Tuesday, January 18, 2011

ನೋಂದಾಯಿಸಲ್ಪಡದ ವೈದ್ಯಕೀಯ ಖಾಸಗಿ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಜನವರಿ. 18: ಕರ್ನಾಟಕ ಖಾಸಗಿ ವೈದ್ಯಕೀಯ ನೋಂದಣಿ ಅಧಿನಿಯಮ 2007 ಮತ್ತು ಕಾನೂನು 2009 ರ ಅನ್ವಯ ಖಾಸಗಿ ವೈದ್ಯಕೀಯ ಸಂಸ್ಥೆಗಳನ್ನು ನೋಂದಾಯಿಸಲು ಈಗಾಗಲೇ ಸಾಕಷ್ಟು ಅವಕಾಶ ನೀಡಲಾಗಿದ್ದು, ಇನ್ನೂ ಈ ಸಂಬಂಧ ಅರ್ಜಿ ಸ್ವೀಕರಿಸದ ಖಾಸಗಿ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕಾನೂನಿನ್ವಯ ಕಠಿಣ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಸೂಚಿಸಿದ್ದಾರೆ.

ಈ ಸಂಬಂಧ ಜಿಲ್ಲಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಜನವರಿ 14 ರಂದು ನಡೆದ ಸಭೆಯಲ್ಲಿ ಸದಸ್ಯ ಕಾರ್ಯದರ್ಶಿಗಳಾದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಓ. ಆರ್. ರಂಗಪ್ಪ ಅವರಿಗೆ ಕಾನೂನು ಅನುಷ್ಠಾನಕ್ಕೆ ನಿರ್ದೇಶನ ನೀಡಿರುವ ಜಿಲ್ಲಾಧಿಕಾರಿಗಳು, ಖಾಸಗಿ ವೈದ್ಯಕೀಯ ಸಂಸ್ಥೆಗಳು ಕಡ್ಡಾಯವಾಗಿ ಸರ್ಕಾರದ ಕಾನೂನನ್ನು ಅನುಷ್ಠಾನಕ್ಕೆ ತರಬೇಕೆಂದು ಹೇಳಿದರು.
ಕೆಪಿಎಂಇ (ಕರ್ನಾಟಕ ಪ್ರೈವೆಟ್ ಮೆಡಿಕಲ್ ಎಸ್ಟಾಬ್ಲಿಷ್ ಮೆಂಟ್ಸ್) ಕಾಯಿ ದೆಯಡಿ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಾವಣೆಗೆ ಅಕ್ಟೋಬರ್ 24,2010 ಅರ್ಜಿ ಸ್ವೀಕರಿಸಲು ಅಂತಿಮ ದಿನವಾಗಿತ್ತು. ಮಂಗಳೂರು ತಾಲೂಕಿನಲ್ಲಿ 995 ಅರ್ಜಿಗಳನ್ನು ವಿತರಿಸಲಾಗಿದ್ದು, 929 ಅರ್ಜಿಗಳು ಸ್ವೀಕೃತವಾಗಿವೆ. ಈವರೆಗೆ 103 ಸಂಸ್ಥೆಗಳನ್ನು ತಪಾಸಣೆ ನಡೆಸಿ 32 ಇವುಗಳಲ್ಲಿ ಅರ್ಹ ಎಂದು ಗುರುತಿಸಲಾಗಿದೆ. ಬಂಟ್ವಾಳದಲ್ಲಿ 165 ಅರ್ಜಿ ವಿತರಿಸಲಾಗಿದ್ದು, ಈವರೆಗೆ 165 ಸ್ವೀಕೃತ; 145 ತಪಾಸಣೆಯಾಗಿದ್ದು, 101 ನೋಂದಣಿಗೆ ಅರ್ಹ ಎಂದು ಗುರುತಿಸಲಾಗಿದೆ. ಪುತ್ತೂರಿನಲ್ಲಿ 228 165 ಅರ್ಜಿ ವಿತರಿಸಲಾಗಿದ್ದು, ಈವರೆಗೆ 200 ಸ್ವೀಕೃತ; 156 ತಪಾಸಣೆಯಾಗಿದ್ದು, 129 ನೋಂದಣಿಗೆ ಅರ್ಹ ಎಂದು ಗುರುತಿಸಲಾಗಿದೆ. ಸುಳ್ಯದಲ್ಲಿ ತಾಲೂಕಿನಲ್ಲಿ 96 ಅರ್ಜಿಗಳನ್ನು ವಿತರಿಸಲಾಗಿದ್ದು, 91 ಅರ್ಜಿಗಳು ಸ್ವೀಕೃತವಾಗಿವೆ. ಈವರೆಗೆ 33 ಸಂಸ್ಥೆಗಳನ್ನು ತಪಾಸಣೆ ನಡೆಸಿ 22 ಇವುಗಳಲ್ಲಿ ಅರ್ಹ ಎಂದು ಗುರುತಿಸಲಾಗಿದೆ. ಬೆಳ್ತಂಗಡಿಯಲ್ಲಿ 134 ಅರ್ಜಿಗಳನ್ನು ವಿತರಿಸಲಾಗಿದ್ದು, 126 ಅರ್ಜಿಗಳು ಸ್ವೀಕೃತವಾಗಿವೆ. ಈವರೆಗೆ 40 ಸಂಸ್ಥೆಗಳನ್ನು ತಪಾಸಣೆ ನಡೆಸಿ 35 ಅರ್ಹ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿದರು. ಪ್ರಸಕ್ತ ಈ ನಿಟ್ಟಿನಲ್ಲಿ ಹೆಚ್ಚಿನ ಪ್ರಗತಿ ದಾಖಲಿಸಲು ಈಗಿರುವ ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಈಗಿರುವ ತಂಡಗಳ ಜೊತೆಗೆ ಇನ್ನೂ 4 ಹೆಚ್ಚುವರಿ ತಂಡಗಳನ್ನು ರಚಿಸಲು ಜಿಲ್ಲಾಧಿಕಾರಿ ಸೂಚಿಸಿದರು. ಮಂಗಳೂರು ತಾಲೂಕಿನಲ್ಲಿ ಹೆಚ್ಚಿನ ಖಾಸಗಿ ಸಂಸ್ಥೆಗಳಿದ್ದು, ಸಂಸ್ಥೆಗಳು ಸ್ವಚ್ಛ ಪರಿಸರ, ಮೂಲಭೂತ ಸೌಕರ್ಯ ಸೇರಿದಂತೆ ರೋಗಿಗಳ ಸಮಗ್ರ ತಪಾಸಣಾ ದಾಖಲೆ, ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆ, ನೋಂದಣಿ ಸೇರಿದಂತೆ ಸಮಗ್ರ ಮಾಹಿತಿಯನ್ನು ಸಂಸ್ಥೆಯ ಹೊರಗೆ ಪ್ರದರ್ಶಿಸಬೇಕೆಂಬ ಷರತ್ತುಗಳಿವೆ. ಈ ಷರತ್ತುಗಳನ್ನು ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದ ಜಿಲ್ಲಾಧಿಕಾರಿಗಳು, ಪ್ರಥಮ ಚಿಕಿತ್ಸೆ, ಮೆಡಿಕೊ ಲೀಗಲ್ ಕೇಸ್ ಗಳು, ಸಾಂಕ್ರಾಮಿಕ ರೋಗಿಗಳನ್ನು ಕಡ್ಡಾಯವಾಗಿ ಪರೀಕ್ಷಿಸಿ, ಡಿ ಎಚ್ ಒ ಅವರಿಗೆ ವರದಿ ಸಲ್ಲಿಸಬೇಕು. ತಪಾಸಣೆಗೊಳಗಾಗದ ಸಂಸ್ಥೆಗಳನ್ನು ತಂಡ ಶೀಘ್ರದಲ್ಲೇ ತೆರಳಿ ತಪಾಸಣೆ ನಡೆಸಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಐ ಎಂ ಎ ಅಧ್ಯಕ್ಷರು ಎಲ್ಲಾ ತಾಲೂಕು ಕೇಂದ್ರದ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.