Friday, January 18, 2013

ಸಮಚಿತ್ತದಿಂದ ಕೆಲಸ ಮಾಡಲು ಯೋಗ- ಸಿ.ಟಿ.ರವಿ

ಮಂಗಳೂರು,ಜನವರಿ.18:-ಸ್ಪರ್ಧಾತ್ಮಕವಾದ ಇಂದಿನ ದಿನಗಳಲ್ಲಿ, ಯೋಗ ಮಾನವರು ಒತ್ತಡ ಮುಕ್ತರಾಗಿ ಸಮಚಿತ್ತದಿಂದ ತಮ್ಮ ದೈನಂದಿನ ಕಾರ್ಯಗಳನ್ನು ನಿರ್ವಹಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ.ರವಿಯವರು ತಿಳಿಸಿದ್ದಾರೆ.
        ಅವರು ಇಂದು ಮಂಗ ಳೂರು ವಿಶ್ವ ವಿದ್ಯಾ ನಿಲಯದ ಮಾನವ ಪ್ರಜ್ಞಾ ಹಾಗೂ ಯೋಗ ವಿಜ್ಞಾನ ಮತ್ತು ಧರ್ಮ ನಿಧಿ ಯೋಗ ಪೀಠ ಹಾಗೂ ಆಯುಷ್ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವವಿದ್ಯಾನಿಲಯದ ಮಂಗಳ ಗಂಗೋತ್ರಿಯ ಮಂಗಳಾ ಸಭಾಂಗಣದಲ್ಲಿ ಆಯೋಜಿಸಿರುವ ಎರಡು  ದಿನಗಳ ಯೋಗ ತೆರಪಿ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಯೋಗ ಬದುಕಿನ ಭಾಗವಾಗಬೇಕು,ನಮ್ಮೆಲ್ಲರ ಅಂತ: ಶಕ್ತಿಯನ್ನು ಯೋಗ ಇಮ್ಮಡಿಗೊಳಿಸುತ್ತದೆ.ಯೋಗ ಮನಸ್ಸು ಮತ್ತು ಶರೀರಕ್ಕೆ ಸೇರಿದ ಕ್ರಿಯೆ,ಶೇಕಡಾ 90 ರೋಗಗಳು ಮಾನಸಿಕ ಕ್ಲೇಶಗಳಿಂದ ಉಂಟಾಗಲಿದೆ. ಇಂತಹ ಮಾನಸಿಕ ಕ್ಲೇಶಗಳನ್ನು ತೊಡೆದು ಹಾಕಿ ನಮ್ಮಲ್ಲಿ ಸಮ ಚಿತ್ತ ಏರ್ಪಡುವಂತೆ ಯೋಗಾಭ್ಯಾಸ ನೆರವಾಗಲಿದೆ ಎಂದರು. ವೈಜ್ಞಾನಿಕ ಸಂಶೋಧನೆಗಳಿಂದ  ಮನುಷ್ಯರಲ್ಲಿ ಸಮಾಧಾನ ಚಿತ್ತ ಕಾಣದಂತಾಗಿದೆ.ವಸ್ತುಗಳಿಂದ ಸುಖ ಆನಂದ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಅದು ಕ್ಷಣಿಕ ಆದರೆ ಯೋಗಾಭ್ಯಾಸದಿಂದ ಶಾಶ್ವತವಾದ ಸುಖ ಸಂತೋಷಗಳು ಲಭಿಸಲಿವೆಯೆಂದರು.
ಯೋಗಾಭ್ಯಾಸಕ್ಕೂ ಪ್ರಕೃತಿಗೂ ಅವಿನಾಭಾವ ನಂಟು.ಪ್ರಕೃತಿ ಪರಿಸರದ ಉಳಿವಿಗಾಗಿ ಯೋಗಾಭ್ಯಾಸ ಕಲಿಯಬೇಕು.ಇದರಿಂದ ಆತ್ಮಬಲ ಹೆಚ್ಚಾಗಲಿದೆಯೆಂದರು.
ಸಮಾರಂಭದ ಅಧ್ಯಕ್ಷತೆ  ವಹಿಸಿದ್ದ ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರಮೂರ್ತಿಯವರು ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯ ಹಲವು ಪ್ರಥಮಗಳಿಗೆ.ಹೆಸರಾಗಿದ್ದು ದೇಶದಲ್ಲೇ ಮೊದಲ ಬಾರಿಗೆ ಯೋಗ ತೆರಪಿ ಕುರಿತು ರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಂಡಿದೆ.ಗಂಡುಕಲೆ ಯಕ್ಷಗಾನ ಹಾಗೂ ತುಳು ಭಾಷೆಗಳಿಗೆ ಪ್ರತ್ಯೇಕ ಅಧ್ಯಯನ ಪೀಠಗಳನ್ನು ಹೊಂದಿರುವ ಏಕೈಕ ವಿಶ್ವವಿದ್ಯಾನಿಲಯ ಎಂದು ತಿಳಿಸಿದರು. ಇದೀಗ ವಿಶ್ವದ್ಯಾನಿಲಯವು ಯೋಗದಲ್ಲಿ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ ಗಳನ್ನು ಆರಂಭಿಸಿದೆ ಎಂದರು.ಡಾ.ಕೆ.ಕೃಷ್ಣಭಟ್,ವಿಶ್ವವಿದ್ಯಾನಿಲಯದ ಮಾನವ ಪ್ರಜ್ಞಾ ಮತ್ತು ಯೋಗವಿಜ್ಞಾನ ವಿಭಾಗದ ಮಾಜಿ ಪ್ರೊಫೆಸರ್ ಈ ಸಂರ್ಭದಲ್ಲಿ ಮಾತನಾಡಿ ಯೋಗ ಮಾನಸಿಕ ಹಾಗೂ ದೈಹಿಕ ದು:ಖಗಳನ್ನು ಹೋಗಲಾಡಿಸಿ ನಮ್ಮೆಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುತ್ತದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಪಿ.ಎಸ್.ಯಡಪಡಿತ್ತಾಯ ಸ್ವಾಗತಿಸಿದರು. ಡಾ.ಕೆ.ಕೃಷ್ಣ ಭಟ್ ವಂದಿಸಿದರು.