Friday, April 12, 2013

ಚುನಾವಣಾ ನಾಮಪತ್ರ ಸಲ್ಲಿಕೆ: ಪಾಲಿಸಬೇಕಾದ ನಿಯಮಗಳು

ಮಂಗಳೂರು, ಎಪ್ರಿಲ್. 12:- ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2013 ಅಧಿಸೂಚನೆ ಈಗಾಗಲೇ ಪ್ರಕಟವಾಗಿದ್ದು,ನಾಮಪತ್ರ ಸ್ವೀಕಾರ ಆರಂಭವಾಗಿರುತ್ತದೆ.ನಾಮಪತ್ರ ನೀಡಲು ಚುನಾವಣಾಧಿಕಾರಿ ಕಚೇರಿಗೆ ಅಭ್ಯರ್ಥಿ ತೆರಳುವ ಸಮಯದಲ್ಲಿ ಮೆರವಣಿಗೆಯ ಮೂಲಕ ಬೆಂಬಲಿಗರೊಂದಿಗೆ ಸಾಗಿ ನಾಮಪತ್ರ ನೀಡುವುದನ್ನು ಕಳೆದ ಎಲ್ಲಾ ಚುನಾವಣೆಗಳಲ್ಲಿ ಗಮನಿಸಲಾಗಿದ್ದು,ಈ ಕುರಿತು ಚುನಾವಣಾ ಆಯೋಗ ಕಾಲಕಾಲಕ್ಕೆ ಹೊರಡಿಸಿರುವ ಎಲ್ಲಾ ನಿರ್ದೇಶನಗಳನ್ನು ಚುನಾವಣಾಧಿಕಾರಿ ಮತ್ತು ಅಭ್ಯರ್ಥಿ ಪಾಲಿಸುವುದು ಕಡ್ಡಾಯವಾಗಿರುತ್ತದೆ. ಆದುದರಿಂದ ಇಂತಹ ಮೆರವಣಿಗೆಗಳಿಗೆ ಅನುಮತಿ ನೀಡಬೇಕಾದ ಚುನಾವಣಾಧಿಕಾರಿ ಪಾಲಿಸಬೇಕಾದ ನಿಯಮಗಳ ಕುರಿತು ಮಗದೊಮ್ಮೆ ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟೀಕರಣ ನೀಡಿದ್ದಾರೆ.
ನಾಮಪತ್ರ ಸಲ್ಲಿಸುವ ವ್ಯಕ್ತಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಮೆರವಣಿಗೆ ಮೂಲಕ ಸಾಗಿ ಬಂದು ನಾಮಪತ್ರ ನೀಡಲು ಇಚ್ಚಿಸಿದಲ್ಲಿ ಮೆರವಣಿಗೆಗೆ ಅನುಮತಿ ಚುನಾವಣಾಧಿಕಾರಿಯಿಂದ ಕಡ್ಡಾಯವಾಗಿ ಪಡೆಯತಕ್ಕದ್ದು. ಇಂತಹ ಲಿಖಿತ ಕೋರಿಕೆ ಬಂದ ಸಂದರ್ಭದಲ್ಲಿ ಚುನಾವಣಾಧಿಕಾರಿ ಕಡ್ಡಾಯವಾಗಿ ಪೋಲೀಸ್ ಇಲಾಖೆಯ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸತಕ್ಕದ್ದು.
ಪೋಲೀಸ್ ಇಲಾಖೆಯ ನೋಡಲ್ ಅಧಿಕಾರಿಯೊಂದಿಗೆ ಚರ್ಚಿಸಿದ ನಂತರ ಮೆರವಣಿಗೆಗೆ ಅನುಮತಿ ನೀಡಬಹುದೆಂದು ಅಭಿಪ್ರಾಯ ಪಟ್ಟಲ್ಲಿ,ಮೆರವಣಿಗೆಗೆ ಶರ್ತಬದ್ಧ ಅನುಮತಿ ನೀಡುವುದು.ಮೆರವಣಿಗೆ ಅನುಮತಿ ನಿರಾಕರಿಸಲು ಸಕಾರಣ ಇದೆ ಎಂದು ಕಂಡು ಬಂದಲ್ಲಿ ಸಕಾರಣದೊಂದಿಗೆ ಅನುಮತಿ ನಿರಾಕರಿಸುವುದು.ಈ ರೀತಿ ಹಿಂಬರಹ ನೀಡುವ ಮೊದಲು ಜಿಲ್ಲಾ ಚುನಾವಣಾಧಿಕಾರಿ ಮತ್ತು ಪೋಲೀಸ್ ವರಿಷ್ಠಾಧಿಕಾರಿಯೊಂದಿಗೆ ಚರ್ಚ ನಡೆಸಿ ಅವರ ನಿರ್ದೇಶನ ಪಡೆಯುವುದು.
ಲಿಖಿತ ಕೋರಿಕೆಯಲ್ಲಿ ಅರ್ಜಿದಾರರು ಮೆರವಣಿಗೆಯ ಎಲ್ಲಾ ವಿವರಗಳನ್ನು ಕಡ್ಡಾಯವಾಗಿ ನೀಡತಕ್ಕದ್ದು. ಭಾಗವಹಿಸುವ ಬೆಂಬಲಿಗರು ವಾಹನ ಮೆರವಣಿಗೆ ಸಾಗುವ ದಾರಿ,ಸಮಯ ಮತ್ತು ಉಪಯೋಗಿಸುವ ಇತರೆ ವಸ್ತುಗಳು ಹಾಗೂ ಎಲ್ಲಾ ಶರ್ತಗಳನ್ನು ಕಡ್ಡಾಯವಾಗಿ ಪಾಲಿಸುವ ದೃಢೀಕರಣ ಪತ್ರವನ್ನು ಅರ್ಜಿದಾರರು ನೀಡತಕ್ಕದ್ದು.
 ಅರ್ಜಿಯನ್ನು ವಿಲೇಗೊಳಿಸುವ ಸಂದರ್ಭದಲ್ಲಿ ಪೋಲೀಸ್ ಇಲಾಖೆಯ ಅಭಿಪ್ರಾಯ ಕಡ್ಡಾಯವಾಗಿ ಪಡೆಯುವುದು. ಇಲಾಖೆಯ ಎಲ್ಲಾ ಸಲಹೆ ಸೂಚನೆಯನ್ನು ಗಣನೆಗೆ ತೆಗೆದುಕೊಳ್ಳುವುದು.
ಮೆರವಣಿಗೆ ಸಾಗುವ ದಾರಿ,ಸಮಯ,ರಸ್ತೆಯ ಅಗಲ ಮತ್ತು ಸಾರ್ವಜನಿಕ ಸುಗಮ ಸಂಚಾರಕ್ಕೆ ಧಕ್ಕೆ ಬರುವ ಕುರಿತು ಪೋಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳುವುದು.ಯಾವುದೇ ಕಾರಣಕ್ಕೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಧಕ್ಕೆಯಾಗದ ರೀತಿಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವುದು.ಸುಗಮ ಸಂಚಾರಕ್ಕೆ ಧಕ್ಕೆಯಾಗದಂತೆ ಯಾವುದೇ ರಾಜಿ ಮಾಡಿಕೊಳ್ಳದೇ ತೀರ್ಮಾನ ಕೈಗೊಳ್ಳುವುದು ಮತ್ತು ವಿವೇಚನಾಯುಕ್ತವಾಗಿ ತೀರ್ಮಾನ ಕೈಗೊಳ್ಳುವುದು ಚುನಾವಣಾಧಿಕಾರಿಯವರ ಆದ್ಯ ಕರ್ತವ್ಯವಾಗಿರುತ್ತದೆ.
ಅನುಮತಿ ನೀಡುವಾಗ ಮೆರವಣಿಗೆಯಲ್ಲಿ ಸಾಗುವ ಜನ ಮತ್ತು ವಾಹನ ಪಾಲಿಸಬೇಕಾದ ರೀತಿ,ನೀತಿ,ನಿಯಮದ ಕುರಿತು ಸ್ಪಷ್ಟವಾದ ಶರ್ತ ವಿಧಿಸುವುದು.
ಪ್ರತೀ 100 ಮೀಟರ್ ಅಂತರದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಒಂದು ಬ್ರೇಕ್ ನೀಡಬೇಕು. ಈ ಅಂತರದಲ್ಲಿ ಮೆರವಣಿಗೆಯಲ್ಲಿ ಕೇವಲ ಮೂರು ವಾಹನಗಳಿಗೆ ಮಾತ್ರ ಅವಕಾಶವಿರುವುದು.ಅಂದರೆ ಪ್ರತೀ 100 ಮೀಟರ್ ನಂತರ ಒಂದು ಗ್ಯಾಪ್ ನೀಡಬೇಕು. ಭಾಗವಹಿಸುವ ವಾಹನಕ್ಕೆ ಚುನಾವಣಾಧಿಕಾರಿಯವರಿಂದ ಅನುಮತಿ ಪಡೆಯಬೇಕು.
ವಾಹನಕ್ಕೆ ಧ್ವನಿವರ್ಧಕ  ಅಳವಡಿಸಿ ಸಂಚರಿಸಲು  ಅವಕಾಶವಿರುವುದಿಲ್ಲ.ಧ್ವನಿವರ್ಧಕ ಬಳಸುವ ನಿರ್ಧಿಷ್ಟ ಸ್ಥಳಗಳ ಕುರಿತು ಮೊದಲೇ ಮಾಹಿತಿ ನೀಡಿ ಅನುಮತಿ ಪಡೆಯಬೇಕು.
ಬಾವುಟಗಳನ್ನು ಜನರು ಕೈಯಲ್ಲಿ ಹಿಡಿದುಕೊಂಡು ಪ್ರದರ್ಶಿಸಬಹುದು.ಆದರೆ ವಾಹನಕ್ಕೆ ಕಟ್ಟಿ ಪ್ರದರ್ಶಿಸಲು ಅವಕಾಶವಿರುವುದಿಲ್ಲ.ಟೀಶರ್ಟ್,ಟೋಪಿ ಮತ್ತು ಶಾಲುಗಳಲ್ಲಿ ಪಕ್ಷದ ಚಿಹ್ನೆ,ಅಭ್ಯರ್ಥಿಯ ಭಾವಚಿತ್ರ ಹಾಗೂ ಇತರೆ ಪ್ರಚಾರದ ವಿಷಯಗಳನ್ನು  ಮುದ್ರಿಸಿ ಪ್ರದರ್ಶಿಸುವಂತಿಲ್ಲ .ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿರುತ್ತದೆ.
ನೃತ್ಯ,ಬ್ಯಾಂಡ್ ಮೊದಲಾದವುಗಳನ್ನು ಮೆರವಣಿಗೆಯಲ್ಲಿ ಅಳವಡಿಸುವ ಕುರಿತು ಅನುಮತಿ ಕೋರಿದಾಗ ಸದ್ರಿ ವಿಷಯ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಚುನಾವಣಾಧಿಕಾರಿಯವರು ದೃಢೀಕರಿಸಿಕೊಳ್ಳುವುದು.ಶಬ್ದ ಮಾಲಿನ್ಯ ಉಂಟು ಮಾಡುವಂತಹ ವಸ್ತುಗಳನ್ನು ಬಳಸುವಾಗ ಕಾಯಿದೆಯಡಿ ಅವಕಾಶ ಇರುವುದಕ್ಕಿಂತ ಹೆಚ್ಚಿನ ಪ್ರಮಾಣದ ಶಬ್ಚ ಉಂಟು ಮಾಡದಂತೆ ಶರ್ತ ವಿಧಿಸುವುದು.
ಇಡೀ ನಗರ ಪ್ರದೇಶದಲ್ಲಿ ಸಂಚರಿಸಿ ನಾಗರೀಕರ ಸುಗಮ ಸಂಚಾರಕ್ಕೆ ಅಡ್ಡಿ ಪಡಿಸಬಹುದಾಂತಹ ಅತೀ ದೂರ ಕ್ರಮಿಸಬಹುದಾದ ಮೆರವಣಿಗೆಗೆ ಅವಕಾಶ ನೀಡಬಾರದು.
ಒಮ್ಮೆ ಚುನಾವಣಾಧಿಕಾರಿಯವರಿಂದ ಅನುಮತಿ ಪಡೆದ ನಂತರ ಅರ್ಜಿದಾರ ಯಾವುದೇ ಕಾರಣಕ್ಕೂ ಮೆರವಣಿಗೆಯ ದಾರಿ ಮತ್ತು ಸಮಯವನ್ನು ಬದಲಾಯಿಸಬಾರದು.
ಯಾವುದೇ ರೀತಿಯಲ್ಲಿ ಜನರ ಧಾರ್ಮಿಕ ಭಾವನೆ ಕೆರಳಿಸುವ  ಮತ್ತು ಪರಸ್ಪರ ದ್ವೇಷ ಮೂಡಿಸುವ ಹೇಳಿಕೆ, ಭಾಷಣ ಮಾಡದಂತೆ ನಿರ್ಬಂಧ ವಿಧಿಸುವುದು.ಹಣ ಬಲ ಪ್ರದರ್ಶಿಸುವಂತಹ ಮೆರವಣೆಗೆಗೆ ಅವಕಾಶ ನೀಡಬಾರದು ಮತ್ತು ಅಂತಹ ಪ್ರಯತ್ನ ಮಾಡಬಾರದಾಗಿ ಅರ್ಜಿದಾರರಿಗೆ ಸೂಚಿಸುವುದು.
ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾಗದಂತೆ ಮೆರವಣಿಗೆ ಸಮಯದಲ್ಲಿ ಜಾಗ್ರತೆ ವಹಿಸಲು ಸೂಚಿಸಿದೆ.
ಚುನಾವಣಾಧಿಕಾರಿ ಕಚೇರಿ 100 ಮೀಟರ್ ಅಂತರದಲ್ಲಿ ಚುನಾವಣಾ ಆಯೋಗದ ನಿರ್ದೆಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ನಿರ್ದೇಶಿಸಿದೆ.
ಎಲ್ಲಾ ಅಭ್ಯರ್ಥಿಗಳಿಗೆ ಒಂದೇ ರೀತಿಯ ಅವಕಾಶ ಕಲ್ಪಿಸಲು ಅನುಕೂಲಕರ ವಾತಾವರಣ ನಿರ್ಮಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಪಾಲಿಸಲು ಚುನಾವಣಾಧಿಕಾರಿ ಪ್ರಯತ್ನಿಸುವುದು.
ಯಾವುದೇ ಅಮಿಷ ಒಡ್ಡದಂತೆ ಕ್ರಮ ವಹಿಸುವುದು ಮತ್ತು ಮೆರವಣಿಗೆಗೆ ಆಹಾರ ವ್ಯವಸ್ಥೆಯನ್ನು ಮಾಡದಂತೆ ನಿರ್ಬಂಧ ವಿಧಿಸುವುದು.
ಕಾಲಕಾಲಕ್ಕೆ ಚುನಾವಣಾ ಆಯೋಗ ನೀಡಿದ ಎಲ್ಲಾ ನಿರ್ದೇಶನಗಳನ್ನು ಚುನಾವಣಾಧಿಕಾರಿ ಪಾಲಿಸಲು ಕ್ರಮ ವಹಿಸುವ ಮೂಲಕ ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಮೆರವಣಿಗೆಯ ಸಂದರ್ಭದಲ್ಲಿ ಆಗುವಂತೆ ನೋಡಿಕೊಳ್ಳುವುದು.ಇದಕ್ಕಾಗಿ ಸೆಕ್ಟರ್ ಮ್ಯಾಜಿಸ್ಟ್ರೇಟ್/ಸೆಕ್ಟರ್ ಆಫೀಸರ್ಸ್ ಮತ್ತು ವಿಡಿಯೋ ಸರ್ವೆಲೆನ್ಸ್ ಟೀಮ್ ಗೆ ಸೂಕ್ತ ನಿರ್ದೇಶನ ನೀಡುವುದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮವಹಿಸದ ಚುನಾವಣಾಧಿಕಾರಿಗಳ ಮೇಲೆ ಶಿಸ್ತು ಕ್ರಮದ ಅನಿವಾರ್ಯತೆ ಉಂಟಾಗದಂತೆ  ಕ್ರಮವಹಿಸಲು ಜಿಲ್ಲಾ ಚುನಾವಣಾಧಿಕಾರಿಗಳು  ಹಾಗೂ ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.