Monday, December 20, 2010

ವಾಮಾಚಾರ,ಮಗು ಬಲಿ ಪ್ರಕರಣ:ಜಿಲ್ಲಾಡಳಿತದಿಂದ ತನಿಖೆ ಆರಂಭ

ಮಂಗಳೂರು,ಡಿಸೆಂಬರ್ 20 :ಡಿಸೆಂಬರ್ 16 ರಂದು
ಮಂಗಳೂರಿನ ಯೆಯ್ಯಾಡಿ ಸಮೀಪ ಕಂಪದ ಕೋಡಿ ಎಂಬಲ್ಲಿ ನಡೆದಿದೆ ಶಂಕಿತ ವಾಮಾಚಾರಕ್ಕೆ ಮಗು ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತ ತನಿಖೆ ಆರಂಭಿಸಿದೆ. ರವಿವಾರ ಮಂಗಳೂರು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಅವರು ಘಟನೆ ನಡೆದ ಸ್ತಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳಿಯರಿಂದ ಮತ್ತು ಹತ್ಯೆಯಾದ ಮಗು ಪ್ರಿಯಾಂಕಳ ಹೆತ್ತವರಿಂದ ಮಾಹಿತಿ ಸಂಗ್ರಹಿಸಿದರು.ಇನ್ನೆರಡು ದಿನಗಳಲ್ಲಿ ಘಟನೆಯ ಕುರಿತಂತೆ ಸಮಗ್ರ ವರದಿಯನ್ನು ಜಿಲ್ಲಾಧಿಕಾರಿಗೆ ಸಹಾಯಕ ಆಯುಕ್ತರು ನೀಡಲಿದ್ದಾರೆ.
ರಾಜ್ಯ ಮಕ್ಕಳ ಹಕ್ಕು ಆಯೋಗ ಖಂಡನೆ:
ದಿನಾಂಕ 16-12-10 ರಂದು ಕಂಪದಕೋಡಿ ಮಂಗಳೂರಿನಲ್ಲಿ 3 ವರ್ಷದ ಮುಗ್ಧ ಮಗುವನ್ನು ಪೂಜೆಯ ಕಾರಣ ನೀಡಿ ಕಾಳ ಭೈರವ ಗುಡಿಯೊಂದರಲ್ಲಿ ಅಮಾನವೀಯವಾಗಿ ಅಮಾನುಷವಾಗಿ ಕೊಲೆ ಮಾಡಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ವಿಷಯವಾಗಿರುತ್ತದೆ. ಈ ನಂಬಲಸಾಧ್ಯ ಘಟನೆಯಿಂದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತೀವ್ರ ಅಘಾತಕ್ಕೊಳಗಾಗಿರುತ್ತದೆ.21 ನೇ ಶತಮಾನದ ನಾಗರೀಕ ಸಮಾಜದಲ್ಲಿ ಇಂತಹ ಮೂಢನಂಬಿಕೆಗೆ ಮುಗ್ಧ ಹೆಣ್ಣು ಮಗುವಿನ ಕೊಲೆ ನಡೆದಿರುವುದು ಖಂಡನೀಯ.ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈ ರೀತಿಯ ಘಟನೆಗಳು ಎಲ್ಲಿಯೂ/ಯಾವಾಗಲೂ ನಡೆಯದಂತೆ ತಡೆಯಲು ಸಾರ್ವಜನಿಕರಲ್ಲಿ ಸಹಕಾರವನ್ನು ಕೋರುತ್ತದೆ. ಇಂತಹ ಘಟನೆ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ,4ನೇ ಮಹಡಿ ,ಕೃಷಿ ಭವನ,ನೃಪತುಂಗ ರಸ್ತೆ,ಬೆಂಗಳೂರು ದೂ.ಸಂ.22115292 ಕ್ಕೆ ಮಾಹಿತಿ ನೀಡಲು ಕೋರಿದೆ.