Monday, October 8, 2012

ಬಂಟ್ವಾಳದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಂದ ಪ್ರಗತಿ ಪರಿಶೀಲನೆ

ಮಂಗಳೂರು,ಅಕ್ಟೋಬರ್.08: ಬಂಟ್ವಾಳ ತಾಲೂಕು ಪಂಚಾಯತ್ ಸಭಾಂಗಂದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರು ಪ್ರಗತಿ ಪರಿಶೀಲನಾ  ಸಭೆ ನಡೆಸಿದರು. ಸ್ಥಳಿಯ ಶಾಸಕರಾದ ಬಿ. ರಮನಾಥ ರೈ, ಯು.ಟಿ. ಖಾದರ್,ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ,ಜಿಲ್ಲಾಧಿಕಾರಿ ಡಾ. ಚನ್ನಪ್ಪ ಗೌಡ,ಸಿಇಓ ಡಾ. ವಿಜಯ ಪ್ರಕಾಶ್, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನ ಭಟ್,  ತಾಲೂಕು ಪಂಚಾಯತ್ ಅಧ್ಯಕ್ಷೆ ಶೈಲಜಾ ಬಿ. ಶೆಟ್ಟಿ, ಉಪಸ್ಥಿತರಿದ್ದರು.
ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮಾನ ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವ ಸಿ ಟಿ ರವಿ ಅವರು ಹೇಳಿದರು.
ಬಂಟ್ವಾಳ ತಾಲೂಕು ಪಂಚಾಯಿತಿ ಪ್ರಗತಿ ಪರಿಶೀಲನ ಸಭೆಯನ್ನು ತಾಲೂಕಿನ ಎಸ್ ಜೆ ಎಸ್ ಆರ್ ವೈ ಸಭಾಂಗಣದಲ್ಲಿ ಆಯೋಜಿಸಿದ್ದು, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಆರೋಗ್ಯ ಇಲಾಖೆ, ಪುರಸಭೆ ಹಾಗೂ ಶಿಕ್ಷಣ ಇಲಾಖೆ ಇಲಿಜ್ವರ, ಡೆಂಗ್ಯು ಸೇರಿದಂತೆ ಸಾಂಕ್ರಾಮಿಕ ರೋಗಗಳ ಹರಡುವಿಕೆಗೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳು ಕೊಳವೆ ಬಾವಿ ಕೊರೆಯುವಲ್ಲಿ ನಿಗದಿತ ಗುರಿ ಸಾಧಿಸದೆ ಇರುವುದರಿಂದ ದಲಿತ ದೌರ್ಜನ್ಯ ಕಾಯಿದೆಯಡಿ ಕ್ರಿಮಿನಲ್ ಕೇಸು ಹಾಗೂ ವಂಚನೆ ಕೇಸು ದಾಖಲಿಸಿ ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದರು.
ತಾಲೂಕಿನ ಶಾಲೆಗಳಲ್ಲಿ ಸರಾಸರಿ ಶಿಕ್ಷಕರ ಪ್ರಮಾಣ ಹೆಚ್ಚಿದ್ದರೂ, ಗಣಿತ ಮತ್ತು ವಿಜ್ಞಾನದ ಶಿಕ್ಷಕರ ತೊಂದರೆಯಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ಸಚಿವರ ಗಮನಸೆಳೆದರು. ತುಂಬೆ ವೆಂಟೆಡ್ ಡ್ಯಾಂ ನ್ನು ಎತ್ತರಕ್ಕೇರಿಸಿರುವ ಸಂಬಂಧ ಇರುವ ಗೊಂದಲಗಳನ್ನು ನಿವಾರಿಸಿ ಎಂದು ಸಚಿವರು ಅಧಿಕಾರಿಗಳಿಗೆ ಹೇಳಿದರು.