ಜಿಲ್ಲೆಯಲ್ಲಿ ಕಳೆದ 4 ವರ್ಷಗಳಲ್ಲಿ 16424 ತಪಾಸಣೆ ಮಾಡಿ 30 ಬಾಲಕಾರ್ಮಿಕರ ಪತ್ತೆ:ಬಾಲಕಾರ್ಮಿಕ ಪದ್ದತಿ ನಿರ್ಮೂಲನಾ ಕ್ರಿಯಾ ಯೋಜನೆ ಅನುಷ್ಠಾನದನ್ವಯ ಜಿಲ್ಲೆಯಲ್ಲಿ 2007-08 ರಿಂದ 2010-11 ರ ವರೆಗೆ ಕಾಮಿಕ ಇಲಾಖಾಧಿಕಾರಿಗಳು ಹಾಗೂ ಇತರ ಇಲಾಖಾಧಿಕಾರಿಗಳು ಒಟ್ಟು 16424 ತಪಾಸಣೆಗಳನ್ನು ,ನಡೆಸಿ 30 ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆಯೆಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ತಿಳಿಸಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನಾ ಕ್ರಿಯಾ ಯೋಜನೆ ಅನುಷ್ಠಾನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಪತ್ತೆ ಹಚ್ಚಲಾದ 30 ಬಾಲಕಾರ್ಮಿಕರ ಪುನರ್ ವಸತಿ ಕಲ್ಪಿಸಲಾಗಿದೆ. ಬಾಲಕಾರ್ಮಿಕರಿಗೆ ಪುನರ್ ವಸತಿ ಕಲ್ಪಿಸುವ ನಿಧಿಗಾಗಿ ಮಾಲೀಕರಿಂದ ಒಟ್ಟು 2,25,000/- ರೂ.ಗಳ ನಿಧಿ ವಸೂಲಿ ಮಾಡಲಾಗಿದೆ
2011 ನೇ ಮೇ ಮಾಹೆಯಲ್ಲಿ ಮಂಗಳೂರಿನ ಬಂದರಿನಲ್ಲಿರುವ ಧಕ್ಕೆಯಲ್ಲಿ ಮೂರು ಬಾಲಕಾರ್ಮಿಕರನ್ನು ಪತ್ತೆಹಚ್ಚಿ ಕೆಲಸದಿಂದ ವಿಮುಕ್ತಿಗೊಳಿಸಿ ಶಾಲೆಗೆ ದಾಖಲಿಸಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ್ ಅಪ್ಪಯ್ಯ ಶಿಂದಿಹಟ್ಟಿ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಸರ್ಕಾರಿ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ಪೋಷಕರಿಂದ ತಮ್ಮ ಮನೆಗಳಲ್ಲಿ/ಅಂಗಡಿಗಳಲ್ಲಿ ಬಾಲಕಾರ್ಮಿಕರನ್ನು ನೇಮಿಸಿ ಕೊಂಡಿಲ್ಲ ಎಂಬ ಘೋಷಣಾ ಪತ್ರ ಪಡೆದು ಜಿಲ್ಲಾಧಿಕಾರಿಗಳಿಗೆ ದೃಢೀಕರಣ ನೀಡಬೇಕು ಎಂದು ಈಗಾಗಲೇ ತಿಳಿಸಲಾಗಿದ್ದು, ಜಿಲ್ಲೆಯ 913 ಶಾಲಾ ಕಾಲೇಜುಗಳಿದ್ದು ಈ ರೀತಿ ದೃಢೀಕರಣ ನೀಡಿದವರು ಹಲವರು ಮಾತ್ರ. ಆದ್ದರಿಂದ ಎಲ್ಲಾ ಶೈಕ್ಷಣಿಕ ಸಂಸ್ಥೆಗಳವರು ಕೂಡಲೇ ದೃಢೀಕರಣ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪುತ್ತೂರು ಉಪವಿಭಾಗಾಧಿಕಾರಿ ಡಾ.ಹರೀಶ ಕುಮಾರ್ ,ಕಾರ್ಮಿಕ ಅಧಿಕಾರಿ ನಾಗೇಶ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.