Thursday, July 19, 2012

ಸ್ತ್ರೀ ಶಕ್ತಿ ಸಂಘಟನೆಗಳಲ್ಲೂ ರೆಡ್ ರಿಬ್ಬನ್ ಕ್ಲಬ್

ಮಂಗಳೂರು, ಜುಲೈ. 19: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಸಮನ್ವಯದೊಂದಿಗೆ ಎಚ್ಐವಿ ಬಾಧಿತರಿಗೆ ನೆರವಾಗಲು ವಿಶೇಷ ನೆರವು ಯೋಜನೆ ಕಾರ್ಯಕ್ರಮ ರೂಪಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್ ವಿಜಯಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಇಂದು ಜಿಲ್ಲಾ ಪಂಚಾಯತ್ ನ ಮಿನಿ ಹಾಲ್ ನಲ್ಲಿ ಆಯೋಜಿಸಲಾಗಿತ್ತು.
ಈ ನಿಟ್ಟಿನಲ್ಲಿ ಈಗಾಗಲೇ ನಗರದ ಹೊಂಗಿರಣ ನೆಟ್ ವರ್ಕ್ ಸಹಕಾರದಿಂದ ಫಲಾನುಭವಿಗಳನ್ನು ಗುರುತಿಸಿ ಆರು ಜನರಿಗೆ ನೆರವು ಹಾಗೂ ಮೂವರು ಫಲಾನುಭವಿಗಳಿಗೆ ವಸತಿ ಯೋಜನೆಯನ್ನು ಒದಗಿಸಲಾಗಿದೆ. ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳಿಂದ ಫಲಾನುಭವಿಗಳನ್ನು ಗುರುತಿಸುವಾಗ ಎಚ್ಐವಿ ಪೀಡಿತರಿಗೆ ಕನಿಷ್ಠ 10 ಸೌಲಭ್ಯಗಳನ್ನು ಒದಗಿಸಬೇಕೆಂದು ಸಿಇಒ ಅವರು ಹೇಳಿದರು.
ಎಲ್ಲ ಇಲಾಖೆಗಳಿಗೂ ಇದಕ್ಕಾಗಿ ಕಾಲಮಿತಿಯನ್ನು ನಿಗದಿಪಡಿಸಿದ ಸಿಇಒ ಅವರು, ಈಗಾಗಲೇ ಕಾಲೇಜುಗಳಲ್ಲಿ ಅಸ್ತಿತ್ವದಲ್ಲಿರುವ ಮಾದರಿಯಲ್ಲೇ ಸ್ತ್ರೀ ಶಕ್ತಿ ಸಂಘಟನೆಗಳ ಮೂಲಕವೂ ರೆಡ್ ರಿಬ್ಬನ್ ಸಂಘಟನೆಗಳನ್ನು ಸ್ಥಾಪಿಸುವಂತೆ ನುಡಿದರು. ಈ ಸಂಬಂದ ನಡೆಯುವ ಮಾಹಿತಿ ಶಿಕ್ಷಣ ಕಾರ್ಯಕ್ರಮಗಳು ನಿರಂತರವಾಗಿರಬೇಕೆಂದು ಹೇಳಿದ ಅವರು, ಸಂಬಂಧಪಟ್ಟವರಿಗೆ ಲಿಖಿತವಾಗಿ ಸೂಚನೆಗಳನ್ನು ನೀಡುವ ಭರವಸೆಯನ್ನು ಸಭೆಗೆ ನೀಡಿದರು.
ಇದರ ಜೊತೆಗೆ ಅಪೌಷ್ಠಿಕ ಮತ್ತು ವಿಧವೆ, ಅನಾಥ ಮಕ್ಕಳ ಆಸ್ತಿ ರಕ್ಷಣೆಯ ಬಗ್ಗೆಯೂ ಗ್ರಾಮಪಂಚಾಯತ್ ಅಧಿಕಾರಿಗಳು ಆಸಕ್ತಿ ವಹಿಸುವಂತೆ ಆಗಬೇಕು ಎಂದರು. ಯುವಕ ಮಂಡಲಗಳು, ಯುವತಿ ಮಂಡಲಗಳ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಈ ನಿಟ್ಟಿನಲ್ಲಿ ಖಾತರಿಪಡಿಸಿಕೊಳ್ಳಬೇಕೆಂದ ಅವರು, ನಗರದಲ್ಲಿ ಕಾರ್ಮಿಕ ಇಲಾಖೆಯ ಸಹಕಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಏಡ್ಸ್ ಘಟಕದೊಂದಿಗೆ ಅನಿವಾರ್ಯ ಎಂದರು. ಈಗಾಗಲೇ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಮಾಜಮುಖಿ ಕಾರ್ಯಕ್ರಮಗಳಿಗೆ (ಮುಖ್ಯವಾಗಿ ಎಂಡೋಸಲ್ಫಾನ್) ಉತ್ತಮ ಸಹಕಾರ ನೀಡಿದ್ದು, ಎಚ್ ಐ ವಿ ಪೀಡಿತರಿಗೆ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆಯೂ ಚರ್ಚೆ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ ಶ್ರೀರಂಗಪ್ಪ ಮಾತನಾಡಿ, ಮುಂದಿನ ತಿಂಗಳಲ್ಲಿ ವಾಜಪೇಯಿ ಆರೋಗ್ಯ ಶ್ರೀ ಯೋಜನೆ ಜಿಲ್ಲೆಯಲ್ಲಿ ಅನುಷ್ಠಾನಕ್ಕೆ ಬರಲಿದ್ದು, ಆರೋಗ್ಯ ವಲಯದಲ್ಲಿ ಈ ಯೋಜನೆಯಿಂದ ಬಡವರಿಗೆ ಹೆಚ್ಚಿನ ನೆರವಾಗಲಿದೆ ಎಂದರು.
ಪ್ರವಾಸೋದ್ಯಮ ಇಲಾಖೆ, ಪೊಲೀಸ್ ಮತ್ತು ಸಮಾಜ ಕಲ್ಯಾಣ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆ ಹಾಸ್ಟೆಲ್ ಗಳಲ್ಲಿ ಇಂತಹ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಕ್ರಮಗಳಾಗಬೇಕು ಎಂದರು.
ಹೊಂಗಿರಣ ನೆಟ್ ವರ್ಕ್ ಗೆ ಪೀಡಿತರನ್ನು ಗುರುತಿಸುವ ಹೊಣೆ ವಹಿಸಲಾಗಿದ್ದು, ಅವರಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಹೊಣೆ ಜಿಲ್ಲಾ ಪಂಚಾಯತ್ನದ್ದು ಎಂದು ಸಿಇಒ ಅವರು ಸ್ಪಷ್ಟ ಪಡಿಸಿದರು.
ಸಭೆಯಲ್ಲಿ ಎಲ್ಲಾ ಇಲಾಖಾಧಿಕಾರಿಗಳು, ಡಾ ಕಿಶೋರ್ ಮತ್ತು ಡ್ಯಾಪ್ಕೊ (ಡಿಸ್ಟ್ರಿಕ್ಟ್ ಏಡ್ಸ್ ಪ್ರಿವೆಂನ್ಷನ್ ಕಂಟ್ರೋಲ್ ಯುನಿಟ್) ಡಾ ತರುಣ್ ಚೆಂಗಪ್ಪ ಉಪಸ್ಥಿತರಿದ್ದರು.