Saturday, May 9, 2009

ರಾಷ್ಟ್ರೀಯ ಹೆದ್ದಾರಿ ಸಮರ್ಪಕ ನಿರ್ವಹಣೆ: ಸಿ.ಎಂ. ಉದಾಸಿ

ಮಂಗಳೂರು, ಮೇ 9: ರಾಜ್ಯದ ಲೋಕೋಪಯೋಗಿ ಸಚಿವರಾದ ಶ್ರೀ ಸಿ. ಎಂ. ಉದಾಸಿಯವರು ಇಂದು (ಮೇ 9)ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಸಂ. 48 ರ ಶಿರಾಡಿ ಘಟನೆ ಮಾರನಹಳ್ಳಿಯಿಂದ ಅಡ್ಡ ಹೊಳೆವರೆಗಿನ 25 ಕಿ. ಮೀ. ರಸ್ತೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಗಳ ಸಮರ್ಪಕ ನಿರ್ವಹಣೆಗೆ ಕ್ರಮಕೈಗೊಳ್ಳಲಾಗುವುದೆಂದರು. ಅಧಿಕ ಮಳೆ ಬೀಳುವ ಶಿರಾಡಿ ಘಾಟ್ ಪ್ರದೇಶದಲ್ಲಿ ರಸ್ತೆಗೆ ನೀರು ಹರಿದು ಬಂದು ರಸ್ತೆ ಹಾಳಾಗದಿರಲು ಸರಾಗವಾಗಿ ನೀರು ಹರಿದು ಹೋಗದ ಕಡೆಗಳಲ್ಲಿ ರಸ್ತೆಯ ಇಕ್ಕೆಲಗಳಿಗೆ ರಸ್ತೆ ಸುರಕ್ಷತೆಯ ತಡೆಗೋಡೆ ಹಾಕಲಾಗುವುದೆಂದರು.
ಅಧಿಕ ಭಾರದ ಸಾಮಗ್ರಿಗಳನ್ನು ಸಾಗಿಸುವುದರಿಂದಲೂ ರಸ್ತೆ ಹಾಳಾಗುವುದನ್ನು ಮನಗಂಡು ಅಧಿಕ ಭಾರದ ವಾಹನಗಳನ್ನುಸಂಚಾರದಲ್ಲಿ ನಿಯಂತ್ರಿಸಲು ಹಾಸನ ಜಿಲ್ಲೆಯ ಆಲೂರು ಬಳಿಯ ಭೈರಾಪುರ ಗೇಟ್ ಬಳಿ ವೇ ಬ್ರಿಡ್ಜ್ (ತೂಕದ ಮನೆ) ಸ್ಥಾಪಿಸಲಾಗುವುದು. ಇದಕ್ಕಾಗಿ 6 ಎಕರೆ ಪ್ರದೇಶವನ್ನು ಭೂಸ್ವಾಧೀನ ಪಡಿಸಲು ಕ್ರಮಕೈಗೊಳ್ಳಲಾಗಿದೆಯಲ್ಲದೆ, ಕೊಪ್ಪಳದ ಬಳಿಯ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ವೇಬ್ರಿಡ್ಜ್ ತೆರೆಯಲಾಗುವುದು. ನಿಗದಿತ ತೂಕದಷ್ಟೇ ವಾಹನವನ್ನು ರಸ್ತೆ ಮೇಲೆ ಬಿಡಲಾಗುವುದಲ್ಲದೆ ನಿಯಮ ಉಲ್ಲಂಘಿಸಿದವರಿಗೆ ಅಧಿಕ ದಂಡ ವಿಧಿಸಲಾಗುವುದೆಂದರು. ಇಂತಹ ವಾಹನಗಳನ್ನು ತಪಾಸಣೆಗೊಳಪಡಿಸಲು ಪೊಲೀಸ್ ಇಲಾಖೆಯಿಂದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ವಹಿಸಲು ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದರು.
ಮುಂದುವರಿದ ಫ್ರಾನ್ಸ್ ಮತ್ತಿತರ ರಾಷ್ಟ್ರಗಳಲ್ಲಿ ಮಳೆಗಾಲದಲ್ಲೂ ರಸ್ತೆ ದುರಸ್ಥಿಯ ಆಧುನಿಕ ಕ್ರಮಗಳಂತೆ ಅಗತ್ಯವಿರುವ ಶಿರಾಡಿ ಘಾಟ್ ರಸ್ತೆ ದುರಸ್ತಿ ಕೈಗೊಂಡು ಇದೇ ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದೆಂದರು.ಕಳೆದ 5 ವರಷ್ಗಳ ಅವಧಿಯಲ್ಲಿ 2008-09ನೇ ಸಾಲಿನಲ್ಲಿ ರಾಜ್ಯವು ಕೇಂದ್ರೀಯ ರಸ್ತೆ ನಿಧಿಯಿಂದ ರೂ. 553 ಕೋಟಿಗೂ ಹೆಚ್ಚು ಹಣವನ್ನು ಪಡೆದು ರಾಜ್ಯ ಹೆದ್ದಾರಿಗಳ ರಸ್ತೆ ಅಭಿವೃದ್ಧಿಯ 355 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.
ನಂಜುಂಡಪ್ಪ ವರದಿಯನ್ವಯ ರಾಜ್ಯದ ಹಿಂದುಳಿದ 114 ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ ರಸ್ತೆ ಕಾಮಗಾರಿಗಳಿಗಾಗಿರೂ. 280 ಕೋಟಿ ರೂ.ಗಳನ್ನು ವಿನಿಯೋಗಿಸಲಾಗುವುದೆಂದರು. ವಿಶೇಷ ಘಟಕ ಯೋಜನೆಯಡಿ ರೂ. 93.81 ಕೋಟಿ, ಗಿರಿಜನ ಅಭಿವೃದ್ಧಿ ಯೋಜನೆಯಡಿ 28.82 ಕೋಟಿ ಹಾಗು ಸುವರ್ನ ರಸ್ತೆ ಯೋಜನೆಯಡಿ ರೂ. 100 ಕೋಟಿ ಹಣವನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವಿನಿಯೋಗಿಸಲಾಗುವುದೆಂದರು. ಈಗಾಗಲೇ ಪಿಡಬಲ್ಯೂಡಿ ಕಟ್ಟಡ ಕಾಮಗಾರಿಗಳು ಆರಂಭಗೊಂಡು ಪ್ರಗತಿಯಲ್ಲಿರುವುದನ್ನು ನಿಲ್ಲಿಸದೆ ಮುಂದುವರೆಸಿ ಪೂರ್ನಗೊಳಿಸಲಾಗುವುದೆಂದರು.
ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಶ್ರೀ ಕೆ. ಸ್ವಾಮಿ, ಅಧೀಕ್ಷಕ ಇಂಜಿನಿಯರ್ ಬಿ. ಬಿ. ಜಗಲತರ, ಕಾರ್ಯಪಾಲಕ ಇಂಜಿನಿಯರ್ ಎಮ್. ಜಿ. ಸೋಮಶೇಖರ್ ಮುಂತಾದವರು ಸಚಿವರೊಡನೆ ಪಾಲ್ಗೊಂಡು ಮಾಹಿತಿ ಒದಗಿಸಿದರು.