Sunday, July 1, 2012

ಹೈನುಗಾರಿಕೆಯಿಂದ ಅಭಿವೃದ್ಧಿ: ಡಾ.ಹಲಗಪ್ಪ

ಮಂಗಳೂರು, ಜುಲೈ.01: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ ರೈತರಿಗೆ 52.345 ಲಕ್ಷ ರೂ. ಮೀಸಲಿರಿಸಿದ್ದು, ಈಗಾಗಲೇ ಅರ್ಹ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಗೊಂಡಿದೆ. ಅರ್ಹರು ಯೋಜನೆಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರಾದ ಡಾ ಕೆ ವಿ ಹಲಗಪ್ಪ ಅವರು ಹೇಳಿದರು.
ಇಂದು ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ತಾ ಇಲಾಖೆ, ಪಶುಪಾಲನಾ ಇಲಾಖೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 'ಪಶು ಪಾಲನಾ ಇಲಾಖೆಯಿಂದ ರೈತರಿಗೆ ದೊರಕುವ ಸೌವಲತ್ತುಗಳು' ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಒಟ್ಟು ಮೂರು ಯೋಜನೆಗಳಡಿ ರೈತ ಪರ ಕಾರ್ಯಕ್ರಮಗಳನ್ನು ರೂಪಿಸಲಾಗಿದ್ದು, ವಾಣಿಜ್ಯ ಹೈನುಗಾರಿಕೆ ಅಭಿವೃದ್ಧಿಯಡಿ ಕನಿಷ್ಠ 2 ಎಕರೆ ಜಮೀನು ಹೊಂದಿರುವ ರೈತರಿಗೆ 10 ಮಿಶ್ರ ತಳಿ ಹಸುಗಳ ಘಟಕ ಸ್ಥಾಪಿಸಲು ಘಟಕದ ಒಟ್ಟು ಮೊತ್ತ ರೂ. 6 ಲಕ್ಷ ರೂ.ಗಳು. ಇದರಲ್ಲಿ ಸಹಾಯಧನ ಒಂದು ಲಕ್ಷ, ರೂ. ಐದು ಲಕ್ಷ ರೂ. ಬ್ಯಾಂಕಿನ ಸಾಲ/ ಫಲಾನುಭವಿಯ ವಂತಿಗೆ ಇರುತ್ತದೆ. ಇನ್ನು ಮೇವು ಕೊಯ್ಲು ಉಪಕರಣ (ಚಾಫ್ ಕಟರ್) ಕ್ಕೆ ತಲಾ ಒಂದು ಲಕ್ಷದಂತೆ 15 ಜನರಿಗೆ 15 ಲಕ್ಷ ರೂ. ನೀಡಲಾಗುವುದು. ವರಾಹ ಅಭಿವೃದ್ಧಿ ಯೋಜನೆಯಡಿ ತಳಿ ಸಂವರ್ಧನೆಗೆ 20,000 ರೂ., ಮಿಶ್ರ ತಳಿ ಅಭಿವೃದ್ಧಿಗೆ ಘಟಕ ವೆಚ್ಚ 3,000ರೂ., ಮರಿ ಕೊಬ್ಬಿಸಲು 6,000ರೂ. ನೀಡಲಾಗುವುದು ಎಂದು ಉಪನಿರ್ದೇಶಕರು ಮಾಹಿತಿ ನೀಡಿದರು.
ರೈತರಿಗೆ ಮಾಹಿತಿ ನೀಡಲು ಸ್ಥಳೀಯ ಹಸು ಹಾಗೂ ಕರು ಪ್ರದರ್ಶನ, ಕಿಸಾನ್ ಸಂಪರ್ಕ ಸಭೆ, ರೈತರಿಗೆ ತಾಂತ್ರಿಕ ಮಾಹಿತಿ ನೀಡಲಾಗುವುದು. ಕೆ ಎಂ ಎಫ್ ಸಹಕಾರದಿಂದ ಹೈನುಗಾರಿಕೆ ಅಭಿವೃದ್ಧಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಸವಿವರ ಮಾಹಿತಿಯನ್ನು ರೈತರಿಗೆ ನೀಡಿದರು.
ಕೇಂದ್ರ ವಲಯ ಯೋಜನೆ, ಜಿಲ್ಲಾ ವಲಯ ಯೋಜನೆ, ವಿಶೇಷ ಜಾನುವಾರು ತಳಿ ಅಭಿವೃದ್ಧಿ ಯೋಜನೆ, ಸಾಮಾಜಿಕ ಆರ್ಥಿಕ ಕಾರ್ಯಕ್ರಮಗಳು, ಕುಕ್ಕುಟ ಅಭಿವೃದ್ಧಿ ಯೋಜನೆ ಬಗೆಯ್ಗೂ ಮಾಹಿತಿಯನ್ನು ನೀಡಿದರು. ಆತ್ಮ ಯೋಜನೆಯ ಕಿರು ಪರಿಚಯವನ್ನು ಅವರು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಳಾಯಿಬೆಟ್ಟು ಪಂಚಾಯತ್ ಅಧ್ಯಕ್ಷರಾದ ರಾಜೀವ್ ಶೆಟ್ಟಿ ಸಲ್ಲಾಜೆ ಅವರು, ಕೃಷಿಕರು ಆರ್ಥಿಕವಾಗಿ ಸಧೃಡಮಾಡುನವ ಇಂತಹ ಸರ್ಕಾರಿ ಸೌಲಭ್ಯಗಳ ಸದುಪಯೋಗವನ್ನು ಪಡೆಯಲು ಮುಂದಾಗಬೇಕೆಂದು ಎಂದು ಸಲಹೆ ಮಾಡಿದರು. ಒಕ್ಕೂಟದ ಅಧ್ಯಕ್ಷರಾದ ಮೋನಪ್ಪ ಅಂಚನ್, ಷರೀಫ್, ತಾಲೂಕು ಪಶುವೈದ್ಯಾಧಿಕಾರಿ ಡಾ ವಸಂತ ಅವರು ವೇದಿಕೆಯಲ್ಲಿದ್ದರು. ಸೇವಾನಿರತರಾದ ಶ್ರೀಮತಿ ಯೋಗಿನಿ, ಶ್ವೇತ,ಕಾರ್ಯಕ್ರಮ ಯಶಸ್ವಿಗೆ ಸಹಕಾರ ನೀಡಿದರು. ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಲಯಾಧ್ಯಕ್ಷ ಸುರೇಶ್ ಅರಂತಕೋಡಿ ಅವರು ಧನ್ಯವಾದ ಸಮರ್ಪಿಸಿದರು. ರಾಕೇಶ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮವಿತ್ತು.