Tuesday, October 9, 2012

'ಮನುಷ್ಯ ಸತ್ತರೆ ಮಣ್ಣಿಗೆ; ಮಣ್ಣೇ ಸತ್ತರೆ ಮತ್ತೆಲ್ಲಿ?'

ಮಂಗಳೂರು, ಅಕ್ಟೋಬರ್.09: ಉತ್ಪಾದನೆ ಹೆಚ್ಚಿಸಲು ರಾಸಾಯಿನಿಕ ಬಳಸಿ ಬೆಳೆ ಬೆಳೆಯುವುದರಿಂದ  ನಮ್ಮ ಮಣ್ಣು ಸಂಪೂರ್ಣ ಫಲವತ್ತತೆ ಕಳೆದುಕೊಂಡಿದ್ದು, ಸಾವಯವ ಗೊಬ್ಬರದ ಮೂಲಕ ಸಂರಕ್ಷಿಸಿ ಕೃಷಿ ಇಂದಿನ ಅಗತ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಅಭಿಪ್ರಾಯಿಸಿದ್ದಾರೆ.
ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಸಭಾಂಗಣದಲ್ಲಿ ಕೃಷಿ ಮಾಹಿತಿ, ಜಾಗೃತಿ ಆಂದೋಲನ ಹಾಗೂ ಸಾವಯವ ಉತ್ಪಾದಕರ ಮಾರುಕಟ್ಟೆದಾರರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಸಾಯನಿಕಗಳು, ಕೀಟನಾಶಕಗಳ ಬಳಕೆಯಿಂದ ಹೆಚ್ಚಿನ ಉತ್ಪಾದನೆಯನ್ನು ಪಡೆಯಬಹುದೆಂಬ ಮಾರುಕಟ್ಟ ಆಧಾರಿತ ಕೃಷಿಯಿಂದಾಗಿ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಕೃಷಿಯನ್ನು ನಂಬಿ ಬದುಕು ಅಸಾಧ್ಯ ಎಂಬ ಮನೋಭಾವ ಇಂದಿನ ಜನಾಂಗದಲ್ಲಿ ಮೂಡಿದ್ದು, ಮುಂದಿನ ದಿನಗಳಲ್ಲಿ ಆಹಾರದ ಕೊರತೆಯನ್ನು ದೇಶ ಎದುರಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಕೃಷಿಕನಿಗೆ ಇಂದು ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನ ಇಲ್ಲವಾಗಿದೆ. ಕೃಷಿಕ ಕುಟುಂಬದ ಬಗ್ಗೆ ಸಮಾಜದಲ್ಲಿ ಅನಾದಾರವಿರುವುದರಿಂದ ಕೃಷಿ ಇಂದು ಮೂಲೆಗುಂಪಾಗುತ್ತಿದೆ. ಬೆಲೆ ಇದ್ದಾಗ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇಲ್ಲದಂತಹ ಅತಂತ್ರ ಸ್ಥಿತಿಯನ್ನು ರೈತರು ಎದುರಿಸುತ್ತಿರುವುದರಿಂದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಯವ ಗೊಬ್ಬರವನ್ನು ಬಳಸುವ ಮೂಲಕ ಮಣ್ಣನ್ನು ಫಲವತ್ತುಗೊಳಿಸಿ ಪಾರಂಪರಿಕ ಕೃಷಿಗೆ ಒತ್ತು ನೀಡುವ ಕೆಲಸ ಆಗಬೇಕಾಗಿದೆ.
ಅಧ್ಯಕ್ಷತೆ ವಹಿಸಿದ್ದ ಶಾಸಕ ಯೋಗೀಶ್ ಭಟ್, ಕೇರಳದಲ್ಲಿ ಭತ್ತ ಕೃಷಿಗೆ ನೀಡುವ ಪ್ರೋತ್ಸಾಹಧನವನ್ನು ಕನರ್ಾಟಕದಲ್ಲೂ ನೀಡುವ ಅಗತ್ಯವಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಭತ್ತ ಕೃಷಿಯನ್ನು ಸೇರ್ಪಡೆಗೊಳಿಸಬೇಕೆಂದು ಸಲಹೆ ನೀಡಿದರು.
ಅತಿವೃಷ್ಠಿ, ಅನಾವೃಷ್ಟಿಯಿಂದ ಬೆಳೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಬೆಳೆ ವಿಮೆಗೆ ಚಿಂತನೆ ನಡೆದಿದ್ದು, ಪಶ್ಚಿಮ ವಾಹಿನಿ ಯೋಜನೆಯ ಮೂಲಕ ಕರಾವಳಿಯ 13 ನದಿಗಳನ್ನು  ಜೋಡಣೆ ಮಾಡುವ, ಚೆಕ್ಡ್ಯಾಮ್ಗಳನ್ನು ನಿರ್ಮಿಸಿ ಕೃಷಿಗೆ ಒತ್ತು ನೀಡುವ ಬಗ್ಗೆ ಚಿಂತಿಸಬೇಕಿದೆ ಎಂದು  ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಆಕಾಶವಾಣಿಯ ಕೃಷಿ ದರ್ಶನ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ, ತೋಟಗಾರಿಕಾ ಇಲಾಖೆಯಿಂದ ಸಾಲದ ಚೆಕ್ ವಿತರಣೆ ಕಾರ್ಯಕ್ರಮ ಈ ಸಂದರ್ಭದಲ್ಲಿ ನಡೆಯಿತು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಮಂಗಳೂರು ತಾ.ಪಂ. ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಮೇನಾಲ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು. ಜಂಟಿ ಕೃಷಿ ನಿರ್ದೇಶಕರು ಸ್ವಾಗತಿಸಿದರು. 
ಮೀನುಗಾರಿಕಾ ಕಾಲೇಜಿನ ಹೊರ ಆವರಣದಲ್ಲಿ ಕೃಷಿ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮಂಗಳೂರು ಮಾತ್ರವಲ್ಲ ದ.ಕ. ಜಿಲ್ಲೆಯಲ್ಲಿ ಅಪರೂಪವೆನಿಸಿರುವ ರೇಷ್ಮೆ ಕೃಷಿ, ಸಾವಯವ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಮಳಿಗೆಗಳು ಪ್ರದರ್ಶನದಲ್ಲಿದ್ದವು.