Friday, September 16, 2011

ಅಡಿಕೆ ಬೆಳೆಗಾರರ ಗಮನಕ್ಕೆ

ಮಂಗಳೂರು,ಸೆಪ್ಟೆಂಬರ್.16:ಜಿಲ್ಲೆಯಲ್ಲಿ ಮುಂದುವರಿದ ಮಳೆಯಿಂದಾಗಿ ಹೆಚ್ಚಿನಅಡಿಕೆ ಬೆಳೆಗಾರರ ತೋಟಗಳಿಗೆ ಅಡಿಕೆ ಕೊಳೆ ರೋಗದ ಹಾವಳಿ ಕಂಡು ಬಂದಿದೆ. ಕೊಳೆ ರೋಗದ ಹಾವಳಿ ತಡೆಗೆ ಶೆ.1 ರ ಬೋರ್ಡೋ ದ್ರಾವಣ ಸಿಂಪರಣೆಯನ್ನು ಮುಂದುವರಿಸಲು ತೋಟಗಾರಿಕಾ ಉಪನಿರ್ದೇಶಕರು ಬೆಳೆಗಾರರಿಗೆ ಸಲಹೆ ಮಾಡಿದ್ದಾರೆ.
ಶೇ.1 ಬೋರ್ಡೋ ದ್ರಾವಣ ತಯಾರಿಗೆ ಒಂದು ಕೆ ಜಿ ಮೈಲುತುತ್ತ ಹಾಗೂ 1.1 ಕೆ ಜಿ ಸುಟ್ಟಚಿಪ್ಪು ಸುಣ್ಣ ಹಾಗೂ 100 ಲೀ ನೀರು ಬಳಸಬೇಕು.ಇಲಾಖೆಯಲ್ಲಿ ವಿವಿಧ ಯೋಜನೆಗಳಡಿ ಮೈಲುತುತ್ತ ಮತ್ತು ಸುಣ್ಣ ಖರೀದಿಗೆ ಶೇ 50 ಸಹಾಯ ಧನ ಕೊಡಲಾಗುತ್ತಿದೆ.ಪ್ರತಿಯೊಬ್ಬ ರೈತರಿಗೆ ಗರಿಷ್ಠ 2.5 ಎಕರೆಯೊಂದಕ್ಕೆ 400 ರೂ.ಗಳಂತೆ ಗರಿಷ್ಠ 1000 ಸಹಾಯಧನ ಶೇ.50ರಷ್ಟು ದರದಲ್ಲಿ ನೀಡಲಾಗುವುದು.ರೈತರು ಟಿನ್ ನಂಬರ್ ಹೊಂದಿರುವ ಸರಬರಾಜುದಾರರಲ್ಲಿ ಖರೀದಿಸಿ ಖರೀದಿಯ ನಗದು ಬಿಲ್ಲಿನೊಂದಿಗೆ ನಿಗದಿತ ಅರ್ಜಿ ನಮೂನೆಯಲ್ಲಿ ಪಹಣಿ ಪತ್ರದೊಂದಿಗೆ ರೈತ ಸಂಪರ್ಕಕೇಂದ್ರ/ತೋಟಗಾರಿಕೆ ಕಚೇರಿಗೆ ಅರ್ಜಿ ಸಲ್ಲಿಸಬೆಕು. ಪಹಣಿ ಪತ್ರದಲ್ಲಿ ಅಡಿಕೆ ಬೆಳೆ ದಾಖಲಾತಿ ಇಲ್ಲದಿದ್ದಲ್ಲಿ ಗ್ರಾಮಕರಣಿಕರ ದೃಢೀಕರಣ ಪತ್ರ ಲಗತ್ತಿಸಬೇಕು.
ಶೇ.50ಕ್ಕಿಂತ ಹೆಚ್ಚು ಫಸಲು ಕೊಳೆ ರೋಗದ ಹಾವಳಿಯಿಂದ ನಷ್ಟವಾಗಿದ್ದಲ್ಲಿ ಹೆ.6000 ದಂತೆ (ಎಕರೆಗೆ 550 ಮರಗಳಿಗೆ 2400) ಪರಿಹಾರವನ್ನು ಕಂದಾಯ ಇಲಾಖೆಯ ಮುಖಾಂತರ ಪಡೆಯಬಹುದಾಗಿದೆ.ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ತಾಲೂಕು ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.