Monday, September 19, 2011

ನಗರದ ಅಭಿವೃದ್ಧಿಗೆ ಪಿಪಿಪಿ ಮಾದರಿ: ಜಿಲ್ಲಾಉಸ್ತುವಾರಿ ಸಚಿವರ ಸಭೆ

ಮಂಗಳೂರು,ಸೆಪ್ಟೆಂಬರ್.19: ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಮಯ ಮಿತಿ ನಿಗದಿಯಡಿ ಕಾಮಗಾರಿಗಳನ್ನು ಮುಗಿಸಬೇಕಿದ್ದು, ಬಳಿಕ ರಾಜ್ಯ ಸರ್ಕಾರಕ್ಕೆ ನೂತನ ಪ್ರಸ್ತಾವನೆಗಳನ್ನು ಸಲ್ಲಿಸಬೇಕಿದೆ.
ಇದಕ್ಕೆ ಪೂರಕವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿಯವರ ಸಹಕಾರದಲ್ಲಿ ಸುಮಾರು 45 ಕಿ.ಮೀ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕಟ್ಟಡ ನಿರ್ಮಾಪಕರು ಮತ್ತು ಗುತ್ತಿಗೆದಾರರು, ಇಂಜಿನಿಯರ್ ಅಸೋಸಿಯೇಷನ್, ವಿನ್ಯಾಸಗಾರರು ರಸ್ತೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿತಮ್ಮ ಸಹಕಾರವನ್ನು ನೀಡಬೇಕಿದೆ ಎಂದು ಜೀವಿಶಾಸ್ತ್ರ, ಪರಿಸರ, ಬಂದರು, ಒಳನಾಡು ಜಲಸಾರಿಗೆ, ವಿಜ್ಞಾನ ಮತ್ತುತಂತ್ರಜ್ಞಾನ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ಪಾಲಿಕೆ ಅಧಿಕಾರಿಗಳು, ಬಿಲ್ಡರ್ಸ್, ಇಂಜಿನಿಯರ್ಸ್ ಅಸೋಸಿಯೇಷನ್ ನವರ ಜೊತೆ ನಗರಾಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಮಾಜದಿಂದ ಪಡೆದುಕೊಂಡದ್ದನ್ನು ಮತ್ತೆ ಸಮಾಜಕ್ಕೆ ನೀಡಿ ಎಂಬ ಸದುದ್ದೇಶದ ಜೊತೆಗೆ ಸಮನ್ವಯ ಹಾಗೂ ಸಹಕಾರದಿಂದ ಅಭಿವೃದ್ಧಿಗೆ ವೇಗ ನೀಡಲು ಈ ಸಭೆ ನಡೆಸಿದರು.ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಭೆಯಲ್ಲಿ ದೊರೆಯಿತು.
ಸುಮಾರು 115 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ಈ ಬಗ್ಗೆ ನಿರ್ಧಾರಕ್ಕೆ ಬರಲು ಒಂದು ವಾರದ ಸಮಯಾವಕಾಶವನ್ನು ಅವರು ಸಚಿವರಲ್ಲಿ ಕೋರಿದರು. ಪ್ರತೀ ಒಂದು ಕಿ.ಮೀ ರಸ್ತೆಯ ಉಸ್ತುವಾರಿಯನ್ನು, ಗುಣಮಟ್ಟ ಪರಿಶೀಲನೆಗೆ ಒಬ್ಬ ಇಂಜಿನಿಯರ್ ಎಂಬಂತೆ, ಓನ್ನ್ ಯುನರ್ ರೋಡ್, ಓನ್ ಯುವರ್ ಪಾರ್ಕ್ ಮಾದರಿಯ ಮುಂದುವರಿದ ಹಂತದಲ್ಲಿ ಮೂರು ಮಾದರಿಯಲ್ಲಿ ಇವರೆಲ್ಲರಿಂದ ಸಚಿವರು ಸಹಕಾರ ಕೋರಿದರು.
ಎಸ್ ಕೆ ಎಸ್ ಬಿಲ್ಡರ್ಸ್ ನ ಸನತ್ ಅವರು ನಗರದ ಕೆಪಿಟಿಯಿಂದ ಪದವು ವರೆಗಿನ ರಸ್ತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲು ಒಪ್ಪಿದರು.ಕೆ ಸಿ ನಾಯಕ್ ಅವರು ಸಚಿವರ ಮಾರ್ಗದರ್ಶನದಂತೆ ನಗರಾಭಿವೃದ್ಧಿಗೆ ಕೈಗನ್ನಡಿಯಂತಿರುವ ರಸ್ತೆ ಸಂಪರ್ಕ ಅಭಿವೃದ್ಧಿಗೆ ನೆರವು ನೀಡುವುದಾಗಿ ಹೇಳಿದರು.ಇಂಜಿನಿಯರ್ಸ್ ಅಸೋಸಿಯೇಷನ್ ನವರು ತಾಂತ್ರಿಕ ನೆರವು ನೀಡುವ ಭರವಸೆ ನೀಡಿದರು.ರಸ್ತೆ ಸಂಪರ್ಕಕ್ಕೆ ಆದ್ಯತೆಯನ್ನು ನೀಡಿ ನಗರದಲ್ಲಿರುವ ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಾಗಬೇಕೆಂದರು.ಮಾಧ್ಯಮಗಳು ಅಭಿವೃದ್ಧಿ ವರದಿಗೆ ಸಹಕಾರ ನೀಡಬೇಕೆಂದರು.
ಪ್ರವಾಸೋದ್ಯಮ, ಘನತ್ಯಾಜ್ಯ ನಿರ್ವಹಣೆ, ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಕಟ್ಟುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
10,000ರೂ.ಗಳವರೆಗೆ ಬಹುಮಾನ: ಲಾರಿಗಳಲ್ಲಿ ಡೆಬರಿ ಮತ್ತು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಬಗ್ಗೆ ಮಾಹಿತಿ ನೀಡುವವರಿಗೆ, ಕೆರೆಗಳಿಗೆ ಮಣ್ಣು ತುಂಬಿಸುವ ಕುರಿತು ಮಾಹಿತಿ ನೀಡುವವರಿಗೆ ಒಂದು ಸಾವಿರ ರೂ.ಗಳಿಂದ ಹತ್ತು ಸಾವಿರದವರೆಗೆ ಬಹುಮಾನ ನೀಡಲು ಪರಿಸರ ಇಲಾಖೆ ಯೋಜಿಸಿದ್ದು, ಶೀಘ್ರದಲ್ಲೇ ಆದೇಶ ಜಾರಿಯಾಗಲಿದೆ ಎಂದರು. ನಗರದ ದೇವಾಲಯಗಳ ಎದುರಿನ ರಸ್ತೆಗಳನ್ನು ದೇವಾಲಯದವರು ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಸಲಹೆ ಬಂತು.ಸಾಮಾಜಿಕ ಜವಾಬ್ದಾರಿಗಳ ಬಗ್ಗೆ, ಜನರ ನಿರೀಕ್ಷೆಯ ಬಗ್ಗೆ, ಅಭಿವೃದ್ದಿಗೆ ವೇಗ ನೀಡುವ ಬಗ್ಗೆ ಸಭೆಯಲ್ಲಿಉತ್ತಮ ಸಲಹೆಗಳು ಮೂಡಿಬಂದವು.ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರು ನಮ್ಮ ಪರಿಸರ, ನಮ್ಮ ನಗರದ ಅಭಿವೃದ್ಧಿಯಲ್ಲಿ ನಮ್ಮ ಸಹಭಾಗಿತ್ವದ ಕುರಿತು ಮಾತನಾಡಿದರು.ಮೇಯರ್ ಪ್ರವೀಣ್ ಅಂಚನ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಉಪಸ್ಥಿತರಿದ್ದರು.