Wednesday, April 10, 2013

ಸದಾಚಾರ ಸಂಹಿತೆ ಉಲ್ಲಂಘನೆ ತಡೆಗೆ ಪ್ಲೈಯಿಂಗ್ ಸ್ಕ್ವಾಡ್ ಗಳು ಸನ್ನದ್ಧ


ಮಂಗಳೂರು ಏಪ್ರಿಲ್ 10: ಏಪ್ರಿಲ್ 10ರಿಂದ ಜಿಲ್ಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳು ತಮ್ಮ ಕರ್ತವ್ಯವನ್ನು ಆರಂಭಿಸಿದ್ದು, ಒಂದು ಕ್ಷೇತ್ರದಲ್ಲಿ ಕನಿಷ್ಠ 3 ತಂಡಗಳು ಕಾರ್ಯಾಚರಿಸುತ್ತಿವೆ. ಎಲ್ಲ ತಂಡಗಳು 24 ಗಂಟೆಯೂ ಜಾಗೃತ ಸ್ಥಿತಿಯಲ್ಲಿರಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ನಿರ್ದೇಶನ ನೀಡಿದರು.
ಏಪ್ರಿಲ್ 9 ರಂದು ಮಂಗಳವಾರ  ಸಂಜೆ 7 ಗಂಟೆಯ ವೇಳೆಗೆ ಜಿಲ್ಲೆಯ ಎಲ್ಲ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಜೊತೆ ಆಡಿಯೋ ಕಾನ್ಫರೆನ್ಸ್ ಮೂಲಕ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಚುನಾವಣಾ ಸದಾಚಾರ ಸಂಹಿತೆ ಉಲ್ಲಂಘನೆ ಕಂಡು ಬಂದರೆ ತಕ್ಷಣ ಕ್ರಮಕೈಗೊಳ್ಳಬೇಕೆಂದರು.
ನಿಮ್ಮ ನಿಮ್ಮ ಕ್ಷೇತ್ರಕ್ಕೆ ಆರ್ ಒ ಕಡೆಯಿಂದ ಅಗತ್ಯವಿರುವ ಎಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡಿ. ಜಿಲ್ಲಾ ವ್ಯಾಪ್ತಿಯದ್ದಾದರೆ ಜಿಲ್ಲಾ ಚುನಾವಣಾಧಿಕಾರಿಗಳನ್ನು ಸಂಪರ್ಕಿಸಲು ತಿಳಿಸಿ ಎಂದರು. ವಾಹನ, ಕೇಟರಿಂಗ್, ಹೋಟೆಲ್ ಗಳನ್ನೊಳಗೊಂಡಂತೆ, ಶಾಮಿಯಾನದವರು ಲೆಕ್ಕಾಚಾರ ಕೊಡಬೇಕು.
ಚೆಕ್ಪೋಸ್ಟ್ನಲ್ಲಿ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳ ವಾಹನವನ್ನು ಕಡ್ಡಾಯವಾಗಿ ತಪಾಸಣೆಗೊಳಪಡಿಸಬೇಕು. ಹಾಗೇನಾದರೂ ತಪಾಸಣೆ ಮಾಡದೆ ಸೆಲ್ಯುಟ್ ಹೊಡೆದು ವಾಹನಗಳನ್ನು ಬಿಟ್ಟರೆ ತಕ್ಷಣವೇ ಅಲ್ಲಿರುವ ಸಿಬ್ಬಂದಿಗಳನ್ನು ಅಮಾನತು ಮಾಡಲಾಗುವುದು ಎಂಬ ಎಚ್ಚರಿಕೆ ಸಂದೇಶವನ್ನು ಜಿಲ್ಲಾಧಿಕಾರಿಗಳು ವಯರರ ಲೆಸ್ ಮೂಲಕ ನೀಡಿದ್ದಾರೆ. 
ಅಬಕಾರಿ ಇಲಾಖೆಯವರು, ಪೋಲಿಸ್ ಸಿಬಂದಿ, ಫ್ಲೈಯಿಂಗ್ ಸ್ಕ್ವಾಡ್ ನಲ್ಲಿದ್ದು, ಬೆಳಗ್ಗೆ ಹಾಲು ಬೂತ್ ಗಳು ಕದ ತೆರೆಯುವ ಮುನ್ನ ಸ್ಥಳಿಯ ಸಣ್ಣ ಗೂಡಂಗಡಿಗಳಲ್ಲಿ ಸಾರಾಯಿ ಪ್ಯಾಕೆಟ್ ವಿತರಣೆಯಾಗುತ್ತಿದ್ದು, ಅದಕ್ಕೆ ಸರತಿ ಸಾಲಿನಲ್ಲಿ ಬೆಳಗ್ಗೆ ಕ್ಯೂ ನಿಲ್ಲುವ ದೃಶ್ಯ ತನ್ನ ಗಮನಕ್ಕೆ ಬಂದಿದೆ. ಇಂತಹ  ಪ್ರಕರಣಗಳ ಬಗ್ಗೆ ನಿಗಾ ಇರಿಸಿ ತಡೆಯುವ ಕ್ರಮವಾಗಬೇಕು ಎಂದರು. ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಸೂಕ್ತ ಆದೇಶಗಳನ್ನು ನೀಡಲಿದ್ದು,  ಸಮರ್ಪಕವಾಗಿ ಪಾಲನೆಯಾಗಬೇಕು. ಆದೇಶಗಳು ಪಾಲನೆಯಾಗದೆ ಉಳಿದರೆ ಕಠಿಣ ಕ್ರಮ ಖಚಿತ ಎಂದರು.
ಎಲ್ಲ ಮಾಹಿತಿಗಳು  1077 ಕಂಟ್ರೋಲ್ ರೂಂಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.