Wednesday, May 27, 2009

ಕರಾವಳಿ ಕಾವಲು ಪಡೆಗೆ ನೂತನ ಸ್ಪೀಡ್ ಬೋಟ್



ಮಂಗಳೂರು, ಮೇ. 27: ಪ್ರಸಕ್ತ ಸನ್ನಿವೇಶದಲ್ಲಿ ಕರಾವಳಿ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಇದರಡಿ 5 ಪೊಲೀಸ್ ಠಾಣೆಗಳನ್ನು ತೆರೆಯಲಾಗಿದೆ. ಕರಾವಳಿ ಕಾವಲು ಪಡೆಯನ್ನು ಸದೃಢಗೊಳಿಸಲು ಭವಿಷ್ಯದಲ್ಲಿ ಇನ್ನೂ 4 ಪೊಲೀಸ್ ಠಾಣೆಗಳನ್ನು 12 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗುವುದು ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಗೋಪಾಲ್ ಬಿ. ಹೊಸೂರ್ ಹೇಳಿದರು.
ಅವರು ಇಂದು ನವಮಂಗಳೂರು ಬಂದರು ಪಣಂಬೂರಿನಲ್ಲಿ ಕರಾವಳಿ ಕಾವಲು ಪಡೆಗೆ ನೂತನ ಸ್ಪೀಡ್ ಬೋಟನ್ನು ಕರ್ತವ್ಯಕ್ಕೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು.
ಮುಂದಿನ ದಿನಗಳಲ್ಲಿ ಭಟ್ಕಳ ಮತ್ತು ಮಂಗಳೂರಿನಲ್ಲಿ ಕರಾವಳಿ ಕಾವಲು ಪಡೆಯ ಉಪವಿಭಾಗ ತೆರೆಯಲಾಗುವುದಲ್ಲದೆ, ಕರಾವಳಿಯ ಭದ್ರತೆಗೆ ಗುಪ್ತಚರ ಇಲಾಖೆಯ ಸಹಾಯ ಪಡೆದು ಕರ್ತವ್ಯ ನಿರ್ವಹಿಸಲಾಗುವುದು. ಭದ್ರತಾ ಲೋಪಕ್ಕೆ ಅವಕಾಶ ನೀಡದಿರಲು ಸ್ಥಳೀಯ ಮಾಹಿತಿ ಸಂಗ್ರಹ ಹಾಗೂ ಮೀನುಗಾರರ ನೆರವನ್ನು ಪಡೆಯಲಾಗುವುದು ಎಂದ ಅವರು, ಭದ್ರತೆಗೆ ನೆರವು ನೀಡುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲುಇಲಾಖೆ ಕ್ರಮಕೈಗೊಳ್ಳಲಿದೆ ಎಂದರು.
ಸಮಾರಂಭದಲ್ಲಿ ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷ ತಮಿಳ್ ವಾಣನ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಬ್ರಮಣ್ಯೇಶ್ವರ ರಾವ್, ಕರಾವಳಿಕಾವಲು ಪಡೆಯ ಸಹಾಯಕ ಕಮಾಂಡೆಂಟ್ ಅಜಯಕುಮಾರ್ ಮುಗ್ದಲ್ ಉಪಸ್ಥಿತರಿದ್ದರು. ಕರಾವಳಿ ಕಾವಲು ಪಡೆಯ ಪೊಲೀಸ್ ಅಧೀಕ್ಷಕ ಎಚ್. ಆರ್. ಭಗವಾನ್ ದಾಸ್ ಸ್ವಾಗತಿಸಿ, ಕರಾವಳಿ ಕಾವಲು ಪೊಲೀಸ್ ಠಾಣೆಯ ನಿರೀಕ್ಷಕ ಮುಕುಂದ್ ನಾಯಕ್ ವಂದಿಸಿದರು.