Thursday, January 17, 2013

ಭವ್ಯ ಭವಿಷ್ಯ ಭಾರತದ್ದೇ: ಪ್ರೊ. ಟಿ ಸಿ ಶಿವಶಂಕರಮೂರ್ತಿ

ಮಂಗಳೂರು, ಜನವರಿ.17:- ಗುಣಮಟ್ಟದ ಶಿಕ್ಷಣದಿಂದ ಭವ್ಯ ಹಾಗೂ ಬಲಿಷ್ಟ ಭಾರತ ನಿರ್ಮಾಣ ಸಾಧ್ಯ; ಇಂದು ನಮ್ಮ ದೇಶ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕವಾಗಿ ಬೆಳೆಯುತ್ತಿರುವ ರೀತಿಯನ್ನು ಗಮನಿಸಿದರೆ 2020ರಲ್ಲಿ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವುದರಲ್ಲಿ ಸಂದೇಹವಿಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಟಿ ಸಿ ಶಿವಶಂಕರಮೂರ್ತಿ ಅವರು ಹೇಳಿದರು.
ಅವರಿಂದು ಮಂಗಳೂರಿನ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಭವನದಲ್ಲಿ ವಿವೇಕ ಮಂಥನ ಶಿಕ್ಷಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಾಮಿ ವಿವೇಕಾನಂದರ 150ನೇ ಜನ್ಮ ಸಂವತ್ಸರ ಸಂಭ್ರಮಾಚರಣೆಯ ಅಂಗವಾಗಿ ನಡೆಯುತ್ತಿರುವ ಸ್ವಾಮಿ ವಿವೇಕಾನಂದ ಸಂಸ್ಮೃತಿ ಕಾರ್ಯಕ್ರಮದಡಿ 11ರಿಂದ 17ರವರೆಗೆ ನಡೆದ ಕಾರ್ಯಕ್ರಮದ ಅಂತಿಮ ದಿನವಾದ ಇಂದು ಶಿಕ್ಷಕರ ಸಮ್ಮೇಳನ ನಡೆಯಿತು.
ಈ ಸಮಾರಂಭದಲ್ಲಿ ಎರಡು ದಿನಗಳನ್ನು ಶಿಕ್ಷಕರಿಗೋಸ್ಕರ ಮೀಸಲಿರಿಸಿದ್ದು ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಪ್ರಮುಖ ಎಂಬ ಕಾರಣಕ್ಕೆ. ಬೇರೆಲ್ಲ ವೃತ್ತಿಗಳಿಗಿಂತ ಶಿಕ್ಷಕ ವೃತ್ತಿ ಪವಿತ್ರವಾಗಿದ್ದು ಪ್ರತಿಯೊಬ್ಬ ಶಿಕ್ಷಕನು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಿದೆ ಎಂದರು.
ತಿಳುವಳಿಕೆ, ಮಾಹಿತಿ ನೀಡುವುದು ನೈಜ ಶಿಕ್ಷಣವಲ್ಲ; ಮೌಲ್ಯಯುತ ಶಿಕ್ಷಣವೇ ನಿಜವಾದ ಶಿಕ್ಷಣ ಹಾಗೂ ಪರಿಪೂರ್ಣ ಶಿಕ್ಷಣ ಎಂದ ಅವರು, ಸಮಗ್ರ ಅಭಿವೃದ್ಧಿಗೆ ಮೌಲ್ಯಯುತ ಶಿಕ್ಷಣದ ಅಗತ್ಯವನ್ನು ಪ್ರತಿಪಾದಿಸಿದರು. ಜನಸಂಖ್ಯೆಯಲ್ಲಿ ಜಗತ್ತಿನ ಎರಡನೇ ದೊಡ್ಡ ರಾಷ್ಟ್ರ ಭಾರತ; ಇಲ್ಲಿ 220 ಮಿಲಿಯನ್ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಶಾಲಾ ಹಂತ ದಾಟಿ ಕಾಲೇಜು ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಕೇವಲ 16 ಮಿಲಿಯನ್. 204 ಮಿಲಿಯನ್ ಮಕ್ಕಳು ಕಾಲೇಜು ಶಿಕ್ಷಣದಿಂದ ಹೊರಗುಳಿಯುತ್ತಾರೆ ಎಂದ ಕುಲಪತಿಗಳು, ಪ್ರಸಕ್ತ 620 ವಿಶ್ವವಿದ್ಯಾಲಯಗಳು, 32,000 ಕಾಲೇಜುಗಳು ನಮ್ಮ ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಶೇ.20 ರಷ್ಟು ಹೆಚ್ಚಿನ ಮಕ್ಕಳಿಗೆ ಕಾಲೇಜು ಶಿಕ್ಷಣ ನೀಡಬೇಕಾದರೆ ಇನ್ನು 1000 ವಿಶ್ವವಿದ್ಯಾಲಯಗಳು, ಮತ್ತು 30,000 ಕಾಲೇಜುಗಳ ಅಗತ್ಯವಿದೆ ಹಾಗೂ ಗುಣಮಟ್ಟದ ಶಿಕ್ಷಕರು ನಮಗೆ ಬೇಕಿದೆ ಎಂದರು. ಹೀಗಾದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳ ಸೃಷ್ಟಿ ಸಾಧ್ಯ ಎಂದರು. ಭಾರತ ಹಸಿವೆಯ ಬೇಗೆಯನ್ನು ಅನುಭವಿಸಿದಾಗ ಸ್ವಾಮಿನಾಥನ್ ಅವರ ಮುಂದಾಳುತ್ವದಲ್ಲಿ ಹಸಿರುಕ್ರಾಂತಿಯ ಮೂಲಕ ದೇಶವನ್ನು ರಕ್ಷಿಸಿದರು. ಇಂದು ನಮಗೆ ಸಾಮಾಜಿಕ ಅಭಿವೃದ್ಧಿಗೆ ಪೂರಕವಾದ ವಿಜ್ಞಾನ, ಗಣಿತದ ಅಗತ್ಯವಿದೆ. ಪ್ರಾಚೀನ ಭಾರತದಲ್ಲೂ 14 ವಿಶ್ವವಿದ್ಯಾಲಯವಿತ್ತು; ನಮ್ಮ ಸಂಸ್ಕೃತಿ ನಮ್ಮ ಜ್ಞಾನದ ಬಗ್ಗೆ ಎರಡು ಮಾತಿರಲಿಲ್ಲ. ಆದರೆ ಸುಮಾರು 700 ವರ್ಷಗಳ ದಾಸ್ಯದಿಂದ ಹಲವು ವಿಚಾರಗಳಿಂದ ನಾವು ವಂಚಿತರಾಗಬೇಕಾಯಿತು ಎಂದರು. ಚಾರಿತ್ರ್ಯ ನಿರ್ಮಾಣದ ಶಿಕ್ಷಣದಿಂದ ಭಾರತ ವಿಶ್ವದಲ್ಲೇ ಮುಂದಿನ ದಿನಗಳಲ್ಲಿ ಅಗ್ರಮಾನ್ಯ ರಾಷ್ಟ್ರವಾಗಲಿದೆ ಎಂದರು.
ಮುಖ್ಯ ಅಭ್ಯಾಗತರಾಗಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರಾದ ಶ್ರೀಮತಿ ಫಿಲೋಮಿನ ಲೋಬೋ ಅವರು, ಶ್ರದ್ಧೆ, ನಿರಂತರ ಅಧ್ಯಯನ ಮತ್ತು ಪರಿಣಾಮಕಾರಿ ಬೋಧನೆ ಮಾತ್ರ ಶಿಕ್ಷಕ ವೃತ್ತಿಯ ಗೌರವವನ್ನು ಉಳಿಸಲು ಸಾಧ್ಯ ಎಂದರು. ಸ್ವಾಮಿ ಜಿತಕಾಮಾನಂದಜಿ ದಿಕ್ಸೂಚಿ ಭಾಷಣ ಮಾಡಿದರು. ಇಂದು ಮೌಲ್ಯ ಶಿಕ್ಷಣ -ಸವಾಲುಗಳು ಮತ್ತು ಸಾಧ್ಯತೆಗಳು. ಶಿಕ್ಷಕರ ಜವಾಬ್ದಾರಿಗಳು ಮತ್ತು ಎಥಿಕ್ಷ್ ಇನ್ ಟೀಚಿಂಗ್ ಕುರಿತು ಉಪನ್ಯಾಸಗಳು ನಡೆಯಿತು.