Wednesday, October 31, 2012

ದ.ಕ:19 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ಮಂಗಳೂರು,ಅಕ್ಟೋಬರ್31:ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ 19 ಮಂದಿ ಸಾಧಕರಿಗೆ ಜಿಲ್ಲಾಡಳಿತ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ'ಪ್ರಕಟಿಸಿದೆ. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ  ಬುಧವಾರ ಸುದ್ದಿಗೋಷ್ಠಿಯಲ್ಲಿ ಸಾಧಕರ ಹೆಸರುಗಳನ್ನು  ಮಾಧ್ಯಮಗಳಿಗೆ ಬಿಡುಗಡೆಗೊಳಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕೆ.ಟಿ.ಗಟ್ಟಿ ಮತ್ತು ಅಝೀಜ್ ಬೈಕಂಪಾಡಿ, ಶಿಕ್ಷಣಕ್ಕಾಗಿ ಪ್ರೊ.ಎಸ್.ಪ್ರಭಾಕರ ಉಜಿರೆ, ಯಕ್ಷಗಾನಕ್ಕಾಗಿ ಪುತ್ತೂರು ಶ್ರೀಧರ ಭಂಡಾರಿ,ಸಮಾಜ ಸೇವೆಗಾಗಿ ನರಿಕೊಂಬು ಪ್ರಕಾಶ್ ಕಾರಂತ್, ಶ್ರೀಧರ ಭಟ್ ಮತ್ತು ಕಡಂಬೋಡಿ ಮಹಾಬಲ ಪೂಜಾರಿಯವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಸಂಗೀತಕ್ಕಾಗಿ ಕಾಂಚನ ರೋಹಿಣಿ ಸುಬ್ಬರತ್ನಂ, ರಂಗಭೂಮಿಯ ಸೇವೆಗಾಗಿ ಸುಳ್ಯದ ಜೀವನ್ರಾಂ, ಜಾನಪದ ಕ್ಷೇತ್ರದ ಸಾಧನೆಗೆ ಲೋಕಯ್ಯ ಸೇರ, ಕೃಷಿಗಾಗಿ ತಾಕೋಡೆಯ ಎಡ್ವಡರ್್, ಚಿತ್ರಕಲೆಗಾಗಿ ವಿಟ್ಲದ ಮೋಹನ ಸೋನ, ಪ್ರಸಾದನಕ್ಕಾಗಿ ಶಾಂತರಾಮ ಆಚಾರ್ಯ ಕಲ್ಲಡ್ಕ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ನೃತ್ಯಕ್ಕಾಗಿ ಶಾರದಾಮಣಿ ಶೇಖರ್, ಪರಿಸರಕ್ಕಾಗಿ ಅಶೋಕವರ್ಧನ, ಸಂಶೋಧನಾ ಸಾಧನೆಗಾಗಿ ಗಾಯತ್ರಿ ನಾವಡ, ಮಾಧ್ಯಮ ಸೇವೆಗಾಗಿ ಡಾ.ರೊನಾಲ್ಡ್ ಅನಿಲ್ ಫೆರ್ನಾಂಡೀಸ್ ಮತ್ತು ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಕ್ಕಾಗಿ ಕೊಡಿಪಾಡಿ ನಾರಾಯಣ ಜೋಯಿಸ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಮಂಗಳೂರಿನ ರಾಮಕೃಷ್ಣ ಆಶ್ರಮವೂ ವಿಶೇಷ ಸೇವೆಗಾಗಿ ಪ್ರಶಸ್ತಿ ಪಡೆಯಲಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅಧ್ಯಕ್ಷತೆಯ ಸಮಿತಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಮಂಗಳೂರು ಮಹಾ ನಗರ ಪಾಲಿಕೆಯ ಆಯುಕ್ತ ಡಾ.ಹರೀಶ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳಾ ನಾಯ್ಕ್ ಮತ್ತು ಮೂಡುಬಿದರೆಯ ಡಾ.ಮೋಹನ್ ಆಳ್ವ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು ಎಂದು ವಿವರಿಸಿದ ಜಿಲ್ಲಾಧಿಕಾರಿಯವರು ಕ್ರೀಡಾ ಕ್ಷೇತ್ರದ ಉನ್ನತ ಸಾಧಕರಾದ ಸಹನಾ ಕುಮಾರಿ ಮತ್ತು ಸದಾನಂದ ಪ್ರಭು ಅವರಿಗೆ ವಿಶೇಷ ಪುರಸ್ಕಾರ ನೀಡಲಾಗುವುದು ಎಂದರು.
ಕಸಾಪ ಅಧ್ಯಕ್ಷ ಪ್ರದೀಪ್ಕುಮಾರ್ ಕಲ್ಕೂರ, ಅಪರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಪಾಲಿಕೆ ಆಯುಕ್ತರಾದ ಡಾ.ಹರೀಶ್ಕುಮಾರ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಮಂಗಳಾ ನಾಯ್ಕ್ ಉಪಸ್ಥಿತರಿದ್ದರು.