Friday, March 16, 2012

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶೌಚಾಲಯ ನಿರ್ಮಿಸಲು ಸಿಇಒ ಸೂಚನೆ

ಮಂಗಳೂರು,ಮಾರ್ಚ್.16:ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು,ಯಾತ್ರಾರ್ಥಿಗಳ ಅನುಕೂಲಕ್ಕಾಗಿ ವಿಶೇಷವಾಗಿ ಮಹಿಳೆಯರಿಗೆ ಜಿಲ್ಲೆಯ ಸರಹದ್ದಿನ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕೂಡಲೇ ಶೌಚಾಲಯಗಳನ್ನು ನಿರ್ಮಿಸುವಂತೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಎಲ್ಲಾ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದ್ದಾರೆ. ಅವರು ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಿರ್ಮಿಸಲಿರುವ ಶೌಚಾಲಯಗಳ ನಿರ್ವಹಣೆಗೆ ಸಿಬ್ಬಂದಿಗಳನ್ನು ನೇಮಿಸಿ ಅವರು ಅಲ್ಲಿಯೇ ವಾಸ್ತವ್ಯವಿದ್ದು ಶೌಚಾಲಯವನ್ನು ಶುಚಿಯಾಗಿಡಲು ಸಿಬ್ಬಂದಿಗೆ ಅಗತ್ಯ ವಸತಿ ಸೌಲಭ್ಯ ಕಲ್ಪಿಸಲು ಅವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲೆಯಲ್ಲಿ ಇದುವರೆಗೂ (29-2-12) ಒಟ್ಟು ರೂ.1232.91 ಲಕ್ಷ ಗಳನ್ನು ವೆಚ್ಚ ಮಾಡಿ 59,478 ಬಿಪಿಎಲ್,35,532 ಎಪಿಎಲ್ ಶೌಚಾಲಯಗಳನ್ನು 1099 ಘನ ತ್ಯಾಜ್ಯ ಘಟಕಗಳನ್ನು ನಿರ್ಮಿಸಲಾಗಿದೆ. ಇದಲ್ಲದೆ ಸುಮಾರು 40 ಲಕ್ಷ ರೂ.ವೆಚ್ಚದಲ್ಲಿ 2 ದ್ರವ ತ್ಯಾಜ್ಯ ಘಟಕಗಳನ್ನು ನಿರ್ಮಿಲಾಗಿದೆಎಂದರು .ಎಲ್ಲಾ ತಾಲೂಕುಗಳಲ್ಲಿ ಕಾರ್ಯನಿರ್ವಹಣಾಧಿಕಾರಿಗಳು ಅಗತ್ಯ ಇರುವ ಘನತ್ಯಾಜ್ಯ ವಿಲೇ ಘಟಕ ಹಾಗೂ ದ್ರವ ತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಅಗತ್ಯವಿರುವ ಕ್ರಿಯಾ ಯೋಜನೆಯನ್ನು ಸಿದ್ದ ಪಡಿಸಿ ಎಪ್ರಿಲ್ 15 ರೊಳಗೆ ಜಿಲ್ಲಾ ಪಂಚಾಯತ್ಗೆ ಸಲ್ಲಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ವಸತಿ ಶೌಚಾಲಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಷ ತಾಳುವ ಅಧಿಕಾರಿ ಹಾಗೂ ವಿಷಯ ನಿರ್ವಾಹಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ವಹಿಸುವುದಾಗಿ ಅವರು ತಿಳಿಸಿದ್ದಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ನಜೀರ್,ಮುಖ್ಯ ಲೆಕ್ಕಾಧಿಕಾರಿ ಲತೀಫ್ ಮುಂತಾದವರು ಹಾಜರಿದ್ದರು.