Wednesday, March 28, 2012

ತೋಟಗಾರಿಕೆ ವರ್ಷ: ವಿಶೇಷ ಫಲಪುಷ್ಪ ಪ್ರದರ್ಶನ

ಮಂಗಳೂರು,ಮಾರ್ಚ್.28:ತೋಟಗಾರಿಕಾ ವರ್ಷ 2011-12 ರ ಅಂಗವಾಗಿ ತೋಟಗಾರಿಕೆ ಇಲಾಖೆ ವಿಶೇಷ ಫಲಪುಷ್ಟ ಪ್ರದರ್ಶನವನ್ನು ಕದ್ರಿ ಉದ್ಯಾನದಲ್ಲಿ ಹಮ್ಮಿಕೊಂಡಿದ್ದು, ಈ ಬಾರಿ ಫಲಪುಷ್ಟ ಪ್ರದರ್ಶನದಲ್ಲಿ 'ಭಾರತೀಯ ಹಬ್ಬಗಳು' ಹೂಜೋಡಣೆ ವಿಶೇಷ ಆಕರ್ಷಣೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಡಾ.ಎಸ್. ನಂದಾ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾ.30ರಿಂದ ಎಪ್ರಿಲ್ 1ರವರೆಗೆ ಫಲಫುಷ್ಪ ಪ್ರದರ್ಶನವನ್ನು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ. ಪ್ರದರ್ಶನದ ಬಳಿಕ ಆಯ್ದ ಹೂ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ 31 ತಳಿಯ ತರಕಾರಿ ಬೆಳೆಗಳು, 29 ತಳಿಯ ಹೂವಿನ ಗಿಡಗಳು, 17 ಬಗೆಯ ಆಲಂಕಾರಿಕ ಗಿಡಗಳು ಹಾಗೂ 90 ಬಗೆಯ ಔಷಧೀಯ ಸಸ್ಯಗಳನ್ನು ನೋಡಬಹುದು. ಇದರ ಜೊತೆಯಲ್ಲೇ ತರಕಾರಿ ಕೆತ್ತನೆಗಳು, ವಿವಿಧ ಹೂ ಜೋಡಣೆಗಳು, ಕಲಾತ್ಮಕ ತೋಟಗಾರಿಕಾ ಚಟುವಟಿಕೆಗಳು ಕೂಡಾ ಪ್ರದರ್ಶಿಸಲ್ಪಡಲಿವೆ. ಫಲಪುಷ್ಟ ಪ್ರದರ್ಶನದ ಜೊತೆಗೆ ಆಹಾರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪ್ರಾರಂಭದ ಎರಡು ದಿನಗಳಂದು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರದರ್ಶನದಲ್ಲಿ ಸಾರ್ವಜನಿಕರು ಹಾಗೂ ಸರಕಾರಿ ಇಲಾಖೆಗಳು, ಸರಕಾರೇತರ ಸಂಘ ಸಂಸ್ಥೆಗಳು ಬೆಳೆಸಿರುವ ಹೂವು, ಅಲಂಕಾರಿಕ ಗಿಡಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ರೈತರು ಬೆಳೆಸಿರುವ ವಿಶೇಷ ರೀತಿಯ ತೋಟಗಾರಿಕಾ ಪ್ರದರ್ಶಿಕೆಗಳನ್ನು ಕೂಡಾ ಸಂಗ್ರಹಿಸಿ ಪ್ರದರ್ಶಿಸಲಾಗುವುದು ಎಂದು ನಂದಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ರಾವ್ ಆರೂರು, ಸಹ ಕಾರ್ಯದರ್ಶಿ ನೇಮಿರಾಜ್ ಕೊಂಡೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿಸೋಜಾ, ಶಾರದಾ ಆಚಾರ್ ಉಪಸ್ಥಿತರಿದ್ದರು.
ಚೆಂಡುಹೂ, ಸಾಲ್ವಿಯಾ, ಪಿಂಕ್ಸ್, ಪೆಟೋನಿಯಾ, ಅಂಥೂರಿಯಂ, ಜರ್ಬೇರಾ, ಡೇಲಿಯಾ, ಗ್ಲಾಡಿಯೊಲಸ್, ಸೆಲೋಶಿಯಾ ಹೂ ಗಿಡಗಳು ಪ್ರದರ್ಶನಕ್ಕೆ ಸಜ್ಜಾಗಿವೆ.
ಪ್ರದರ್ಶನದ ಒಂದು ಪಾಶ್ರ್ವ ಭಾಗದಲ್ಲಿ ಉದ್ದನೆಯ ಸೋರೆಕಾಯಿ, ಹೀರೆಕಾಯಿ, ತೊಂಡೆಕಾಯಿ, ಸಿಹಿಗುಂಬಳ, ಮೀಟರ್ ಉದ್ದದ ಅಲಸಂಡೆ, ಕೆಂಪು ಬಸಳೆ, ಪಡವಲಕಾಯಿಗಳು ಚಪ್ಪರದಲ್ಲಿ ಬಳ್ಳಿಗಳ ನಡುವೆ ನೋಡುಗರ ಕಣ್ಮನ ಸೆಳೆಯಲಿವೆ. ಉಳಿದಂತೆ ಕೆಂಪು ಬೆಂಡೆ, ಬದನೆ, ಚಪ್ಪರ ಅವರೆಯ ಜೊತೆಯಲ್ಲಿ ಮಂಗಳೂರಿನಲ್ಲಿ ತೀರಾ ಅಪರೂಪದ ತರಕಾರಿ ಬೆಳೆಗಳಾದ ಹೂಕೋಸು, ಎಲೆಕೋಸು, ನವಿಲುಕೋಸು, ಮೂಲಂಗಿ ಗಿಡಗಳು ಪ್ರದರ್ಶನದಲ್ಲಿದೆ. ಈಲ್ಲೆಯ ರೈತರು, ಉದ್ದಿಮೆದಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರದರ್ಶನದ ಸದುಪಯೋಗ ಪಡೆಯಲು ಇಲಾಖೆಯವರು ಕೋರಿದ್ದಾರೆ.