾರ್ಯಾರಂಭ ಮಾಡಲಿದೆ. ಈಗ ಈ ಉದ್ದೇಶಕ್ಕಾಗಿ 82 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಇನ್ನು 18 ಎಕರೆ ಭೂಸ್ವಾಧೀನಕ್ಕೆ ಕ್ರಮಕೈಗೊಳ್ಳಲಾಗಿದೆ.
ದಕ್ಷಿಣ ಕೊರಿಯಾ ಇಂಜಿನಿಯರಿಂಗ್ ಕಂಪೆನಿ ಮತ್ತು ದೆಹಲಿಯ ಕರಮ್ ಚಂದ್ ಥಾಪರ್ ಕಂಪೆನಿಗಳು ಜಂಟಿಯಾಗಿ ಯೋಜನಾ ಕಾರ್ಯವನ್ನು ಕೈಗೊಂಡಿದ್ದು, ಈ ತೈಲಾಗಾರ ದೇಶದ 14 ದಿನಗಳ ಅಗತ್ಯವನ್ನು ಪೂರೈಸಲಿದೆ. ಇಂತಹುದೇ ತೈಲಾಗಾರಗಳು ಉಡುಪಿಯ ಪದೂರು ಮತ್ತು ವಿಶಾಖಾಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿದ್ದು, ಇಲ್ಲಿ 5 ಮಿಲಿಯನ್ ಮೆಟ್ರಿಕ್ ಟನ್ ಗಳಷ್ಟು ಕಚ್ಚಾ ತೈಲ ಸಂಗ್ರಹ ಸಾಧ್ಯವಾಗಲಿದೆ.
ಭೂಮಿ ಪೂಜೆಯನ್ನು ಎಂಎಸ್ಇಝಡ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎ. ಜಿ. ಪೈ ನೆರವೇರಿಸಿದರು. ಭೂಸ್ವಾಧೀನಾಧಿಕಾರಿ ಕೃಷ್ಣಮೂರ್ತಿ, ಇಂಜಿನಿಯರ್ ಎಸ್. ಶ್ರೀನಿವಾಸನ್, ವಿಜಯಾನಂದ, ಉತ್ಪಾದನಾ ಘಟಕದ ವ್ಯವಸ್ಥಾಪಕ ಕುಂಗ್ ಹಿ ಕಿಮ್ ಸೇರಿದಂತೆ ಯೋಜನಾ ಸಂಬಂಧಿ ಅಧಿಕಾರಿಗಳು ಭೂಮಿ ಪೂಜೆಯಲ್ಲಿ ಪಾಲ್ಗೊಂಡರು.

Tuesday, May 26, 2009

ಕೃಷಿಕರಿಗೆ 120.79 ಕ್ವಿಂಟಾಲ್ ಭತ್ತದ ಬೀಜ ವಿತರಣೆ


ಮಂಗಳೂರು, ಮೇ 26:ದಕ್ಷಿಣ ಕನ್ನಡ ಜಿಲ್ಲೆಗೆ ಮುಂಗಾರು ಮಳೆ ಪ್ರವೇಶದ ಮುನ್ಸೂಚನೆಗಳು ದೊರೆತಿದ್ದು, ಮಳೆಯಾಧಾರಿತ ಭತ್ತದ ಕೃಷಿ ಹಾಗೂ ಉಪಬೆಳೆಗಳನ್ನು ಬೆಳೆಯುವ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಜಿಲ್ಲೆಯಲ್ಲಿ ಕೃಷಿ ಇಲಾಖೆ ಈಗಾಗಲೇ 120.79 ಕ್ವಿಂಟಾಲ್ ಭತ್ತದ ಬೀಜವನ್ನು ವಿತರಿಸಿದ್ದು, ರೈತರಿಂದ ಬೇಡಿಕೆಯ ಪ್ರಮಾಣವನ್ನು ಆಧರಿಸಿ ಭತ್ತದ ತಳಿಗಳನ್ನು ಮತ್ತು ರಸಗೊಬ್ಬರವನ್ನು ಪೂರೈಸಲು ಕೃಷಿ ಇಲಾಖೆ ಸಜ್ಜಾಗಿದೆ.
ರಾಷ್ಟ್ರೀಯ ವಿಕಾಸ ಯೋಜನೆಯಡಿ ಬೀಜಗಳನ್ನು ಶೇಕಡ 50ರ ರಿಯಾಯಿತಿ ದರದಲ್ಲಿ ಕ್ರಷಿ ಇಲಾಖೆ ನೀಡುತ್ತಿದ್ದು, ರೈತರು ಯೋಜನೆಯ ಸದುಪಯೋಗವನ್ನು ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಶೇ.20ರಿಂದ 30ರಷ್ಟು ಸಸಿಮಡಿ(ನರ್ಸರಿ)ಕೆಲಸ ಆರಂಭಗೊಂಡಿದ್ದು,ಜೂನ್ ಮೊದಲ ವಾರದಲ್ಲಿ ನಾಟಿ ಆರಂಭವಾಗಬಹುದು. ಜಿಲ್ಲೆಯಲ್ಲಿ ಒಟ್ಟು 35,000 ಹೆಕ್ಟೇರ್ ಭತ್ತ ಬೆಳೆಯುವ ಗುರಿ ನಿಗದಿಯಾಗಿದ್ದು, ಕಳೆದ ಸಾಲಿನಲ್ಲಿ 32,845ಹೆಕ್ಟೇರ್ ಭತ್ತದ ಬೆಳೆಯಲಾಗಿತ್ತು. ರೈತರು ಅಧಿಕ ಇಳುವರಿ ಬೆಳೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಕಳೆದ ಮುಂಗಾರು ಹಂಗಾಮಿನಲ್ಲಿ ಮಂಗಳೂರು ತಾಲೂಕಿನಲ್ಲಿ 12,510 ಹೆಕ್ಟೇರ್ ಪ್ರದೇಶದ ಗುರಿಯಲ್ಲಿ 11,728 ಹೆಕ್ಟೇರ್ ಪ್ರದೇಶದಲ್ಲಿ, ಬಂಟ್ವಾಳದಲ್ಲಿ 9,600 ಹೆ. ಕೃಷಿಪ್ರದೇಶದಲ್ಲಿ 9,372ಹೆಕ್ಟೇರ್ ಪ್ರದೇಶದಲ್ಲಿ, ಬೆಳ್ತಂಗಡಿಯ 8,500 ಹೆಕ್ಟೇರ್ ನಲ್ಲಿ 8285 ಹೆಕ್ಟೇರ್ ನಲ್ಲಿ, ಪುತ್ತೂರಿನ 3.900 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ 2975 ಹೆಕ್ಟೇರ್ ನಲ್ಲಿ, ಸುಳ್ಯದ 490 ಹೆಕ್ಟೇರ್ ಪ್ರದೇಶದಲ್ಲಿ 485 ಹೆಕ್ಟೇರ್ ನಲ್ಲಿ ಭತ್ತವನ್ನು ಬೆಳೆಯಲಾಗಿತ್ತು.
ಪ್ರಸಕ್ತ ಸಾಲಿನಲ್ಲಿಯೂ ಇದೇ ಗುರಿಯನ್ನು ನಿಗದಿಪಡಿಸಲಾಗಿದ್ದು, ರೈತರಿಗೆ ಹಲವು ಸೌಲಭ್ಯಗಳನ್ನು ಸರ್ಕಾರ ಘೋಷಿಸಿದೆ. ಭತ್ತದ ಬೀಜ ವಿತರಣೆಯಲ್ಲಿ ಮಂಗಳೂರು ತಾಲೂಕಿನಲ್ಲಿ 52.04 ಕ್ವಿಂಟಾಲ್, ಬಂಟ್ವಾಳದಲ್ಲಿ 36.50, ಬೆಳ್ತಂಗಡಿಯಲ್ಲಿ 18.75 ಕ್ವಿಂಟಾಲ್, ಪುತ್ತೂರಿನಲ್ಲಿ 6 ಕ್ವಿಂಟಾಲ್, ಸುಳ್ಯದಲ್ಲಿ 7.50 ಕ್ವಿಂಟಾಲ್ ನಂತೆ ಒಟ್ಟು 120.79 ಕ್ವಿಂಟಾಲ್ ಭತ್ತದ ಬೀಜವನ್ನು ಶೇಕಡಾ 50ರ ರಿಯಾಯಿತಿ ದರದಲ್ಲಿ ವಿತರಿಸಲಾಗಿದೆ. ಒಟ್ಟು 297 ಫಲಾನುಭವಿಗಳು ಈ ಸೌಲಭ್ಯವನ್ನು ಬಳಸಿಕೊಂಡಿದ್ದು, 290.71 ಕ್ವಿಂಟಾಲ್ ಭತ್ತದ ಬೀಜ ದಾಸ್ತಾನಿದೆ.
ಜಯಾ ತಳಿಗೆಕೆ.ಜಿಗೆ 18 ರೂ.ಗಳಿದ್ದು, ರಿಯಾಯಿತಿ ದರದಲ್ಲಿ 9ರೂ.ನಂತೆ, ಎಂ ಒ 4ಕ್ಕೆ 20ರೂ.ಗಳಿದ್ದು,ರಿಯಾಯಿತಿ ದರ 10ರೂ., ಜ್ಯೋತಿ 19ರೂ.ಗಳಿದ್ದು, ರಿಯಾಯಿತಿ ದರ 9.50, ಉಮಾ 20ರೂ.ಗಳಿದ್ದು, ರಿಯಾಯಿತಿ ದರ 10ರೂ.ಗಳಂತೆ ರೈತರಿಗೆ ವಿತರಿಸಲಾಗಿದೆ. ರೈತರಿಂದ ಬರುವ ಬೇಡಿಕೆಯನ್ನು ಅನುಸರಿಸಿ ಅಗತ್ಯ ಬೀಜಗಳನ್ನು ಸರಬರಾಜು ಮಾಡಲಾಗುವುದು ಎಂದಿರುವ ಕೃಷಿ ಇಲಾಖೆ, ಪ್ರಸಕ್ತ ಸಾಲಿನಲ್ಲಿಯೂ ಭತ್ತದ ಬೆಳೆಯನ್ನು ಪ್ರೋತ್ಸಾಹಿಸಲು ಹಲವು ಪ್ರಶಸ್ತಿಗಳನ್ನು ಘೋಷಿಸಿದೆ.
ಬೆಳೆ ಪ್ರಶಸ್ತಿ ಯೋಜನೆಯಡಿ ರೈತರಿಗೆ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು ರೈತ ಸಂಪರ್ಕ ಕೇಂದ್ರದಿಂದ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಪಡೆದು ಆಗಸ್ಟ 31ರೊಳಗೆ ಸಲ್ಲಿಸಲು ಕೋರಿದೆ.
ಕೃಷಿ ಪಂಡಿತ ಪ್ರಶಸ್ತಿಯಡಿ ಕೃಷಿ ನಿರ್ದೇಶನಾಲಯಕ್ಕೆ ಅರ್ಜಿ ಸಲ್ಲಿಸಲು 15.6.09 ಕೊನೆಯ ದಿನವಾಗಿದ್ದು, ಅರ್ಜಿಗಳು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದೆ.
ಬೆಳೆವಿಮೆ: ಮಳೆಯಾಶ್ರಿತ ಭತ್ತಕ್ಕೆ ಬೆಳೆವಿಮೆಯಡಿ ನೋಂದಾಯಿಸಿಕೊಳ್ಳಲು ರೈತರಿಗೆ ಅವಕಾಶವಿದ್ದು, ಒಂದು ಹೆಕ್ಟೇರ್ ಗೆ ಪ್ರೀಮಿಯಂ 365 ರೂ.ಗಳಂತೆ ಆಸಕ್ತ ರೈತರು ತಮ್ಮ ಹೆಸರನ್ನು ಸ್ಥಳೀಯ ಸಹಕಾರಿ ಬ್ಯಾಂಕ್ ಅಥವಾ ಸಂಘಗಳಲ್ಲಿ 31.7.09ರೊಳಗೆ ನೋಂದಾಯಿಸಲು ಅವಕಾಶವಿದೆ.
ಇನ್ನು ಸಾವಯವ ಕೃಷಿ ಮಿಷನ್ ಯೋಜನೆ ಪ್ರಸಕ್ತ ಸಾಲಿನಲ್ಲಿ ಜಾರಿಗೊಂಡಿದ್ದು, ಪ್ರತೀ ತಾಲೂಕಿಗೆ 24.5 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ರೈತರು ಈ ಸಂಬಂಧ ಹೆಚ್ಚಿನ ಮಾಹಿತಿಗೆ ತಾಲೂಕು ಮಟ್ಟದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ ಯೋಜನೆಯ ಸದ್ಬಳಕೆ ಮಾಡಬಹುದಾಗಿದೆ.

Monday, May 25, 2009

ಮಧ್ಯವರ್ತಿಗಳ ಹಾವಳಿ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

ಮಂಗಳೂರು, ಮೇ 25: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೆ ನೇರವಾಗಿ ಮೂಡಾದ ಅಧ್ಯಕ್ಷರು, ಆಯುಕ್ತರು ಮತ್ತು ನಗರ ಯೋಜನಾ ಸದಸ್ಯರನ್ನು ಭೇಟಿ ಮಾಡಬಹುದು ಎಂದು ಮೂಡಾ ಅಧ್ಯಕ್ಷ ಡಾ. ಮಾಧವ ಭಂಡಾರಿ ಅವರು ಹೇಳಿದ್ದಾರೆ.
ಕೆಲಸ ಮಾಡಿಸಿಕೊಡುವುದಾಗಿ ಹೇಳಿಕೊಳ್ಳುವ ಮಧ್ಯವರ್ತಿಗಳು ಸಾರ್ವಜನಿಕರಿಂದ ಹಣವನ್ನು ದೋಚಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಸಾರ್ವಜನಿಕರು ಇಂತಹ ಘಟನೆಗಳಿಗೆ ಅವಕಾಶ ಮಾಡಿಕೊಡದೆ ನೇರವಾಗಿ ಮೂಡಾದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Sunday, May 24, 2009

287 ಫಲಾನುಭವಿಗಳಿಗೆ 68 ಲಕ್ಷ ರೂ. ಸಾಲ ಸೌಲಭ್ಯ ವಿತರಣೆ

ಮಂಗಳೂರು, ಮೇ 24: ಅಭಿವೃದ್ಧಿಯೇ ರಾಜ್ಯ ಸರ್ಕಾರದ ಮೂಲಮಂತ್ರವಾಗಿದ್ದು,ಅದರಲ್ಲೂ ಬಡವರು ಮತ್ತು ಗ್ರಾಮೀಣಾಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ; ಬಡವರ ಅಭಿವೃದ್ಧಿಗಾಗಿ ಹಮ್ಮಿಕೊಂಡಿರುವ ಹಲವು ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ವಿತರಿಸುವ ಸಾಲಸೌಲಭ್ಯವೂ ಒಂದಾಗಿದ್ದು, ಅರ್ಹರು ಯೋಜನೆಗಳ ಸದುಪಯೋಗವನ್ನು ಪಡೆಯಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣಪಲೇಮಾರ್ ಹೇಳಿದರು.
ಅವರು ಮೇ 23ರಂದು ಬಂಟ್ವಾಳದ ಲಯನ್ಸ್ ಕ್ಲಬ್ ನಲ್ಲಿ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ಮತ್ತು ದಿ. ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮ ಏರ್ಪಡಿಸಿದ್ದ ಫಲಾನುಭವಿಗಳಿಗೆ ಚೆಕ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಿಗಮದ ವತಿಯಿಂದ ಗಂಗಾ ಕಲ್ಯಾಣ,ಶ್ರಮ ಶಕ್ತಿ ಮತ್ತು ಮೈಕ್ರೋ ಫೈನಾನ್ಸ್ ಯೋಜನೆಯಡಿ 287 ಫಲಾನುಭವಿಗಳನ್ನು ಗುರುತಿಸಿ 68 ಲಕ್ಷ ರೂ.ಸಾಲಸೌಲಭ್ಯವನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ಶಾಸಕ ಶ್ರೀ ರಮಾನಾಥ ರೈ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಬಿ. ನಾಗರಾಜ ಶೆಟ್ಟಿ, ಮಂಗಳೂರು ಎಂ ಎಲ್ ಎ ಯು ಟಿ ಖಾದರ್, ಬಂಟ್ವಾಳ ನಿಗಮದ ಅಧ್ಯಕ್ಷ ಎನ್. ಬಿ. ಅಬೂಬಕ್ಕರ್, ತಾ.ಪಂ.ನಿಕಟಪೂರ್ವ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ,ಪುರಸಭೆಯ ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಭಾಗವಹಿಸಿದ್ದರು. ನಿಗಮದ ಜಿಲ್ಲಾ ವ್ಯವಸ್ಥಾಪಕ ಶ್ರೀ ಎಸ್ ಡಿ ಸೋಮಪ್ಪ ಸ್ವಾಗತಿಸಿದರು.

Friday, May 22, 2009

ಸಾಲಸೌಲಭ್ಯ ಚೆಕ್ ವಿತರಣೆ

ಮಂಗಳೂರು, ಮೇ 22: ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಸಾಲ ಸೌಲಭ್ಯ ಚೆಕ್ ಗಳನ್ನು 23ರಂದು ಸಂಜೆ 4.30ಕ್ಕೆ ಲಯನ್ಸ್ ಕ್ಲಬ್ ಬಂಟ್ವಾಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಪಲೇಮಾರ್ ಅವರು ವಿತರಿಸುವರು.

Thursday, May 21, 2009

ಜೂನ್ ಆರರಿಂದ ಮತ್ತೆ ಶನಿವಾರಗಳಂದು ಜನಸ್ಪಂದನ

ಮಂಗಳೂರು, ಮೇ 21: ಸರ್ಕಾರವೇ ಗ್ರಾಮೀಣ ಜನರ ಬಳಿಗೆ ತೆರಳುವ ವಿಶಿಷ್ಟ ಕಾರ್ಯಕ್ರಮ ಜನಸ್ಪಂದನ; ಗ್ರಾಮೀಣರು ತಮ್ಮ ಕುಂದುಕೊರತೆಗಳ ನಿವಾರಣೆಗೆ ಜಿಲ್ಲಾ ಕೇಂದ್ರಕ್ಕೆ ಆಗಾಗ ಬರುವ ಕಷ್ಟವನ್ನು ತಪ್ಪಿಸಲು ಹಮ್ಮಿಕೊಂಡಿರುವ ಜನಸ್ಪಂದನ ಕಾರ್ಯಕ್ರಮ ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದ ಕಾರಣ ತಾತ್ಕಾಲಿಕವಾಗಿ ರದ್ದುಗೊಂಡಿತ್ತು. ಈಗ ಮತ್ತೆ ಜಿಲ್ಲೆಯಲ್ಲಿ 6.6.09ರ ಶನಿವಾರದಿಂದ ಎಂದಿನಂತೆ ಪ್ರತಿ ಶನಿವಾರ (ಎರಡನೇ ಶನಿವಾರ ಹೊರತು ಪಡಿಸಿ) ಹೋಬಳಿ ಮಟ್ಟದ ಜನಸ್ಪಂದನ ಸಭೆಗಳು ನಡೆಯಲಿವೆ ಎಂದು ಸರ್ಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Monday, May 18, 2009

ಜಿಲ್ಲಾ ಉಸ್ತುವಾರಿ ಸಚಿವರಿಂದ ಸಂತಾಪ


ಮಂಗಳೂರು, ಮೇ 18: ರಾಷ್ಟ್ರೀಯ ಹೆದ್ದಾರಿ 48ರ ನೆಲ್ಯಾಡಿ ಸಮೀಪದ ಉದನೆ ಪರಿಸರದಲ್ಲಿ ಇಂದು ನಸುಕಿನ ವೇಳೆ 5 ಗಂಟೆಗೆ ಸಂಭವಿಸಿದ ಕೆ ಎಸ್ ಆರ್ ಟಿ ಸಿ ಐರಾವತ ಬಸ್ ಹಾಗೂ ಟಿಂಬರ್ ಲಾರಿ ನಡುವೆ ಅಪಘಾತದಲ್ಲಿ 5 ಮಂದಿ ಮೃತಪಟ್ಟಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಅಪಘಾತದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೀವಿಶಾಸ್ತ್ರ, ಪರಿಸರ, ಬಂದರು, ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರು ಖೇದ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಈಗಾಗಲೇ ಮೃತರ ಕುಟುಂಬಕ್ಕೆ 2.5 ಲಕ್ಷ ರೂ. ಪರಿಹಾರ ಘೋಷಿಸಲಾಗಿದ್ದು, ಗಾಯಾಳುಗಳ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ರಸ್ತೆಯಲ್ಲಿ ಅನಧಿಕೃತ ವಾಹನ ನಿಲುಗಡೆಯಿಂದ ಈ ಅಪಘಾತ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರಿಂದ ರಸ್ತೆ ಇಕ್ಕೆಲಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದ್ದು, ಈ ಪ್ರದೇಶದಲ್ಲಿ ಶಾಶ್ವತ ಹೆದ್ದಾರಿ ಗಸ್ತುಪಡೆ ನಿಯೋಜನೆಗೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದ ಅವರು, ತಕ್ಣಣದ ಕ್ರಮಕ್ಕೆ ಈ ಸಂಬಂಧ ಉಪ್ಪಿನಂಗಡಿ ಪೊಲೀಸರಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

Saturday, May 16, 2009

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ತೆಕ್ಕೆಗೆ

ಮಂಗಳೂರು,ಮೇ 16: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗಳಿದಿದ್ದ 11 ಅಭ್ಯರ್ಥಿಗಳಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು 40,420 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ.
ಇಂದು ನಗರದ ಕೆನರ ಕಾಲೇಜಿನಲ್ಲಿ ಅತ್ಯಂತ ಸುವ್ಯವಸ್ಥಿತವಾಗಿ ನಡೆದ ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಪ್ರತೀ ಬೂತ್ ವೈಸ್ ಮತ ಎಣಿಕೆ ಎಲಕ್ಟ್ರಾನಿಕೆ ಪರದೆಯ ಮೇಲೆ ಮೂಡಿಬಂತು. ಒಟ್ಟು 16 ಸುತ್ತುಗಳ ಮತ ಎಣಿಕೆ ಕಾರ್ಯದಲ್ಲಿ ಬಿಜೆಪಿ ಅಭ್ಯರ್ಥಿ 499385ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಜನಾರ್ಧನ ಪೂಜಾರಿ ಅವರು 458965 ಮತಗಳನ್ನು ಪಡೆದರು. ಭಾರತೀಯ ಕಮ್ಯುನಿಸ್ಟ್ ಪಕ್ಷದ ಬಿ. ಮಾಧವ ಅವರು 18328ಮತಗಳನ್ನು ಪಡೆದರು. ಬಹುಜನ ಸಮಾಜ ಪಕ್ಷದ ಅಲೆಕ್ಕಾಡಿ ಗಿರೀಶ್ ರೈ ಅವರಿಗೆ 10196, ಪಕ್ಷೇತರ ಕುಮಾರ ಕುಂಟಿಕಾನ್ ಅವರಿಗೆ 8932,ಕೆ. ಉರಿಮಜಲು ರಾಮಭಟ್ ಅವರಿಗೆ 5960, ಡಾ. ಯು ಪಿ ಶಿವಾನಂದ ಅವರು 4825,ವಾಸುದೇವ ಗೌಡ ಎಂ.ಪಿ ಅವರಿಗೆ 3180, ವಿಚಾರವಾದಿ ಆನಂದಗಟ್ಟಿ ಅವರಿಗೆ 2373, ಮಹಮದ್ ಸಾಲಿ ಅವರಿಗೆ 1977, ಡಾ. ತಿರುಮಲರಾಯ ಹಳೆಮನೆ ಅವರಿಗೆ 1801ಮತಗಳು ದೊರೆತಿವೆ.ಒಟ್ಟು 1015922 ಮತಗಳು ಚಲಾವಣೆಯಾಗಿದ್ದು, 635 ಅಂಚೆ ಮತಪತ್ರಗಳಲ್ಲಿ 211 ತಿರಸ್ಕೃತಗೊಂಡಿದೆ.ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರು ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯರ್ಥಿ ಶ್ರೀ ನಳಿನ್ ಕುಮಾರ್ ಕಟೀಲ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಿದರು.

Friday, May 15, 2009

ಮತ ಎಣಿಕೆಗೆ ಅಂತಿಮ ಹಂತದ ಸಿದ್ಧತೆ ಪೂರ್ಣ

ಮಂಗಳೂರು, ಮೇ 15: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ಮೇ 16ರಂದು ನಡೆಯಲಿದ್ದು, ಅಂತಿಮ ಹಂತದ ಸಿದ್ದತೆಗಳು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್ ಅವರ ನೇತೃತ್ವದಲ್ಲಿ ನಡೆಯಿತು. ಮತ ಎಣಿಕೆ ಕಾರ್ಯ ಯಾವುದೇ ಗೊಂದಲಗಳಿಲ್ಲದೆ ನಿರ್ವಿಘ್ನವಾಗಿ ನಡೆಯಲು ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆ ಮಾಧ್ಯಮ ಕೇಂದ್ರದಲ್ಲಿ ನಡೆಯಿತು.
ಎಣಿಕೆ ಕೇಂದ್ರದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಮಾಕ್ ಟೆಸ್ಟ್ ಪ್ರಾಯೋಗಿಕವಾಗಿ, ಯಶಸ್ವಿಯಾಯಿತು. ಇದೇ ಸಂದರ್ಬದಲ್ಲಿ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್ ಅವರು ಎಣಿಕೆ ಕೇಂದ್ರಕ್ಕೆ ಅಗಮಿಸಿ ಬಂದೋಬಸ್ತ್ ವ್ಯವಸ್ಥೆಯನ್ನು ಪರಿಶೀಲಿಸಿ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಜಿಲ್ಲಾ ಕೇಂದ್ರ ಸ್ಥಾನಿಕ ಸಹಾಯಕರಾದ ಶ್ರೀ ಪ್ರಭಾಕರ್ ಶರ್ಮಾ ಅವರು ಕೇಂದ್ರದಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸುವ ಹೊಣೆಯನ್ನು ಹೊತ್ತಿದ್ದರಲ್ಲದೆ ಎಲ್ಲರಿಗೂ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ಮಾಧ್ಯಮದವರಿಗೆ ಮಾಧ್ಯಮ ಕೇಂದ್ರದಲ್ಲಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಂತಿಮ ಕ್ಷಣದವರೆಗೂ ಸಂಬಂಧಿಸಿದ ಸಿಬ್ಬಂದಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ. ಗಣಕೀಕರಣ ವ್ಯವಸ್ಥೆಯ ಸಂಪೂರ್ಣ ಹೊಣೆಯನ್ನು ಶ್ರೀ ಅಶ್ವಿನ್ ಅವರು ನಿರ್ವಹಿಸುತ್ತಿದ್ದಾರೆ. ಸುಗಮ ಕಲಾಪಕ್ಕೆ ಸೂಕ್ತ ವ್ಯವಸ್ಥೆಗಳಾಗಿವೆ.

ದ.ಕ.ಜಿಲ್ಲೆ ಮತಚಲಾವಣೆ ವಿವರ

ಮಂಗಳೂರು, ಮೇ 15: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಏ.30ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಒಟ್ಟು 1363651 ಮತದಾರರಿದ್ದು, 1015499 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 178202 ಮತದಾರರಿದ್ದು, ಇವರಲ್ಲಿ 129485 ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ 65749 ಪುರುಷರು, 63736 ಮಹಿಳೆಯರು.
ಮೂಡಬಿದ್ರೆಯಲ್ಲಿ ಒಟ್ಟು 110122 ಮತದಾರರಿದ್ದು, ಇವರಲ್ಲಿ 110122 ಮತದಾರರು ಮತ ಚಲಾಯಿಸಿದ್ದಾರೆ. ಇವರಲ್ಲಿ 52289 ಪುರುಷರು, 57833 ಮಹಿಳೆಯರು. ಮಂಗಳೂರು ನಗರ ಉತ್ತರದಲ್ಲಿ ಒಟ್ಟು 184428 ಮತದಾರರಿದ್ದು, 135060 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಇವರಲ್ಲಿ 66281 ಪುರುಷರು, 68779 ಮಹಿಳೆಯರು. ಮಂಗಳೂರು ನಗರ ದಕ್ಷಿಣದಲ್ಲಿ 190952 ಮತದಾರರಿದ್ದು, 130336 ಮತಚಲಾಯಿಸಿರುತ್ತಾರೆ. ಇವರಲ್ಲಿ 63239ಪುರುಷರು, 67097 ಮಹಿಳೆಯರು. ಮಂಗಳೂರು ಕ್ಷೇತ್ರದಲ್ಲಿ 145715 ಮತದಾರರಿದ್ದು, 108496 ಮತದಾರರು ಮತಚಲಾಯಿಸಿದ್ದು, 53323 ಪುರುಷರು, 55273 ಮಹಿಳೆಯರು ಮತ ಚಲಾಯಿಸಿರುತ್ತಾರೆ.
ಬಂಟ್ವಾಳ ಕ್ಷೇತ್ರದಲ್ಲಿ 179057 ಮತದಾರರಿದ್ದು, ಇವರಲ್ಲಿ 139004 ಮತದಾರರು ಮತ ಚಲಾಯಿಸಿದ್ದಾರೆ. 68587 ಪುರುಷರು, 70417 ಮಹಿಳೆಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಪುತ್ತೂರು ಕ್ಷೇತ್ರ ವ್ಯಾಪ್ತಿಯಲ್ಲಿ 165034 ಒಟ್ಟು ಮತದಾರರಿದ್ದು, ಇವರಲ್ಲಿ 129502 ಮತದಾರರು ಮತ ಹಾಕಿರುತ್ತಾರೆ. ಇವರಲ್ಲಿ 65591ಪುರುಷರು, 63911 ಮಹಿಳೆಯರು ಮತ ಚಲಾಯಿಸಿರುತ್ತಾರೆ. ಸುಳ್ಯ ಕ್ಷೇತ್ರ ವ್ಯಾಪ್ತಿಯಲ್ಲಿ 166421 ಮತದಾರರಿದ್ದು, 133494 ಮತದಾರರು ಮತ ಚಲಾಯಿಸಿದ್ದು, ಇವರಲ್ಲಿ 68005 ಪುರುಷರು, 65489 ಮಹಿಳೆಯರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

Thursday, May 14, 2009

ಮಲೇರಿಯಾ ತಡೆಗೆ ಪಾಲಿಕೆಯಿಂದ ಮುನ್ನೆಚ್ಚರಿಕೆ: ಸಮೀರ್ ಶುಕ್ಲಾ

ಮಂಗಳೂರು, ಮೇ.14:ಮಂಗಳೂರು ನಗರದಲ್ಲಿ ಮಾರಕ ರೋಗ ಮಲೇರಿಯವನ್ನು ತಡೆಯಲು ಮಹಾನಗರಪಾಲಿಕೆ ಹಲವು ಕ್ರಮಗಳನ್ನು ಕೈಗೊಂಡಿದ್ದು, ಮಲೇರಿಯಾ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಾಲಿಕೆ ಆಯುಕ್ತ ಶ್ರೀ ಸಮೀರ್ ಶುಕ್ಲಾ ಅವರು ತಿಳಿಸಿದ್ದಾರೆ.
ನಗರದಲ್ಲಿ ಮಲೇರಿಯಾ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ರೋಗ ತಡೆಗೆ 20 ತಂಡಗಳು ಸಕ್ರಿಯವಾಗಿ ಕಾರ್ಯಪ್ರವೃತ್ತವಾಗಿದ್ದು,ಸೊಳ್ಳೆಗಳಿಂದ ಹರಡುವ ಈ ಕಾಯಿಲೆಯನ್ನು ತಡೆಯುವಲ್ಲಿ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅಗತ್ಯ ಎಂದಿರುವ ಅವರು, ಪಾಲಿಕೆಯ ಅಧಿಕಾರಿಗಳು ಮನೆ ಮನೆಗೆ ಬರುವಾಗ ನಿಮ್ಮ ಮನೆಯ ಬಾವಿ ಮತ್ತು ಓವರ್ ಹೆಡ್ ಟ್ಯಾಂಕ್ ಗಳ ಬಗ್ಗೆ ವಹಿಸಬೇಕಾದ ಬಗ್ಗೆ ನೀಡುವ ಮುನ್ನೆಚ್ದರಿಕೆಯನ್ನು ಚಾಚೂ ತಪ್ಪದೆ ಪಾಲಿಸಿ ಎಂದು ಸಲಹೆ ಮಾಡಿದ್ದಾರೆ. ಬಾವಿ ಹೊಂದಿರುವ ಮನೆಗಳವರು ಬಾವಿಯೊಳಕ್ಕೆ ಕಡ್ಡಾಯವಾಗಿ ಗಪ್ಪಿ ಮೀನನ್ನು ಹಾಕಬೇಕು. ಈ ಮೀನುಗಳು ಮನಾಪದ ಮಲೇರಿಯಾ ನಿಯಂತ್ರಣ ಘಟಕದಲ್ಲಿ ಬೆ. 9ರಿಂದ 1 ಗಂಟೆಯವರೆಗೆ ಉಚಿತವಾಗಿ ಲಭ್ಯವಿರುತ್ತದೆ. ನಾವು ಸ್ವಚ್ಛ ಮತ್ತು ಶುದ್ಧವೆಂದು ತೀರ್ಮಾನಿಸುವ ಬಾವಿಗಳು ಸೊಳ್ಳೆಯ ಉತ್ಪತ್ತಿಗೆ ಕಾರಣವಾಗಿದ್ದು, ನಮ್ಮ ಪರಿಸರದ ಬಗ್ಗೆ ಅರಿವು ಬೆಳೆಸಿಕೊಳ್ಳುವುದರಿಂದ ಮಲೇರಿಯಾ ತಡೆ ಸಾಧ್ಯ ಎಂದಿದ್ದಾರೆ.ಬಾಟಲು, ಡಬ್ಬಗಳು, ಟೈರ್ ಗಳು,ತೆಂಗಿನ ಚಿಪ್ಪುಗಳು, ಹೂಕುಂಡಗಳು,ಕೃತಕ ನೀರಿನ ಸಂಗ್ರಹಗಳಿದ್ದರೆ ನಿರ್ಮೂಲನೆ ಮಾಡಲು ಸಲಹೆ ಮಾಡಿದ್ದಾರೆ.
ಮಲೇರಿಯಾದ ಪತ್ತೆ ಮತ್ತು ಚಿಕಿತ್ಸೆಯಲ್ಲಿ ವಿಳಂಬವಾದರೆ ಸಾವು ಸಂಭವಿಸುವ ಸಾಧ್ಯತೆ ಇರುವುದರಿಂದ ಜ್ವರ, ತಲೆನೋವು, ಮೈಕೈನೋವು ಕಾಮಾಲೆ ತೊಂದರೆಗಳಿದ್ದಲ್ಲಿ ಉಚಿತ ರಕ್ತ ತಪಾಸಣೆ ಮತ್ತು ಚಿಕಿತ್ಸೆಗೆ ಹಾಗೂ ಔಷಧಿಗೆ ನಗರದ ಜೆಪ್ಪು, ಬಂದರು, ಬಿಜೈ, ಲೇಡಿಹಿಲ್ ಹಾಗೂ ಮನಾಪ ಕಚೇರಿಯಲ್ಲಿ ಮಲೇರಿಯಾ ಕ್ಲಿನಿಕ್ ಗಳಿದ್ದು,ಬೆ.9ರಿಂದ 12ರವರೆಗೆ ಮತ್ತು ಮ. 3ರಿಂದ 5ರವರೆಗೆ ಸಾರ್ವಜನಿಕರು ಚಿಕಿತ್ಸಾಲಯಗಳನ್ನು ಸಂಪರ್ಕಿಸಬಹುದು.
ಮಲೇರಿಯಾ ತಡೆ ಸಂಬಂಧ ಸಲಹೆ ಹಾಗೂ ಮಾರ್ಗದರ್ಶನಕ್ಕೆ ಪಾಲಿಕೆ ಕಚೇರಿ 2220314, 2220311, ಪಾಲಿಕೆಯ ಮಲೇರಿಯಾ ವೈದ್ಯಾಧಿಕಾರಿ ಡಾ. ದೀಪಕ್ ಆರ್. ಬೋಳಾರ್ ಇವರನ್ನು ಕಚೇರಿ 4277968 ಅಥವಾ ಮೊಬೈಲ್ 9448546266 ನ್ನು ಸಂಪರ್ಕಿಸಬಹುದು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ

ಮಂಗಳೂರು, ಮೇ. 14: ಮೇ 16ರಂದು ನಡೆಯಲಿರುವ ಮತ ಎಣಿಕೆ ಸಂದರ್ಭದಲ್ಲಿ ಮತ್ತು ನಂತರದ ಅವಧಿಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ 15ರ ಸಂಜೆ 6 ಗಂಟೆಯಿಂದ 18ರ ಮಧ್ಯರಾತ್ರಿಯವರೆಗೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿಷೇದಾಜ್ಞೆ ವಿಧಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನು ರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಆದೇಶ ಜಾರಿ ಮಾಡಲಾಗಿದ್ದು, ಸರಕಾರಿ ಹಾಗೂ ಧಾರ್ಮಿಕ ಸಭೆಗಳನ್ನು ಹೊರತು ಪಡಿಸಿ ಯಾವುದೇ ಸಭೆ, ಮೆರವಣಿಗೆಗಳಿಗೆ ಹಾಗೂ ಸಾರ್ವಜನಿಕ ಮಾರಕಾಯುಧಗಳನ್ನು ಹೊಂದದಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೇ 16ರಿಂದ 18ರವರೆಗೆ ವಿಜಯೋತ್ಸವ ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಸಾರ್ವಜನಿಕ ಶಾಂತಿ ಭಂಗಕ್ಕೆ ಎಡೆ ಮಾಡುವಂತಹ ಯಾವುದೇ ಪ್ರಕ್ರಿಯೆಯನ್ನು ನಿಷೇಧಿಸಲಾಗಿದೆ.

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಮತ ಎಣಿಕೆ ಕೇಂದ್ರ ಸಿದ್ಧತೆ ಪರಿಶೀಲನೆ

ಮಂಗಳೂರು,ಮೇ. 14: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತ ಎಣಿಕೆ ಪ್ರಕ್ರಿಯೆ ಕೆನರಾ ಕಾಲೇಜಿನಲ್ಲಿ ನಡೆಯಲಿದ್ದು, ಜಿಲ್ಲಾಡಳಿತ ಈ ಸಂಬಂಧ ಸರ್ವಸಿದ್ಧತೆಗಳನ್ನು ಕೈಗೊಂಡಿದೆ. 14 ರಂದು ಬೆಳಗ್ಗೆ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಮತ ಎಣಿಕೆ ಕೇಂದ್ರದ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದರು.
ಮೇ 16ರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದ್ದು, 15 ಕೊಠಡಿಗಳಲ್ಲಿ ಮತ ಎಣಿಕೆ ಪ್ರಕ್ರಿಯೆಗೆ ಸಿದ್ಧತೆ ಪೂರ್ಣಗೊಂಡಿದೆ. ಎಣಿಕೆ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಜನರು ಗುಂಪುಗೂಡಲು ಅವಕಾಶವಿಲ್ಲ; ಪತ್ರಕರ್ತರಿಗಾಗಿ ಮಾಧ್ಯಮ ಕೇಂದ್ರ ತೆರೆಯಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕೆನರಾ ಪದವಿಪೂರ್ವ ಕಾಲೇಜಿನ ಹಳೆ ಬ್ಲಾಕ್ ನ 1ನೇ ಮಹಡಿ, ಕೊಠಡಿ ಸಂಖ್ಯೆ 1 ಮತ್ತು2 ರಲ್ಲಿ ತಲಾ 7 ಮೇಜುಗಳಲ್ಲಿ ನಡೆಯಲಿದೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಎಣಿಕೆ ಹಳೆ ಬ್ಲಾಕ್ ನ ನೆಲಮಹಡಿಯ ಕೊಠಡಿ ಸಂಖ್ಯೆ 19 ಮತ್ತು 20ರಲ್ಲಿ 6 ಮೇಜುಗಳಲ್ಲಿ ನಡೆಯಲಿದೆ.
ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಕಾಲೇಜಿನ ಹೊಸ ಬ್ಲಾಕ್ ನ 3ನೇ ಮಹಡಿ ಕೊಠಡಿ ಸಂಖ್ಯೆ 34ರಲ್ಲಿ 14 ಮೇಜುಗಳಲ್ಲಿ, ಮಂಗಳೂರು ನಗರ ದಕ್ಷಿಣದ ಮತ ಎಣಿಕೆ ಕಾಲೇಜಿನ ನೆಲಮಹಡಿಯ ಕೊಠಡಿ ಸಂಖ್ಯೆ 13 ಮತ್ತು 14ರಲ್ಲಿ ತಲಾ ಏಳು ಮೇಜುಗಳಲ್ಲಿ, ಮಂಗಳೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹಳೆ ಬ್ಲಾಕ್ ನ ಒಂದನೇ ಮಹಡಿ ಕೊಠಡಿ ಸಂಖ್ಯೆ 8 ಮತ್ತು 9 ರಲ್ಲಿ ತಲಾ 6 ಮೇಜುಗಳಲ್ಲಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ 1 ನೇ ಮಹಡಿಯ ಕೊಠಡಿ ಸಂಖ್ಯೆ 23 ಮತ್ತು 24ರಲ್ಲಿ ತಲಾ 7 ಮೇಜುಗಳಲ್ಲಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ ಹೊಸ ಬ್ಲಾಕ್ ನ ಎರಡನೇ ಮಹಡಿ ಕೊಠಡಿ ಸಂಖ್ಯೆ 30 ಮತ್ತು 31ರಲ್ಲಿ ತಲಾ 6 ಮೇಜುಗಳಲ್ಲಿ, ಸುಳ್ಯ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾಲೇಜಿನ 1ನೇ ಮಹಡಿ ಕೊಠಡಿ ಸಂಖ್ಯೆ 27 ಮತ್ತು 28ರಲ್ಲಿ ತಲಾ 7 ಮೇಜುಗಳಲ್ಲಿ ನಡೆಯಲಿದೆ.
ಚುನಾವಣಾ ಮಾಹಿತಿಗಾಗಿ ಕಂಪ್ಯೂಟರ್ ಗಳನ್ನು ಅಳವಡಿಸಲಾಗಿದ್ದು, ಪ್ರತಿ ಸುತ್ತಿನ ಮತ ಎಣಿಕೆ ವಿವರ ತಕ್ಷಣವೇ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಮಂಗಳೂರು ಮಹಾ ನಗರಪಾಲಿಕೆ ಆಯುಕ್ತ ಶ್ರೀ ಸಮೀರ್ ಶುಕ್ಲಾ, ಕೇಂದ್ರ ಸ್ಥಾನೀಯ ಸಹಾಯಕರಾದ ಶ್ರೀ ಪ್ರಭಾಕರ ಶರ್ಮಾ, ಮಂಗಳೂರು ತಾಲೂಕಿನ ಸಹಾಯಕ ಆಯುಕ್ತ ಶ್ರೀ ಪ್ರಭುಲಿಂಗ ಕಾವಳಕಟ್ಟೆ, ಶ್ರೀ ಮೋಹನ್ ರಾವ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Wednesday, May 13, 2009

ರೈತರಿಗೆ ಬಿತ್ತನೆ ಬೀಜ

ಮಂಗಳೂರು, ಮೇ 13:ದಕ್ಷಿಣ ಕನ್ನಡ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಭತ್ತದ ಬಿತ್ತನೆ ತಳಿ ಎಂ 04 ಜಯ ಬೀಜವು ಲಭ್ಯವಿದ್ದು, ರೈತರಿಗೆ ಶೇ. 50ರ ರಿಯಾಯಿತಿಯಲ್ಲಿ ಕ್ವಿಂಟಾಲಿಗೆ ಗರಿಷ್ಠ ರೂ. 850 ಮೀರದ ರಿಯಾಯಿತಿಯಲ್ಲಿ ಒದಗಿಸಲಾಗುತ್ತಿದೆ. ಆಸಕ್ತ ರೈತ ಬಾಂಧವರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆಯ ಲಾಭ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Tuesday, May 12, 2009

ಮತ ಎಣಿಕೆ: ಮದ್ಯಮುಕ್ತ ದಿನ ಘೋಷಣೆ

ಮಂಗಳೂರು, ಮೇ. 12: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಮೇ 16ರಂದು ನಡೆಯಲಿದ್ದು, ಜಿಲ್ಲೆಯಾದ್ಯಂತ ಮೇ 15ರಂದು ಮಧ್ಯರಾತ್ರಿಯಿಂದ ಮೇ 16ರ ಮಧ್ಯ ರಾತ್ರಿಯವರೆಗಿನ ಅವಧಿಯನ್ನು ಮದ್ಯಮುಕ್ತ ದಿನಗಳೆಂದು ಘೋಷಿಸಿ ಜಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶ್ರೀ ವಿ.ಪೊನ್ನುರಾಜ್ ಅವರು ಆದೇಶ ಹೊರಡಿಸಿದ್ದಾರೆ.
ಮತ ಎಣಿಕೆಯನ್ನು ಮುಕ್ತ ಹಾಗೂ ನಿಷ್ಪಕ್ಷಪಾತವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಕರ್ನಾಟಕ ಅಬಕಾರಿ ಸನ್ನದುಗಳು ನಿಯಮದಡಿ ಆದೇಶ ಹೊರಡಿಸಲಾಗಿದ್ದು, ಕರ್ನಾಟಕ ಅಬಕಾರಿ ಕಾಯಿದೆ 1965ರಡಿ ಕಾರ್ಯಾಚರಿಸುತ್ತಿರುವ ಸನ್ನದು ಆವರಣಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಹಾಗೂ ಇನ್ನುಳಿದ ಯಾವುದೇ ವಿಧದ ಮದ್ಯ ಮಾರಾಟದ ಪರವಾನಿಗೆ ಇರುವಂತಹ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳನ್ನು ಮುಚ್ಚಲು ಆದೇಶಿಸಲಾಗಿದೆ. ಜಿಲ್ಲೆಯ ಹೋಟೇಲುಗಳಲ್ಲಿ, ಕ್ಲಬ್ ಗಳಲ್ಲಿ, ಮದ್ಯ ಮಾರಾಟ ಅಥವಾ ಸರಬರಾಜು ಮಾಡುವುದನ್ನು ನಿಷೇಧಿಸಲಾಗಿದ್ದು, ವೈನ್ ಶಾಪ್, ಬಾರ್ ನ ಮುಂದಿನ ಹಾಗೂ ಹಿಂದಿನ ಬಾಗಿಲುಗಳಿಗೆ ಅಬಕಾರಿ ಇಲಾಖೆಯ ಮೊಹರುಗಳನ್ನು ಹಾಕಿ ಕಡ್ಡಾಯವಾಗಿ ಮುಚ್ಚುವಂತೆ ಅಬಕಾರಿ ಉಪ ಆಯುಕ್ತರಿಗೆ ಜಿಲ್ಲಾ ದಂಡಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
ಮೇ 15 ಸಂಜೆಯಿಂದ 18ರ ಮಧ್ಯರಾತ್ರಿವರೆಗೆ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಮತ ಎಣಿಕೆ ಸಂದರ್ಬದಲ್ಲಿ ಶಾಂತ ಪರಿಸ್ಥಿತಿ ನೆಲೆಗೊಳಿಸಲು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದೆ. ಮತ ಎಣಿಕೆ ಸಂದರ್ಬದಲ್ಲಿ ಪಟಾಕಿ ಸಿಡಿಸುವುದನ್ನು ಹಾಗೂ ವಿಜಯೋತ್ಸವ ಆಚರಣೆಗೂ ಅವಕಾಶ ನೀಡಲಾಗಿಲ್ಲ.

Sunday, May 10, 2009

ಮಂಗಳೂರಿನಲ್ಲಿ ರಾಷ್ಟ್ರಪತಿ



ಮಂಗಳೂರು, ಮೇ 10: ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಭೇಟಿ ನೀಡಲು ಆಗಮಿಸಿದ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರು ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ವಾಯುಪಡೆಯ ವಿಮಾನದಲ್ಲಿ ಆಗಮಿಸಿ ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದರು. ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಯವರನ್ನು ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಕೃಷ್ಣ ಪಲೇಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶ್ರೀ ಸುಚರಿತ ಶೆಟ್ಟಿ, ಮೇಯರ್ ಶ್ರೀ ಶಂಕರ್ ಭಟ್, ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರಿ ಸುಬ್ರಮಣ್ಯೇಶ್ವರ ರಾವ್ ಅವರು ಸ್ವಾಗತಿಸಿದರು.





Saturday, May 9, 2009

ರಾಷ್ಟ್ರೀಯ ಹೆದ್ದಾರಿ ಸಮರ್ಪಕ ನಿರ್ವಹಣೆ: ಸಿ.ಎಂ. ಉದಾಸಿ

ಮಂಗಳೂರು, ಮೇ 9: ರಾಜ್ಯದ ಲೋಕೋಪಯೋಗಿ ಸಚಿವರಾದ ಶ್ರೀ ಸಿ. ಎಂ. ಉದಾಸಿಯವರು ಇಂದು (ಮೇ 9)ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂ. 48 ರ ಶಿರಾಡಿ ಘಟನೆ ಮಾರನಹಳ್ಳಿಯಿಂದ ಅಡ್ಡ ಹೊಳೆವರೆಗಿನ 25 ಕಿ. ಮೀ. ರಸ್ತೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಗಳ ಸಮರ್ಪಕ ನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದೆಂದರು. ಅಧಿಕ ಮಳೆ ಬೀಳುವ ಶಿರಾಡಿ ಘಾಟ್ ಪ್ರದೇಶದಲ್ಲಿ ರಸ್ತೆಗೆ ನೀರು ಹರಿದು ಬಂದು ರಸ್ತೆ ಹಾಳಾಗದಿರಲು ಸರಾಗವಾಗಿ ನೀರು ಹರಿದು ಹೋಗದ ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಿಗೆ ರಸ್ತೆ ಸುರಕ್ಷತೆಯ ತಡೆಗೋಡೆ ಹಾಕಲಾಗುವುದೆಂದರು.
ಅಧಿಕ ಭಾರದ ಸಾಮಗ್ರಿಗಳನ್ನು ಸಾಗಿಸುವುದರಿಂದಲೂ ರಸ್ತೆ ಹಾಳಾಗುವುದನ್ನು ಮನಗಂಡು ಅಧಿಕ ಭಾರದ ವಾಹನಗಳನ್ನುಸಂಚಾರದಲ್ಲಿ ನಿಯಂತ್ರಿಸಲು ಹಾಸನ ಜಿಲ್ಲೆಯ ಆಲೂರು ಬಳಿಯ ಭೈರಾಪುರ ಗೇಟ್ ಬಳಿ ವೇ ಬ್ರಿಡ್ಜ್ (ತೂಕದ ಮನೆ) ಸ್ಥಾಪಿಸಲಾಗುವುದು. ಇದಕ್ಕಾಗಿ 6 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಲು ಕ್ರಮಕೈಗೊಳ್ಳಲಾಗಿದೆಯಲ್ಲದೆ, ಕೊಪ್ಪಳದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವೇಬ್ರಿಡ್ಜ್ ತೆರೆಯಲಾಗುವುದು. ನಿಗದಿತ ತೂಕದಷ್ಟೇ ವಾಹನವನ್ನು ರಸ್ತೆ ಮೇಲೆ ಬಿಡಲಾಗುವುದಲ್ಲದೆ ನಿಯಮ ಉಲ್ಲಂಘಿಸಿದವರಿಗೆ ಅಧಿಕ ದಂಡ ವಿಧಿಸಲಾಗುವುದೆಂದರು. ಇಂತಹ ವಾಹನಗಳನ್ನು ತಪಾಸಣೆಗೊಳಪಡಿಸಲು ಪೊಲೀಸ್ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ವಹಿಸಲು ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮುಂದುವರಿದ ಫ್ರಾನ್ಸ್ ಮತ್ತಿತರ ರಾಷ್ಟ್ರಗಳಲ್ಲಿ ಮಳೆಗಾಲದಲ್ಲೂ ರಸ್ತೆ ದುರಸ್ಥಿಯ ಆಧುನಿಕ ಕ್ರಮಗಳಂತೆ ಅಗತ್ಯವಿರುವ ಶಿರಾಡಿ ಘಾಟ್ ರಸ್ತೆ ದುರಸ್ತಿ ಕೈಗೊಂಡು ಇದೇ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದೆಂದರು.ಕಳೆದ 5 ವರಷ್ಗಳ ಅವಧಿಯಲ್ಲಿ 2008-09ನೇ ಸಾಲಿನಲ್ಲಿ ರಾಜ್ಯವು ಕೇಂದ್ರೀಯ ರಸ್ತೆ ನಿಧಿಯಿಂದ ರೂ. 553 ಕೋಟಿಗೂ ಹೆಚ್ಚು ಹಣವನ್ನು ಪಡೆದು ರಾಜ್ಯ ಹೆದ್ದಾರಿಗಳ ರಸ್ತೆ ಅಭಿವೃದ್ಧಿಯ 355 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ನಂಜುಂಡಪ್ಪ ವರದಿಯನ್ವಯ ರಾಜ್ಯದ ಹಿಂದುಳಿದ 114 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರಸ್ತೆ ಕಾಮಗಾರಿಗಳಿಗಾಗಿರೂ. 280 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದೆಂದರು. ವಿಶೇಷ ಘಟಕ ಯೋಜನೆಯಡಿ ರೂ. 93.81 ಕೋಟಿ, ಗಿರಿಜನ ಅಭಿವೃದ್ಧಿ ಯೋಜನೆಯಡಿ 28.82 ಕೋಟಿ ಹಾಗು ಸುವರ್ನ ರಸ್ತೆ ಯೋಜನೆಯಡಿ ರೂ. 100 ಕೋಟಿ ಹಣವನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದೆಂದರು. ಈಗಾಗಲೇ ಪಿಡಬಲ್ಯೂಡಿ ಕಟ್ಟಡ ಕಾಮಗಾರಿಗಳು ಆರಂಭಗೊಂಡು ಪ್ರಗತಿಯಲ್ಲಿರುವುದನ್ನು ನಿಲ್ಲಿಸದೆ ಮುಂದುವರೆಸಿ ಪೂರ್ನಗೊಳಿಸಲಾಗುವುದೆಂದರು.
ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಶ್ರೀ ಕೆ. ಸ್ವಾಮಿ, ಅಧೀಕ್ಷಕ ಇಂಜಿನಿಯರ್ ಬಿ. ಬಿ. ಜಗಲತರ, ಕಾರ್ಯಪಾಲಕ ಇಂಜಿನಿಯರ್ ಎಮ್. ಜಿ. ಸೋಮಶೇಖರ್ ಮುಂತಾದವರು ಸಚಿವರೊಡನೆ ಪಾಲ್ಗೊಂಡು ಮಾಹಿತಿ ಒದಗಿಸಿದರು.

ಸುಸೂತ್ರ ಮತ ಎಣಿಕೆಗೆ ಮೊದಲ ಸುತ್ರಿನ ತರಬೇತಿ

ಮಂಗಳೂರು, ಮೇ.9: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತಗಳ ಎಣಿಕೆ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಮೇ 16ರಂದು ಯಾವುದೇ ಗೊಂದಲಗಳಿಲ್ಲದೆ ಮತ ಎಣಿಕೆ ಕಾರ್ಯ ನಿರ್ವಹಣೆಗೆ ಇಂದು ಜಿಲ್ಲಾಧಿಕಾರಿ ಶ್ರೀ ವಿ. ಪೊನ್ನುರಾಜು ಅವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಕಾಲೇಜಿನ 15 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, 35 ಅಧಿಕಾರಿಗಳು ಕಾರ್ಯನಿರ್ವಹಣೆಯ ಹೊಣೆಯನ್ನು ಹೊತ್ತಿರುತ್ತಾರೆ. ಪ್ರತೀ ಎ ಆರ್ ಒ ಗೆ 3 ಜನ ಸಹಾಯಕರನ್ನು ಒದಗಿಸಲಾಗಿದ್ದು, ಮತ ಎಣಿಕೆ ಸಂದರ್ಭದಲ್ಲಿ ಸುಸೂತ್ರವಾಗಿ ಕೆಲಸಗಳು ನೆರವೇರಲು ಎಲ್ಲರಿಗೂ ಪ್ರತ್ಯೇಕ ತರಬೇತಿಯನ್ನು ನೀಡಲಾಗುತ್ತಿದ್ದು, ಮೇ 11ಕ್ಕೆ ಇನ್ನೊಂದು ಸುತ್ತಿನ ತರಬೇತಿ, ಡಿಗ್ರೂಪ್ ನೌಕರರಿಗೆ ಮೇ 14ರಮದು ತರಬೇತಿಯನ್ನು ನೀಡಲಾಗುವುದು. ಮತ ಎಣಿಕೆ ದಿನದಂದು ಬೆ. 5 ಗಂಟೆಗೆ ಸಿಬ್ಬಂದಿಗಳನ್ನು ವಿವಿಧ ವಿಭಾಗಕ್ಕೆ ಆಯ್ಕೆ ಮಾಡಿ ಕಳುಹಿಸಲಾಗುವುದು. ಮತ ಎಣಿಕೆ ಸ್ಥಳದಲ್ಲಿ ಸಿಬ್ಬಂದಿಗಳಿಗೆ ನೆರವಾಗಲು ಪ್ರತ್ಯೇಕ ಪಡೆ, ಫಲಿತಾಂಶ ಘೋಷಿಸಲು ಒಂದು ತಂಡವನ್ನು ರೂಪಿಸಲಾಗುವುದು ಎಂದು ಕೇಂದ್ರ ಮುಖ್ಯ ಸ್ಥಾನಿಕ ಅಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ವಿವರಿಸಿದರು.
ಮತ ಎಣಿಕೆಯ ಸ್ಥಳದಲ್ಲಿ ಗುರುತು ಪತ್ರ ಇದ್ದವರಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಜಿಲ್ಲಾಡಳಿತ ಈ ಸಂದರ್ಭದಲ್ಲಿ ಸ್ಪಷ್ಟ ಪಡಿಸಿತು. ಸಭೆಯಲ್ಲಿ ಸಹಾಯಕ ಆಯುಕ್ತರು, ತಹಸೀಲ್ದಾರರು ಸೇರಿದಂತೆ ಎಲ್ಲಾ ಅಧಿಕಾರಿಗಳು ಹಾಜರಿದ್ದರು.

Wednesday, May 6, 2009

ಸಿ ಇ ಟಿ ಪರೀಕ್ಷೆ: 6825 ವಿದ್ಯಾರ್ಥಿಗಳು

ಮಂಗಳೂರು,ಮೇ 6: ದ. ಕ.ಜಿಲ್ಲೆಯಲ್ಲಿ ಇಂದು ನಡೆದ ಸಿಇಟಿ ಪರೀಕ್ಷೆಗೆ ಒಟ್ಟು 6,825 ವಿದ್ಯಾರ್ಥಿಗಳಲ್ಲಿ ಜೀವಶಾಸ್ತ್ರ ಪರೀಕ್ಷೆಗೆ 3,583 ವಿದ್ಯಾರ್ಥಿಗಳು ಹಾಜರಾಗಿದ್ದು, 3242 ಗೈರು ಹಾಜರಾಗಿದ್ದಾರೆ. ಗಣಿತಕ್ಕೆ 6,575 ವಿದ್ಯಾರ್ಥಿಗಳು ಹಾಜರಾಗಿದ್ದು, 250 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಿಇಟಿ ಆಯೋಜಕರು ತಿಳಿಸಿದ್ದಾರೆ.

Monday, May 4, 2009

ಸಿಇಟಿ: ವಿದ್ಯಾರ್ಥಿಗಳು ಸುಸೂತ್ರ ಪರೀಕ್ಷೆ ಬರೆಯಲು ಸರ್ವ ಕ್ರಮ


ಮಂಗಳೂರು, ಮೇ. 4: 2009ನೇ ಸಾಲಿನ ವೃತ್ತಿ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆ ಜಿಲ್ಲೆಯ 12 ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗದಂತೆ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆ ಸುಸೂತ್ರವಾಗಿ ನಡೆಯಲು ಜಿಲ್ಲಾಡಳಿತ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾ ಕೇಂದ್ರ ಸ್ಥಾನೀಯ ಸಹಾಯಕರಾದ ಶ್ರೀ ಪ್ರಭಾಕರ ಶರ್ಮಾ ಅವರು ಹೇಳಿದರು.
ಸಿಇಟಿ ಪರೀಕ್ಷೆ ಸಂಬಂಧ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೈಗೊಳ್ಳಲಾದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ಪರೀಕ್ಷೆ ಬರೆಯುವುದು ವಿದ್ಯಾರ್ಥಿಗಳ ಹಕ್ಕು; ವಿದ್ಯಾರ್ಥಿಗಳಿಗೆ ಯಾವುದೇ ಅನಾನೂಕೂಲವಾಗದಂತೆ ಸಂಬಂಧಪಟ್ಟ ಎಲ್ಲಾ ಕಾಲೇಜು ಪರೀಕ್ಷಾ ಮುಖ್ಯಸ್ಥರು ಮತ್ತು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ನಗರದಲ್ಲಿ 10 ಮತ್ತು ಪುತ್ತೂರಿನಲ್ಲಿ 2 ಪರೀಕ್ಷಾ ಕೇಂದ್ರಗಳಿದ್ದು, ಇಲ್ಲಿ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ವರದಿಯನ್ನು ಪಡೆಯಲಾಯಿತು. ಸಂತ ಅಲೋಷಿಯಸ್ ಕಾಲೇಜಿನಲ್ಲಿ 861 ವಿದ್ಯಾರ್ಥಿಗಳಿಗೆ 54 ಕೊಠಡಿಗಳು, ಶ್ರೀ ಮಧುಸೂಧನ ಕುಶೆ ಪ. ಪೂ. ಕಾಲೇಜು ಅತ್ತಾವರದಲ್ಲಿ 592 ಮಕ್ಕಳು 37 ಕೊಠಡಿಗಳಲ್ಲಿ, ಕಾರ್ ಸ್ಟ್ರೀಟ್ನಲ್ಲಿರುವ ಸರ್ಕಾರಿ ಪ. ಪೂ . ಕಾಲೇಜಿನಲ್ಲಿ 512 ಮಕ್ಕಳಿಗೆ 32 ಕೊಠಡಿಗಳು, ಸಂತ ಆಗ್ನೇಸ್ ಕಾಲೇಜಿನಲ್ಲಿ 608 ವಿದ್ಯಾರ್ಥಿಗಳು 38 ಕೊಠಡಿಗಳಲ್ಲಿ, ಬೆಸೆಂಟ್ ಕಾಲೇಜಿನಲ್ಲಿ 512 ಮಕ್ಕಳು 32 ಕೊಠಡಿಗಳಲ್ಲಿ, ಬಲ್ಮಠದಲ್ಲಿ 608 ವಿದ್ಯಾರ್ಥಿಗಳು 38 ಕೊಠಡಿಗಳಲ್ಲಿ, ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ 512 ವಿದ್ಯಾರ್ಥಿಗಳು 32 ಕೊಠಡಿಗಳಲ್ಲಿ, ಮಿಲಾಗ್ರಿಸ್ ಪ. ಪೂ. ಕಾಲೇಜಿನಲ್ಲಿ 608 ವಿದ್ಯಾರ್ಥಿಗಳು 38 ಕೊಠಡಿಗಳಲ್ಲಿ, ಗಣಪತಿ ಪ. ಪೂ. ಕಾಲೇಜಿನಲ್ಲಿ 512 ವಿದ್ಯಾರ್ಥಿಗಳು,32 ಕೊಠಡಿಗಳಲ್ಲಿ, ಸೈಂಟ್ ಆನ್ಸ್ ಕಾಲೇಜಿನಲ್ಲಿ 416 ವಿದ್ಯಾರ್ಥಿಗಳಿಗೆ 26 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಿರುವರು. ಪುತ್ತೂರಿನಲ್ಲಿರುವ ಫಿಲೋಮಿನಾ ಕಾಲೇಜಿನಲ್ಲಿ 592 ವಿದ್ಯಾರ್ಥಿಗಳು 37 ಕೊಠಡಿಗಳಲ್ಲಿ, ಪುತ್ತೂರು ಸರ್ಕಾರಿ ಪ. ಪೂ. ಕಾಲೇಜಿನಲ್ಲಿ 496 ವಿದ್ಯಾರ್ಥಿಗಳಿಗೆ 31 ಕೊಠಡಿಗಳನ್ನು ಕಾದಿರಿಸಲಾಗಿದ್ದು, ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮೊಬೈಲ್ ಬಳಸುವುದನ್ನು ನಿಷೇಧಿಸಲಾಗಿದ್ದು, ಪರೀಕ್ಷಾ ವೀಕ್ಷಕರು ಪರೀಕ್ಷಾ ಸ್ಥಳಕ್ಕೆ ಒಂದು ಗಂಟೆ ಮೊದಲೇ ಆಗಮಿಸಿ ವ್ಯವಸ್ಥೆಗಳನ್ನು ಪರಿಶೀಲಿಸುವರು. ಈ ಸಂಬಂಧ ಪರೀಕ್ಷಾ ಮೇಲ್ವಿಚಾರಕರಿಗೆ ಸೂಕ್ತ ತರಬೇತಿ ನೀಡಲು ಎಚ್ ಕ್ಯೂ ಎ ಅವರು ಕಟ್ಟು ನಿಟ್ಟಿನ ಮಾರ್ಗದರರ್ಶನ ನೀಡಿದ್ದು, ವಿದ್ಯಾರ್ಥಿಗಳಲ್ಲಿ ಯಾವುದೇ ಗೊಂದಲವಾಗದಂತೆ ತಡೆಯಲು ಅವರು ಸಮರ್ಥರಿರಬೇಕು ಮತ್ತು ಈ ಸಂಬಂಧ ಪೂರಕ ಮಾಹಿತಿ ಅವರಲ್ಲಿರಬೇಕು ಎಂದು ಸೂಚಿಸಿದ್ದಾರೆ.
ಸಿಇಟಿ ಯಶಸ್ವಿಯಾಗಿ ನಡೆಯಲು ಅಗತ್ಯ ಕ್ರಮಗಳ ಬಗ್ಗೆ ಸಭೆಯಲ್ಲಿ ಅನುಭವಿಗಳ ಸಲಹೆ ಸೂಚನೆಗಳನ್ನು ಪಡೆಯಲಾಯಿತು. ಸಬೆಯಲ್ಲಿ ಪುತ್ತೂರ ಎ ಸಿ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

Saturday, May 2, 2009

ಎಸ್ ಎಸ್ ಎಲ್ ಸಿ ಫಲಿತಾಂಶ: ದ.ಕ.ಕ್ಕೆ ನಾಲ್ಕನೇ ಸ್ಥಾನ

ಮಂಗಳೂರು, ಮೇ. 2: 2008-09ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಶೇಕಡ 82.02 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ನಾಲ್ಕನೇ ಸ್ಥಾನ ಪಡೆದಿದೆ.
ಜಿಲ್ಲೆಯಲ್ಲಿ ಒಟ್ಟು 382 ಪ್ರೌಢಶಾಲೆಗಳಿದ್ದು, 2,013 ಖಾಸಗಿ ವಿದ್ಯಾರ್ಥಿಗಳು ಸೇರಿದಂತೆ 31,370 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. 15,823 ವಿದ್ಯಾರ್ಥಿಗಳಲ್ಲಿ 12,257 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು, 15,542 ವಿದ್ಯಾರ್ಥಿನಿಯರಲ್ಲಿ 13,472 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆ 10 ನೇ ಸ್ಥಾನ ಪಡೆದಿತ್ತು.

ತಪ್ಪಿತಸ್ಥರಿಗೆ ಶಿಕ್ಷೆ ಖಚಿತ: ಗೋಪಾಲ್ ಬಿ. ಹೊಸೂರ್

ಮಂಗಳೂರು, ಮೇ. 2: ಧರ್ಮಸ್ಥಳದಲ್ಲಿ ನಿನ್ನೆ ಸಂಜೆ ನಡೆದ ಘಟನೆ ಅನಪೇಕ್ಷಿತ ಮತ್ತು ಅಮಾನವೀಯ; ಘಟನೆಗೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸಲು ಕಾನೂನು ರೀತಿಯಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಗೋಪಾಲ್ ಬಿ. ಹೊಸೂರು ತಿಳಿಸಿದ್ದಾರೆ.
ಅತ್ಯಂತ ಶಾಂತಿಯುತವಾಗಿ ಚುನಾವಣಾ ಪ್ರಕ್ರಿಯೆ ಮುಗಿದ ಸಂದರ್ಭದಲ್ಲೇ ನಡೆದ ಈ ಘಟನೆ ದುರಾದೃಷ್ಟಕರ ಎಂದ ಅವರು, ಆಂಧ್ರ ಪೊಲೀಸರ ವಿರುದ್ಧ ಕೇಸು ದಾಖಲಿಸಿದ್ದು, ಈಗಾಗಲೇ ಮ್ಯಾಜಿಸ್ಟೀರಿಯಲ್ ತನಿಖೆ ಆರಂಬಿಸಲಾಗಿದೆ. ಇದಲ್ಲದೆ ಇಲಾಖೆ ಸ್ವತಂತ್ರವಾಗಿ ಪ್ರತ್ಯೇಕ ಕೇಸು ದಾಖಲಿಸಿದ್ದು, ಎಫ್ ಐ ಆರ್ ಮತ್ತು ಉಪಯೋಗಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿದ್ದು, ತಪ್ಪಿತಸ್ಥರಿಗೆ ಶಿಕ್ಷೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದರು.
ಈಗಾಗಲೇ ಬೆಂಗಳೂರಿನಿಂದ ಬಂದ ಬ್ಯಾಲೆಸ್ಟಿಕ್ ತಜ್ಞರು ಶವವನ್ನು ಮಹಜರು ಮಾಡಿದ್ದು, ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ತನಿಖೆಯಲ್ಲಿ ಯಾವುದೇ ರೀತಿಯ ಲೋಪಗಳಾಗದಂತೆ ಎಚ್ಚರಿಕೆ ವಹಿಸಲಾಗಿದೆ.
ತನಿಖೆಯ ಹೊಣೆ ಹೊತ್ತಿರುವ ಪುತ್ತೂರು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಶವಪಂಚನಾಮೆ, ಸಾಕ್ಷ್ಯಗಳ ಹೇಳಿಕೆಗಳನ್ನು ದಾಖಲಿಸಲಾಗಿದ್ದು, ಆಂದ್ರ ತಂಡದ ನೇತೃತ್ವದ ವಹಿಸಿದ ಆಧಿಕಾರಿ ಘಟನೆ ಬಗ್ಗೆ ಪಶ್ಚಾತ್ತಾಪ ಪಟ್ಟಿದ್ದು, ಈ ಎಲ್ಲಾ ವರದಿಗಳನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಲಾಗುವುದು. ಆಂಧ್ರ ಪೊಲೀಸ ತಂಡದ ಮುಖ್ಯಸ್ಥರು ಮಂಗಳೂರಿಗೆ ಆಗಮಿಸಿದ್ದು, ಪ್ರಕರಣದ ಬಗ್ಗ ಕೂಲಂಕಷ ತನಿಖೆ ನಡೆಯಲಿದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಬಗ್ಗೆಯೂ ವಿಸ್ತೃತವಾಗಿ ಚರ್ಚಿಸಲಾಗುವುದು ಎಂದರು. ಬೆಳ್ತಂಗಡಿ ಬಂದ್ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಿಸಲು ಬಜರಂಗದಳದವರಿಗೆ ಅವಕಾಶ ನೀಡದೆ ಅವರ ಮನ ಒಲಿಸಲಾಗಿದೆ. ಪರಿಸರದಲ್ಲಿ ಸ್ವಇಚ್ಛೆಯಿಂದ ಬಂದ್ ಮಾಡುವವರನ್ನು ಇಲಾಖೆ ತಡೆದಿಲ್ಲ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಾನೂನು ಭಂಗಿಸುವವರಿಗೆ ಶಿಕ್ಷೆ ಖಚಿತ ಎಂಬ ಸಂದೇಶವನ್ನು ನೀಡಿದ್ದಾರೆ.

Friday, May 1, 2009

Police firing unfortunate: DC

Mangalore, May1: It is highly unfortunate to note that a horrific terror has been unleashed on our people by the handful of security staff from outside the state; who came to provide security for election. I am ordering majestrial inquiry in to the incident and most stringent action would be taken. I express my moral support to the family members of Mr. Ithappa, also giving rupees one lakh relief to the family of the deceased and medical assistance from the government side to the injured.

ಬಿಗಿ ಭದ್ರತೆಯಲ್ಲಿ ಮತಯಂತ್ರಗಳು

ಮಂಗಳೂರು, ಮೇ. 1: ಶಾಂತಿಯುತವಾಗಿ ಯಾವುದೇ ತೊಡಕುಗಳಿಲ್ಲದೆ ಗುರುವಾರ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆ ಯಶಸ್ವಿಯಾಗಿ ಮುಗಿದಿದ್ದು, ಮತಯಂತ್ರಗಳು ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಕೆನರಾ ಪದವಿಪೂರ್ವ ಕಾಲೇಜಿನಲ್ಲಿ ಬಿಗಿ ಭಧ್ರತೆಯಲ್ಲಿ ಇರಿಸಲಾಗಿದೆ.
ಭದ್ರತೆಗಾಗಿ ಸಂಪೂರ್ಣ ಕಾಲೇಜನ್ನು ಸೀಲ್ ಮಾಡಲಾಗಿದ್ದು, ಡಿವೈಎಸ್ ಪಿ ಧರ್ಮಯ್ಯ ಆವರ ಉಸ್ತುವಾರಿಯಲ್ಲಿ ಬಂದೋಬಸ್ತ್ ಏರ್ಪಡಿಸಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅಗ್ನಿಶಾಮಕಗಳು ಸ್ಥಳದಲ್ಲಿದೆ. ಶಿಕ್ಷಣಕ್ಕೆ ಸಂಬಂಧಿಸಿದ ವ್ಯವಸ್ಥೆಗಳನ್ನು ಬೇರೆ ಕಡೆ ಸ್ಥಳಾಂತರಿಸಿದ್ದು, ಸ್ಥಳಕ್ಕೆ ವಿದ್ಯಾರ್ಥಿಗಳಿಗೂ ಪ್ರವೇಶ ನಿಷೇಧಿಸಲಾಗಿದೆ.

ದ. ಕ. ಜಿಲ್ಲೆ: 74.44% ಮತದಾನ

ಮಂಗಳೂರು, ಮೇ. 1: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಶೇ. 74.44 ಮತದಾನವಾಗಿದ್ದು, ಅತ್ಯಧಿಕ ಮತದಾನ ದಾಖಲಾಗಿದೆ. ಬೆಳ್ತಂಗಡಿಯಲ್ಲಿ 72.66, ಮೂಡಬಿದ್ರೆಯಲ್ಲಿ 71.20, ಮಂಗಳೂರು ಉತ್ತರದಲ್ಲಿ 73.23, ದಕ್ಷಿಣದಲ್ಲಿ 68.26, ಮಂಗಳೂರಿನಲ್ಲಿ 74.61, ಬಂಟ್ವಾಳದಲ್ಲಿ 77.63, ಪುತ್ತೂರಿನಲ್ಲಿ 78.47, ಸುಳ್ಯದಲ್ಲಿ 80.21ಶೇಕಡ ಮತದಾನವಾಗಿದ್ದು, ಸುಳ್ಯದಲ್ಲಿ ಅತ್ಯಧಿಕ ಮತದಾನವಾಗಿದೆ.