Saturday, November 27, 2010

ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರಕ್ಕೆ ಪರವಾನಿಗೆ ಕೋರಿದವರಿಗೆ ತಿಂಗಳೊಳಗೆ ಪರವಾನಿಗೆ ನೀಡಿ: ಸಚಿವ ಪಾಲೆಮಾರ್

ಮಂಗಳೂರು, ನವೆಂಬರ್. 27 : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಓಡಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಒಂದು ತಿಂಗಳೊಳಗೆ ಪರವಾನಿಗೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ನಿರ್ದೇಶನ ನೀಡಿದ್ದಾರೆ. ಪರವಾನಿಗೆ ಪಡೆದು ಬಸ್ ಓಡಿಸದಿದ್ದಲ್ಲಿ ಅಂತಹ ಪರವಾನಿಗೆಯನ್ನು ರದ್ದುಗೊಳಿಸುವಂತೆ ಮಂಗಳೂರು ಸಾರಿಗೆ ಅಧಿಕಾರಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್ 21ರಂದು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸುಗಳಿಗೆ ಪರವಾನಿಗೆ ನೀಡುವ ಕುರಿತಾದ ವಿಷಯಕ್ಕೆ ಸಂಬಂಧಿಸಿ ಯಾವುದೇ ಪ್ರಗತಿ ಆಗದಿರುವ ಬಗ್ಗೆ ಸಚಿವ ಪಾಲೆಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳು ಪರಿಹಾರಗೊಳ್ಳದೇ ಮುಂದುವರಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದರು.ಕೆಎಸ್ಆರ್ ಟಿಸಿಯವರಿಗೆ ಪರವಾನಿಗೆ ನೀಡಲು ಏನಾಗಿದೆ ಎಂದು ಪ್ರಶ್ನಿಸಿದ ಸಚಿವರು, ಈ ಬಗ್ಗೆ ಆರ್ ಟಿ ಒ ವಿಶೇಷ ಸಭೆ ಕರೆದು 31 ದಿನಗಳೊಳಗೆ ಅರ್ಜಿ ಸಲ್ಲಿಸಿರುವವರಿಗೆ ಪರವಾನಿಗೆ ನೀಡಬೇಕೆಂದು ಆದೇಶಿಸಿದರು.
ಸರಕಾರಿ ಭೂಮಿಯಲ್ಲಿ ಮನೆಕಟ್ಟಿ ವಾಸಿಸುತ್ತಿರುವವರಿಗೆ ಮನುಷ್ಯರೆಂಬ ಆಧಾರದಲ್ಲಿ ತಾತ್ಕಾಲಿಕ ಮನೆ ನಂಬ್ರ ನೀಡಿ ಅವರು ಸರಕಾರಿ ಸೌಲಭ್ಯ ಪಡೆಯಲು ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮನೆನಂಬ್ರ ಕೇವಲ ತಾತ್ಕಾಲಿಕವಾಗಿ ನೀಡಿ. ಅದೇನು ಹಕ್ಕುಪತ್ರ ಕೊಡುವುದಲ್ಲ. ಮನೆನಂಬ್ರ ಪಡೆದುಕೊಂಡವರಿಂದ ಅಫಿದಾವಿತ್ ಪಡೆದುಕೊಂಡು ಮುಂದೆ ಮನೆ ಖಾಲಿ ಮಾಡಬೇಕಾದ ಸಂದರ್ಭ ತಕರಾರು ಮಾಡದ ರೀತಿಯಲ್ಲಿ ಹಾಗೂ ಮುಂದೆ ಸರಕಾರದಿಂದ ಸೂಕ್ತ ಆದೇಶ ಬರುವವರೆಗೆ ತಾತ್ಕಾಲಿಕ ಮನೆನಂಬ್ರ ನೀಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಕಾಯ್ದೆಯಡಿ 1704 ಅರ್ಜಿಗಳು ಬಂದಿವೆ. ಆ ಪೈಕಿ 262 ಅರಣ್ಯ ಭೂಮಿ ಹಕ್ಕು ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. 1416 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 26 ಅರ್ಜಿಗಳು ಅರಣ್ಯ ಇಲಾಖೆಯಲ್ಲಿವೆ. ಮಾನ್ಯ ಮಾಡಲಾದ ಅರ್ಜಿಗಳ ಪೈಕಿ 67 ಬಫರ್ ಭೂಮಿಗೆ ಸಂಬಂಧಪಟ್ಟಿದ್ದು ಕಂದಾಯ ಇಲಾಖೆ ಇತ್ಯರ್ಥ ಪಡಿಸಬೇಕಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರಾ.ಹೆ. 17- ಡಿಸೆಂಬರ್ 15ರೊಳಗೆ ಪ್ಯಾಚ್ ವರ್ಕ್:
ತಲಪಾಡಿ ತೊಕ್ಕೊಟ್ಟು ನಡುವಿನ ರಸ್ತೆ ತೀರ ನಾದುರಸ್ತಿಯಲ್ಲಿದ್ದು, ಈಗಾಗಲೆ ಮಾಡಿರುವ ಪ್ಯಾಚ್ ವರ್ಕ್ ಕೆಲಸವೂ ಸಮರ್ಪಕವಾಗಿಲ್ಲ ಎಂದು ಶಾಸಕ ಖಾದರ್ ಆಕ್ಷೇಪಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್, ಈಗಾಗಲೆ ಪ್ಯಾಚ್ ವರ್ಕ್ ಕಾರ್ಯ ನಡೆಯುತ್ತಿದ್ದು, ಮಳೆಯಿಂದಾಗಿ ತೊಂದರೆಯಾಗಿದೆ. ಮುಂದಿನ ಡಿಸೆಂಬರ್ 15ರೊಳಗೆ ಈ ರಾ.ಹೆದ್ದಾರಿಯ ಪ್ಯಾಚ್ ವರ್ಕ್ ಸಂಪೂರ್ಣಗೊಳ್ಳಲಿದೆ. ಬಳಿಕ ಮರು ಡಾಮರೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ದ.ಕ. ಜಿಲ್ಲೆಯಾದ್ಯಂತ ಈ ಬಾರಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕು. ಅತಿವೃಷ್ಟಿಯಿಂದಾಗಿರುವ ನಷ್ಟದ ಬಗ್ಗೆ ಮಾಹಿತಿ ಒದಗಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರಾದ ಅಭಯಚಂದ್ರ ಜೈನ್ ಹಾಗೂ ಯು.ಟಿ.ಖಾದರ್ ಆಗ್ರಹಿಸಿದರು. ಈ ತನಕ ಬಂದ ಮಾಹಿತಿಯಂತೆ ದ.ಕದಲ್ಲಿ ಅಕಾಲಿಕ ಮಳೆಗೆ 132.6 ಎಕರೆ ಭತ್ತದ ಬೆಳೆಗೆ ಹಾನಿಯಾಗಿರುವುದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪದ್ಮಯ ನಾಯ್ಕ್ ತಿಳಿಸಿದರು.
ಇದೇ ವೇಳೆ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಕೂಡಾ ಪೂರಕವಾಗಿ ಮಾತನಾಡುತ್ತಾ, ಈ ಬಾರಿ ಅತಿವೃಷ್ಟಿಯಿಂದಾಗಿ ಅಡಿಕೆ ಒಣಗಿಸುವ ಪರಿಸ್ಥಿತಿ ಇಲ್ಲವಾಗಿದೆ. ಸರಕಾರ ಅಡಿಕೆ ಒಣಗಿಸಲು ಪಾಲಿಥಿನ್ ಶೀಟ್ಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಕೋರಿದರು. ಬೆಳೆ ಹಾನಿಯ ಬಗ್ಗೆ ಮಾಹಿತಿ ಒದಗಿಸುವಂತೆ ರೈತರಿಗೆ ಮಾಹಿತಿ ನೀಡಿ ಡಿಸೆಂಬರ್ 7ರೊಳಗೆ ವರದಿಯನ್ನು ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಮಾತ್ರವಲ್ಲದೆ, ಬೆಳೆ ಹಾನಿಗೊಳಗಾದವರು ಈ ಬಗ್ಗೆ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಉಸ್ತುವಾರಿ ಸಚಿವರು ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಎರಡು ನಿಗಮಗಳ ಪ್ರಗತಿ ಕುಂಠಿತವಾಗಿರುವ ಕುರಿತು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ನಿಗಮಗಳ ಜಿಲ್ಲಾ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.
ಕೇರಳಕ್ಕೆ ಮರಳು ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವ ಪಾಲೆಮಾರ್ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರು. ಪೊಲೀಸ್ ಇಲಾಖೆ ಅವರೊಂದಿಗೆ ಸಹಕರಿಸುವಂತೆಯೂ ಮಂತ್ರಿಗಳು ಸಲಹೆ ಮಾಡಿದರು.
ತುಂಬೆ ಅಣೆಕಟ್ಟು: 193 ಎಕರೆ ಭೂಮಿ ಮುಳುಗಡೆ
ಮಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ತುಂಬೆಯಲ್ಲಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟಿ ನಿಂದ ಮುಳುಗಡೆಯಾಗುವ ಪ್ರದೇಶಗಳ ಮಾಹಿತಿಯನ್ನು ಮತ್ತು ಅಗತ್ಯವಿರುವ ಪರಿಹಾರದ ಮೊತ್ತ ಕುರಿತಂತೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಂಗಳೂರಿನ ಸ್ಟುಪ್ ಕನ್ಸಲ್ಟೆನ್ಸಿ ಈಗಾಗಲೇ ಮುಳುಗಡೆಯಾಗುವ ಪ್ರದೇಶಗಳ ಸಮೀಕ್ಷೆ ಪೂರ್ತಿಗೊಳಿಸಿದೆ. ನದಿಪಾತ್ರದ 6 ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟಿನಿಂದಾಗಿ ಭೂಮಿ ಮುಳುಗಡೆಯಾಗಲಿದೆ. ಮುಳುಗಡೆಯಾಗುವ ಪ್ರದೇಶದ ವಿಸ್ತೀರ್ಣ 193 ಎಕರೆಯಾಗಿದ್ದು , ಅದು ಫಲವತ್ತಾದ ಕೃಷಿಭೂಮಿಯಾಗಿರುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಮುಳುಗಡೆ ಪ್ರದೇಶಕ್ಕೆ ಎಕರೆಗೆ ಅಂದಾಜು ರೂ. 10 ಲಕ್ಷದಂತೆ ಪರಿಹಾರ ನೀಡಲು ಸುಮಾರು ರೂ. 20 ಕೋಟಿ ಬೇಕಾಗಿದೆ. ಕಿಂಡಿ ಅಣೆಕಟ್ಟು ನಿರ್ಮಿಸಲು ಮಾತ್ರ ಸರಕಾರದಿಂದ ಅನುದಾನ ಮಂಜೂರಾಗಿದೆ. ಭೂ ಸ್ವಾಧೀನಕ್ಕೆ ಅನುದಾನ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು. ಮುಳುಗಡೆ ಪ್ರದೇಶ, ಪರಿಹಾರ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಸಚಿವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗ್ಡೆ, ಸದಾನಂದ ಮಲ್ಲಿ , ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.