ಸ್ಥಳೀಯರ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸಿ, ನಿರುದ್ಯೋಗ ಸಮಸ್ಯೆ ಪರಿಹರಿಸಲು ಹಾಗೂ ಸ್ವ ಉದ್ಯೋಗದಿಂದ ಕುಗ್ರಾಮದ ಜನರನ್ನು ಸಬಲೀಕರಿಸುವ ಯೋಜನೆ ಬೆಳ್ತಂಗಡಿ ತಾಲೂಕಿನ ಕುತ್ಲೂರಿನ ಅಳಂಬೆಯಲ್ಲೂ ಆರಂಭಗೊಂಡಿದೆ.
ಮಲೆಕುಡಿಯರೇ ವಾಸಿಸುತ್ತಿರುವ ಈ ಪ್ರದೇಶಗಳಲ್ಲಿ ಜೀವನ ನಿರ್ವಹಣೆಗೆ ಇವರು ಕಾಡುತ್ಪತ್ತಿಗಳನ್ನು ಹಾಗೂ ಬುಟ್ಟಿ ಹೆಣೆಯುವಿಕೆಯನ್ನು ನೆಚ್ಚಿದ್ದರು. ಆದರೆ ಇಲಾಖೆಯು ಸುವರ್ಣವಸ್ತ್ರ ಯೋಜನೆಯಡಿ ಒಂದೂವರೆ ಲಕ್ಷ ರೂ. ನಿಮರ್ಾಣ ವೆಚ್ಚ ಮತ್ತು ತರಬೇತಿ ವೆಚ್ಚ ಸೇರಿ ಒಟ್ಟು 3ಲಕ್ಷ 72,000 (6 ತಿಂಗಳ ಅವಧಿಗೆ) ವ್ಯಯಿಸಿದ್ದು, ಯೋಜನೆ ಯಶಸ್ವಿಯಾಗಿದೆ. ಸ್ಥಳೀಯರ ಸಹಕಾರದೊಂದಿಗೆ ಆರಂಭಿಸಿದ ಕೈಮಗ್ಗ ತರಬೇತಿ ಕೇಂದ್ರ ಸ್ಥಳೀಯರ ಜೀವನ ಶೈಲಿಯನ್ನು ಬದಲಿಸಿದೆ. ಸ್ಥಳೀಯ ಪ್ರದೇಶಗಳ ಪಾಂಜಾಳ, ಸುಲ್ಕೇರಿ, ನಾಯಿದಗುರಿ, ಅಲೆಕ್ಕಿ, ಕಲ್ಲಾಜೆಯ 20 ಮಂದಿ ತರಬೇತಿಗೆ ಸೇರ್ಪಡೆಗೊಂಡವರಲ್ಲಿ 18 ಜನರು ತರಬೇತಿ ಪಡೆಯುತ್ತಿದ್ದು, ಇವರಲ್ಲಿ ನಾಲ್ಕು ಗಂಡು ಮಕ್ಕಳು. ಇಬ್ಬರು ತರಬೇತಿಯನ್ನು ಅರ್ಧದಲ್ಲೇ ಕೈಬಿಟ್ಟಿದ್ದಾರೆ. ಉಳಿದವರು ಆರು ತಿಂಗಳ ತರಬೇತಿಗೆ ಸೇರ್ಪಡೆಗೊಂಡಿದ್ದು ನಾಲ್ಕನೇ ತಿಂಗಳ ತರಬೇತಿ ಪಡೆಯುತ್ತಿದ್ದಾರೆ; ಖುಷಿಯಾಗಿದ್ದಾರೆ.
ತರಬೇತಿ ಪಡೆದ ಬಳಿಕ ಪ್ರತಿಯೊಬ್ಬರು ಪ್ರತಿದಿನ 150 ರೂ. ಆದಾಯ ಗಳಿಸಬಹುದಾಗಿದ್ದು, ಒಬ್ಬರು ಒಂದು ದಿನಕ್ಕೆ ಮೂರು ಲುಂಗಿ, ನಾಲ್ಕು ಬೆಡ್ ಷೀಟ್ ನೇಯಲು ಸಾಧ್ಯ ಎನ್ನುತ್ತಾರೆ ಇಲಾಖೆಯ ಸಹಾಯಕ ನಿರ್ದೇಶಕ ಯೋಗೀಶ್ ಕುಮಾರ್ ಅವರು. ತರಬೇತಿ ಪಡೆದವರನ್ನು ಅರ್ಧದಲ್ಲೇ ಕೈಬಿಡದೆ ಆರು ತಿಂಗಳ ತರಬೇತಿ ಬಳಿಕ ತರಬೇತಿ ಪಡೆದವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ದುಡಿಮೆ ಬಂಡವಾಳ ಮತ್ತು ಮನೆ ಕಟ್ಟಿಸಿಕೊಳ್ಳಲು ವೈಯಕ್ತಿಕವಾಗಿ ಲಿವಿಂಗ್ ಕಮ್ ವರ್ಕ್ ಷೆಡ್ ಗಳನ್ನು ನಿರ್ಮಿಸಲು 40,000 ರೂ. ಸಹಾಯಧನ 20,000 ರೂ. ಸಾಲವನ್ನು ಶೇ. 9ರ ಬಡ್ಡಿ ದರದಲ್ಲಿ 6 ತಿಂಗಳಿಗೊಮ್ಮೆ 20 ಕಂತಿನಲ್ಲಿ 10 ವರ್ಷ ಪಾವತಿಸುವ ಯೋಜನೆಯೂ ಇದೆ. ಇಲ್ಲಿ ಮೊದಲನೇ ತರಬೇತಿ ತಂಡ ಫೆಬ್ರವರಿಯಲ್ಲಿ ಸೇರ್ಪಡೆಗೊಂಡಿದ್ದಾರೆ. ತರಬೇತಿ ಅವಧಿಯಲ್ಲಿ ಇವರಿಗೆ ತಿಂಗಳಿಗೆ 2,000 ರೂ. ಸ್ಟೈಫಂಡ್ ನೀಡಲಾಗುವುದು. ಇಲಾಖೆಯಿಂದಲೇ ತರಬೇತಿ ಪಡೆದು ಪರಿಣತರಾಗಿ ಸ್ಥಳೀಯವಾಗಿದ್ದುಕೊಂಡು ತರಬೇತಿ ನೀಡುವವರನ್ನು ಶಿಕ್ಷಕರನ್ನಾಗಿ ನೇಮಿಸಲಾಗುವುದು.
ಇನ್ನು ನೇಕಾರರ ಕಲ್ಯಾಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ಸ್ಕಾಲರ್ ಷಿಪ್, ವೈದ್ಯಕೀಯ ಪರಿಹಾರ ಮೊತ್ತ ಗರಿಷ್ಠ 50,000 ರೂ.ಗಳವರೆಗೆ ಮರುಪಾವತಿ ಮಾಡಲಾಗುವುದು. ಐಸಿಐಸಿಯ ಲ್ಯಾಂಬಾರ್ಡ ಆರೋಗ್ಯ ವಿಮಾ ಯೋಜನೆಯಡಿ ವರ್ಷಕ್ಕೆ 50 ರೂ. ಕಟ್ಟಿದರೆ 15,000 ರೂ.ಗಳ ವೈದ್ಯಕೀಯ ವೆಚ್ಚದ ಮರುಪಾವತಿ ಮಾಡಲಾಗುವುದು. ಒಂದು ಕುಟುಂಬದ 4 ಜನರು ವಿಮೆಯ ಲಾಭ ಪಡೆಯಬಹುದು.
ತರಬೇತಿ ಪಡೆದವರಿಗೆ ಇನ್ನಷ್ಟು ಉತ್ತಮ ಅವಕಾಶ ಸೃಷ್ಟಿಸಲು ಅನುಕೂಲವಾಗುವಂತೆ ಹೊರರಾಜ್ಯಗಳಿಗೆ ಅಧ್ಯಯನ ಪ್ರವಾಸ ಕರೆದೊಯ್ಯುವ ಯೋಜನೆಯೂ ಇದೆ. ಈ ಕೇಂದ್ರಗಳಲ್ಲಿ ತರಬೇತಿ ಪಡೆಯಲು ಸ್ಥಳೀಯರಾಗಿರಬೇಕು. ಆಸಕ್ತಿಯಿರಬೇಕು, ನಿರುದ್ಯೋಗಿಗಳಾಗಿರಬೇಕು ಎಂಬ ನಿಬಂಧನೆಗಳು ಮಾತ್ರ.ಎಸ್ ಕೆ ಆರ್ ಡಿ ಪಿ ಉಜಿರೆ ಮತ್ತು ಮಿಜಾರು ನೇಕಾರರ ಸಹಕಾರಿ ಸಂಘದವರು ಈ ತರಬೇತಿ ಪಡೆಯುತ್ತಿರುವ ಫಲಾನುಭವಿಗಳು ಉತ್ಪಾದನೆ ಚಟುವಟಿಕೆ ಆರಂಭಿಸಿದಾಗ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ಮುಂದೆ ಬಂದಿರುತ್ತಾರೆ.
ಇಲಾಖೆ ಕೈಮಗ್ಗ ವೃತ್ತಿಯಲ್ಲಿ ಪಳಗಿದವರು ವಿದ್ಯುತ್ ಮಗ್ಗ ಹಾಕಲು ಮುಂದಾದರೆ ವೆಚ್ಚದ ಶೇ. 50ರಷ್ಟು ಗರಿಷ್ಠ ಒಂದು ಲಕ್ಷ ರೂ. ಸಹಾಯಧನವನ್ನು ಸರ್ಕಾರದಿಂದ ನೀಡಲು ಯೋಜಿಸಲಾಗಿದೆ.