Friday, June 17, 2011

2006-10ರವರೆಗೆ ಜಿಲ್ಲೆಗೆ 5.28 ಕೋಟಿ ರೂ. ನೈರ್ಮಲ್ಯ ಪ್ರಶಸ್ತಿ, 3.10 ಕೋಟಿ ರೂ. ಬಾಕಿ

ಮಂಗಳೂರು,ಜೂ.17:ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನೈರ್ಮಲ್ಯ ಯೋಜನೆಯಡಿ 2006-07ನೆ ಸಾಲಿನಿಂದ 2009-10ನೆ ಸಾಲಿನವರೆಗೆ ಒಟ್ಟು 5,28,95,000 ರೂ. ಪ್ರಶಸ್ತಿ ಹಣ ದೊರಕಿದ್ದು, ಇದರಲ್ಲಿ 3.10 ಕೋಟಿ ರೂ. ಇನ್ನಷ್ಟೆ ಜಿಲ್ಲೆಗೆ ಮಂಜೂರಾಗಬೇಕಿದೆ ಎಂದು ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ಇಂದು 2009-10ನೆ ಸಾಲಿನ ಕರ್ನಾಟಕ ರಾಜ್ಯ ನೈಮಲ್ಯ ಪ್ರಶಸ್ತಿಯಡಿ ಜಿಲ್ಲೆಗೆ ನೈರ್ಮಲ್ಯ ರತ್ನ ಪ್ರಥಮ ಪ್ರಶಸ್ತಿ ಲಭ್ಯವಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದ ಬಗ್ಗೆ ಅವರು ವಿವರ ನೀಡಿದರು.
ಈ ಪ್ರಶಸ್ತಿಯಡಿ ಜಿಲ್ಲೆಗೆ 30 ಲಕ್ಷ ರೂ. ಪ್ರಶಸ್ತಿ ಹಣ ಲಭ್ಯವಾಗಿದೆ. ಜೂ.20ರಂದು ಬೆಳಗ್ಗೆ 11 ಗಂಟೆಗೆ _ರಾಜ್ಯ ನೀರು ಮತ್ತು ನೈರ್ಮಲ್ಯ ಮಿಶನ್ ಹಾಗು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಗಳ ಸಹಯೋಗದಲ್ಲಿ ಪ್ರಶಸ್ತಿಯ ಚೆಕ್ ವಿತರಣಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಕಾರ್ಯಕ್ರಮ ಉದ್ಘಾಟಿಸಲಿರವರು ಎಂದವರು ತಿಳಿಸಿದರು.ಪ್ರಶಸ್ತಿ ಮೊತ್ತವನ್ನು ಸರಕಾರಿ ಮಾರ್ಗಸೂಚಿ ಪ್ರಕಾರ ನೈರ್ಮಲ್ಯ ಕಾರ್ಯಕ್ರಮಗಳಿಗೆ ಬಳಕೆ ಮಾಡಲಾಗುವುದು. 2009ರ ಮಾಚರ್್ 31ರ ಅವಧಿಯಲ್ಲಿ ಜಿಲ್ಲೆಯ ಒಟ್ಟು 2,43,568 ಕುಟುಂಬಗಳಲ್ಲಿ 1,48558 ಕುಟುಂಬಗಳು ಶೌಚಾಲಯ ಹೊಂದಿದ್ದವು. ಉಳಿದ 94970 ಕುಟುಂಬಗಳಿಗೆ 2009-10ನೆ ಸಾಲಿನಲ್ಲಿ ಶೌಚಾಲಯ ಒದಗಿಸುವ ಮೂಲಕ ಸಂಪೂರ್ಣ ಶೌಚಾಲಯಯುಕ್ತ ಜಿಲ್ಲೆಯನ್ನಾಗಿಸಲಾಗಿದೆ. ಇದೇ ವೇಳೆಯಲ್ಲಿ 693 ಶಾಲೆಗಳು ಶೌಚಾಲಯ ಇಲ್ಲವಾಗಿದ್ದು, ಇದೀಗ ಈ ಎಲ್ಲಾ ಶಾಲೆಗಳಲ್ಲೂ ಶೌಚಾಲಯವನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು.ರಾಜ್ಯ ನೈರ್ಮಲ್ಯ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮ ಪಂಚಾಯತ್ ರಾಜ್ಯ ಮಟ್ಟದ ನೈರ್ಮಲ್ಯ ರತ್ನ ಹಾಗೂ ವಿಭಾಗೀಯ ಮಟ್ಟದ ಸ್ವರ್ಣ ನೈರ್ಮಲ್ಯ ಹಾಗೂ ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಪ್ರಶಸ್ತಿ ಪಡೆದಿದೆ.
ಇರಾ ಗ್ರಾಮ ಪಂಚಾ ಯತ್ ಜಿಲ್ಲಾ ಮಟ್ಟದ ರಜತ ನೈ ರ್ಮಲ್ಯ ದ್ವಿ ತೀಯ ಸ್ಥಾನ ಹಾಗೂ ನೆಕ್ಕಿಲಾಡಿ ಗ್ರಾ.ಪಂ. ತೃತೀಯ ಸ್ಥಾನ ಪಡೆದಿದೆ.
ಇದೇ ವೇಳೆ ಇರಾ ಗ್ರಾ.ಪಂ., 34ನೆ ನೆಕ್ಕಿಲಾಡಿ ಗ್ರಾ.ಪಂ., ಕಿಲ್ಪಾಡಿ ಗ್ರಾ.ಪಂ. ಹಾಗೂ ಆಲೆಟ್ಟಿ ಗ್ರಾ.ಪಂ.ಗಳು ತಾಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿಯ ಪ್ರಥಮ ಸ್ಥಾನ ಪಡೆದಿವೆ. ಬಂಟ್ವಾಳದ ಕಾವಳಮುಡೂರಿನ ಸ.ಹಿ.ಪ್ರಾ. ಶಾಲೆ ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಹಾಗೂ ತಾಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿ ಪಡೆದಿವೆ.ಬೆಳ್ತಂಗಡಿ ಓಡಿಲ್ನಾಳದ ಸ.ಹಿ.ಪ್ರಾ. ಶಾಲೆ, ಕುಪ್ಪೆಪದವು ಸ.ಹಿ.ಪ್ರಾ. ಶಾಲೆ, ಉಪ್ಪಿನಂಗಡಿಯ ಸ.ಹಿ.ಪ್ರಾ. ಶಾಲೆ, ಸುಳ್ಯ ಅಜ್ಜಾವರದ ಮುಳ್ಯಅಟ್ಲೂರು ಸ.ಹಿ.ಪ್ರಾ. ಶಾಲೆ, ಬಂಟ್ವಾಳ ಕರಿಯಂಗಳದ ಬಾರಿಂಜ ಅಂಗನವಾಡಿ ಕೇಂದ್ರ, ಮಡಂತ್ಯಾರು ಪೂಂಜಾಲಕಟ್ಟೆ ಅಂಗನವಾಡಿ ಕೇಂದ್ರ, ಮಂಗಳೂರು ಕಲ್ಲಮುಂಡ್ಕೂರು ಅಂಗನವಾಡಿ ಕೇಂದ್ರ, ಕೊಯ್ಲ ಏಣಿತಡ್ಕ ಅಂಗನವಾಡಿ ಕೇಂದ್ರ, ಸುಳ್ಯದ ಅಕ್ಕೋಜಿಪಾಲ್ ಅಂಗನವಾಡಿ ಕೇಂದ್ರ ತಾಲೂಕು ಮಟ್ಟದ ನೈರ್ಮಲ್ಯ ಪ್ರಶಸ್ತಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಬಾರಿಂಜ ಅಂಗನವಾಡಿ ಕೇಂದ್ರವು ಜಿಲ್ಲಾ ಮಟ್ಟದ ರಜತ ನೈರ್ಮಲ್ಯ ಪ್ರಶಸ್ತಿಯ ಪ್ರಥಮ ಸ್ಥಾನವನ್ನೂ ತನ್ನದಾಗಿಸಿಕೊಂಡಿದೆ ಎಂದು ಶೈಲಜಾ ಭಟ್ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಧನಲಕ್ಷ್ಮಿ, ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವರಾಮೇ ಗೌಡ ಉಪಸ್ಥಿತರಿದ್ದರು.