Friday, November 19, 2010

ಲೋಕೋಪಯೋಗಿ ಇಲಾಖೆಯಿಂದ 265 ಕೋಟಿ ರೂ. ಕಾಮಗಾರಿ ಪ್ರಗತಿ

ಮಂಗಳೂರು,ನವೆಂಬರ್ 19: ಲೋಕೋಪಯೋಗಿ ಇಲಾಖೆ ರೂ.265 ಕೋಟಿಯ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿಗಳೆಲ್ಲವೂ ಪ್ರಗತಿಯಲ್ಲಿದೆ. ಮಂಗಳೂರು ವಿಭಾಗದಲ್ಲಿ ವಿವಿಧ ಯೋಜನೆಗಳಡಿ ಮಿನಿ ವಿಧಾನಸೌಧ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಸುಳ್ಯ ಮಿನಿ ವಿಧಾನಸೌಧ, ನ್ಯಾಯಲಯ ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಇಲಾಖೆಗೆ ಮತ್ತೆ ರೂ.160 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಲೋಕೋ ಪಯೋಗಿ ಇಲಾಖೆಯ ವೃತ್ತ ಕಚೇರಿಗೆ ಭೇಟಿ ನೀಡಿ ಕಾರ್ಯಾಲಯದ ನವೀಕರಣ ಕಾಮಗಾರಿ ವೀಕ್ಷಿಸಿದ ಬಳಿಕ ಸಚಿವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಬಂದರು ಇಲಾಖೆಯ ರೂ. 15 ಕೋಟಿಯ ಕಾಮಗಾರಿ ಪ್ರಗತಿಯಲ್ಲಿದೆ. ರೂ. 358 ಕೋಟಿಯ ಕಾಮಗಾರಿ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಮೀನುಗಾರಿಕಾ ಇಲಾಖೆಯ ರೂ. ಒಂದು ಕೋಟಿ ಮೌಲ್ಯದ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದೆ. ರೂ. 3.2 ಕೋಟಿ ಮೌಲ್ಯದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ವಿವರಿಸಿದರು.
ಪಿಲಿಕುಳ ನಿಸರ್ಗಧಾಮದಲ್ಲಿ ತಾರಾಲಯ ನಿರ್ಮಾಣಕ್ಕಾಗಿ ಸರಕಾರ ರೂ. 15.5 ಕೋಟಿ ಮಂಜೂರು ಮಾಡಿದೆ. ಯೋಜನೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ನುಡಿದರು.ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗಾಗಿ ಹಿಂದೆ ವಿಭಾಗಗಳಲ್ಲಿ ಒಂದೊಂದರಂತೆ ಪ್ರಯೋಗಾಲಯಗಳಿದ್ದವು. ಈಗ ಪ್ರತೀ ತಾಲೂಕಿಗೆ ಒಂದರಂತೆ ಪ್ರಯೋಗಾಲಯ ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಕಾಮಗಾರಿಗಳಲ್ಲಿ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವ ಪಾಲೆಮಾರ್ ಹೇಳಿದರು.
ಲೋಕೋಪಯೋಗಿ ಇಲಾಖೆ ಮತ್ತು ಇತರ ಕಚೇರಿ ಸಮುಚ್ಛಯಗಳ ಪೈಕಿ ಲೋಕೋಪಯೋಗಿ ಇಲಾಖೆಯ ಕಾರ್ಯಾಲಯವನ್ನು ನವೀಕರಿಸಲಾಗಿದೆ. ಉಳಿದ ಇಲಾಖೆಗಳ ನವೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ಎಸ್.ಬಾಲಕೃಷ್ಣ ಮತ್ತು ಕಾರ್ಯನಿರ್ವಾಹಕ ಅಭಿಯಂತರ ಗೋಪಾಲ್ ಗೌಡ ಉಪಸ್ಥಿತರಿದ್ದರು.