Thursday, September 15, 2011

ಅಕ್ಟೋಬರ್ 12 ರಿಂದ ಜಿಲ್ಲೆಯಲ್ಲಿ ಕನ್ನಡ ನುಡಿ ತೇರು ಜಾಥಾ

ಮಂಗಳೂರು,ಸೆಪ್ಟೆಂಬರ್.15: ಕನ್ನಡಿಗರಲ್ಲಿ ನಾಡು ನುಡಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜೊತೆಗೆ ಅನ್ಯ ಭಾಷಿಕರಲ್ಲಿ ಕನ್ನಡ ಪ್ರೀತಿ ಅಭಿಮಾನ ಮೂಡಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ,ದ.ಕ.ಜಿಲ್ಲಾ ಆಡಳಿತ,ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಕನ್ನಡ ಸಂಘಟನೆಗಳ ಸಹಕಾರದಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ಟೋಬರ್ 12 ರಿಂದ 14 ರ ವರೆಗೆ 3 ದಿನಗಳು ಜಿಲ್ಲೆಯಾದ್ಯಂತ ಕನ್ನಡ ನುಡಿ ತೇರು ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮುಖ್ಯಮಂತ್ರಿ ಚಂದ್ರು ಅವರು ತಿಳಿಸಿದ್ದಾರೆ.
ಜಾಥಾ ಕಾರ್ಯಕ್ರಮದಲ್ಲಿ ಸಂಸದರು,ಶಾಸಕರು,ಸ್ಥಳೀಯ ಚುನಾಯಿತ ಪ್ರತಿನಿಧಿಗಳು,ಸಾಹಿತಿಗಳು,ಕಲಾವಿದರು,ರಂಗಕರ್ಮಿಗಳು,ಸಂಘಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿರುವರು ಎಂದು ಅವರು ತಿಳಿಸಿದ್ದಾರೆ.
ಕನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ ಎಂದು ಕರ್ನಾಟಕ ಸರ್ಕಾರ ಘೋಷಿಸಿದೆ,ಕನ್ನಡವನ್ನು ಶಿಕ್ಷಣ ಮಾಧ್ಯಮದ ಪ್ರಧಾನ ಭಾಷೆಯಾಗಿ ಬಳಕೆಗೆ ತರಲು ಪ್ರಯತ್ನಗಳು ಸಾಗಿವೆ. ರಾಜ್ಯದಲ್ಲಿರುವ ಉದ್ಧಿಮೆಗಳಲ್ಲಿ ಕನ್ನಡಿಗರಿಗೆ ನೇಮಕಾತಿಯಲ್ಲಿ ಆದ್ಯತೆ ನೀಡ ಬೇಕೆಂದು ಆಗ್ರಹಿಸುತ್ತಿದ್ದರೂ,ಇವ್ಯಾವುವೂ ಸಂಪೂರ್ಣ ಜ್ಯಾರಿಗೆ ಬಂದಿಲ್ಲವೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.ಯಾವುದೇ ಭಾಷಿಗರನ್ನು ದ್ವೇಷಿಸದೇ ಎಲ್ಲಾ ಭಾಷಿಗ ಜನರನ್ನು ಗೌರವಾಧರಗಳಿಂದ ,ಅವರು ಕನ್ನಡ ವಾತಾವರಣದ ಒಳಗಡೆ ಅವರನ್ನು ತರುವ ಹಾಗೂ ಸಾಮರಸ್ಯ ಸೌಹಾರ್ಧತೆಯನ್ನು ಕಾಪಾಡುವುದು ನಮ್ಮ ಕರ್ತವ್ಯ ವಾಗಿದೆ.ಇದಕ್ಕೆ ಪೂರಕವಾಗಿ ಕನ್ನಡ ನುಡಿತೇರು ಜಾಥಾ ನೆರ ವಾಗಲಿದೆ.