Saturday, December 11, 2010

ನಮ್ಮ ಮನೆ, ವಾಜಪೇಯಿ ವಸತಿ ಯೋಜನೆ ಗುರಿ- ಸಾಧನೆ: ಜಿಲ್ಲಾಧಿಕಾರಿ ಅಸಮಾಧಾನ

ಮಂಗಳೂರು,ಡಿಸೆಂಬರ್ 11: ನಮ್ಮ ಮನೆ ಹಾಗೂ ವಾಜಪೇಯಿ ವಸತಿ ಯೋಜನೆಯ ಗುರಿ-ಸಾಧನೆ ಹಾಗೂ ಫಲಾನುಭವಿಗಳ ಆಯ್ಕೆ ಬಗ್ಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿಗದಿತ ಗುರಿ ಸಾಧನೆ ತೋರದಿದ್ದರೆ ಚೀಫ್ ಆಫೀಸರ್ ಗಳನ್ನು ವೈಫಲ್ಯಕ್ಕೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಫಲಾನುಭವಿಗಳಿಗೆ ಸಮಗ್ರ ಮಾಹಿತಿ ನೀಡಿ ಆಯ್ಕೆಯಾದ ಫಲಾನುಭವಿಗಳ ಪಟ್ಟಿ ಬ್ಯಾಂಕಿನಿಂದ ತಿರಸ್ಕೃತಗೊಂಡರೆ ಅಧಿಕಾರಿಗಳೇ ಅದಕ್ಕೆ ಹೊಣೆ ಹೊರಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಿ ಸಾಧನೆ ದಾಖಲಿಸಲು ಸಮಯಮಿತಿಯನ್ನು ಜಿಲ್ಲಾಧಿಕಾರಿಗಳು ನಿಗದಿಪಡಿಸಿದರು. ಬೇಡಿಕೆ ಇಲ್ಲದಿದ್ದಲ್ಲಿ ಅದನ್ನು ಲಿಖಿತ ರೂಪದಲ್ಲಿ ದಾಖಲಿಸಿ ಯೋಜನೆಯ ಅಗತ್ಯ ಜಿಲ್ಲೆಗಿಲ್ಲವೆಂಬುದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕಾದ ಹೊಣೆಯೂ ಅಧಿಕಾರಿಗಳದ್ದೇ ಎಂದರು.
ಎಸ್ ಎಫ್ ಸಿ ಮತ್ತು ಕಾರ್ಪೋರೇಷನ್ ಫಂಡ್ ನಲ್ಲಿ ಕೇವಲ ಶೇಕಡ 10 ಅಭಿವೃದ್ಧಿ ದಾಖಲಾತಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳು, ಡಿಸೆಂಬರ್ ಅಂತ್ಯದ ವೇಳೆಗೆ ಶೇಕಡ 70 ಸಾಧನೆ ದಾಖಲಿಸಬೇಕೆಂದರು. ಈ ಸ್ಕೀಮ್ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ತಾಳಿದರೆ ಶೋಕಾಸ್ ನೋಟೀಸ್ ಜಾರಿ ಮಾಡಲು ಸೂಚಿಸಿದರಲ್ಲದೆ ಬಂಟ್ವಾಳ ಮುಖ್ಯ ಅಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದರು. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ನಗರ ಅಭಿವೃದ್ಧಿ ಯೋಜನೆಯಡಿ ಆರಂಭವಾದ ಕಾಮಗಾರಿಗಳೆಲ್ಲವು ಜನವರಿ ತಿಂಗಳ ಅಂತ್ಯದೊಳಗೆ ಮುಗಿಯಬೇಕೆಂದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಕಾಮಗಾರಿ ವಿಳಂಬಕ್ಕೆ ಯಾವುದೇ ಸಬೂಬು ನೀಡಬಾರದೆಂದರು.