Friday, January 25, 2013

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ


ಮಂಗಳೂರು, ಜನವರಿ. 25;-ಐತಿಹಾಸಿಕ ನಗರ ವಿಜಾಪುರದಲ್ಲಿ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ 9 ರಿಂದ 11 ನೇ ದಿನಾಂಕದವರೆಗೆ 258 ಎಕರೆ ವಿಸ್ತೀರ್ಣದ ಸೈನಿಕ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ. ದಿನಾಂಕ 9 ರಂದು ಬೆಳಿಗ್ಗೆ 7.30 ಗಂಟೆಗೆ ರಾಷ್ಟ್ರಧ್ವಜವನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ  ಎಸ್.ಕೆ.ಬೆಳ್ಳುಬ್ಬಿಯವರು,ಪರಿಷತ್ ಧ್ವಜವನ್ನುಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಪುಂಡಲೀಕ ಹಾಲಂಬಿಯವರು ನೆರವೇರಿಸುವರು.ನಂತರ 9 ಗಂಟೆಗೆ ನಗರದ ಅಂಬೇಡ್ಕರ್ ಕ್ರೀಡಾಂಗಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಶಾಸಕ ಅಪ್ಪುಪಟ್ಟಣ ಶೆಟ್ಟಿ ಉದ್ಘಾಟಿಸುವರು. 11.30 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳಾದ  ಜಗದೀಶ ಶೆಟ್ಟರ್ ಸಮ್ಮೆಳನದ ಉದ್ಘಾಟನೆ ನೆರವೇರಿಸುವರು.ಪೂಜ್ಯರಾದ ಸಿದ್ದೇಶ್ವರ ಸ್ವಾಮೀಜಿಯವರು ಶುಭ ನುಡಿ ನುಡಿಯಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ಸಿ.ಪಿ ಕೃಷ್ಣಕುಮಾರ್,ಸಚಿವರಾದ  ಗೋವಿಂದಕಾರಜೋಳ,ವಿರೋಧ ಪಕ್ಷದ ನಾಯಕರಾದ  ಸಿದ್ದರಾಮಯ್ಯ,ಸಂಸದರಾದ ರಮೇಶ್ ಜಿಗಜಿಣಗಿ,ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ  ಎಸ್.ಆರ್. ಪಾಟೀಲ್,ಜಿಲ್ಲೆಯ ಎಲ್ಲಾ ವಿಧಾನಸಭಾ ಸದಸ್ಯರು,ವಿಧಾನಪರಿಷತ್ ಸದಸ್ಯರು, ಎಲ್.ಭೈರಪ್ಪ ಅಧ್ಯಕ್ಷರು ರಾಜ್ಯ ನೌಕರರ ಸಂಘ  ಬಸವರಾಜು ಪ್ರಧಾನ ಕಾರ್ಯದರ್ಶಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪಸ್ಥಿತರಿರುತ್ತಾರೆ. ಖ್ಯಾತ ಚಿಂತಕರಾದ ಡಾ ಬರಗೂರು ರಾಮಚಂದ್ರಪ್ಪನವರು ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾರೆ.
ಬಳಿಕ ವಿಚಾರ ಗೋಷ್ಟಿಗಳು ಸಂವಾದ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 11-2-13 ರಂದು ಬೆಳಿಗ್ಗೆ ಎರಡು ಕವಿಗೋಷ್ಟಿ ನಡೆಯಲಿದ್ದು,11.30ಕ್ಕೆ ಸನ್ಮಾನ ಸಮಾರಂಭ,ಬಳಿಕ  79ನೇ ಸಮ್ಮೇಳನ ನೆನಪಿಗೆ 79 ಸಾಧಕರನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರು ಸನ್ಮಾನಿಸಲಿದ್ದಾರೆ.ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ  ಎಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆಂದು ಗೌರವ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.