Wednesday, October 31, 2012

ಎಂಡೋ ಸಲ್ಫಾನ್ ಸಂತ್ರಸ್ತರ ಸಮೀಕ್ಷೆ ಪೂರ್ಣ 103 ಗ್ರಾಮಗಳು, 5,226 ಸಂತ್ರಸ್ತರು

ಮಂಗಳೂರು,ಅಕ್ಟೋಬರ್.31:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರ ಸಮೀಕ್ಷೆ ಅಂತಿಮ ಹಂತಕ್ಕೆ ತಲುಪಿದೆ. ಜಿಲ್ಲೆಯಲ್ಲಿ ಸಮೀಕ್ಷೆ ಪ್ರಕಾರ 5226 ಎಂಡೋ ಸಲ್ಫಾನ್ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ತಿಳಿಸಿದ್ದಾರೆ.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಮೀಕ್ಷೆ ಇಂದು ಸಂಜೆ ಮುಕ್ತಾಯಗೊಳ್ಳಲಿದೆ. ತಾಲೂಕು ಆರೋಗ್ಯ ಅಧಿಕಾರಿಗಳು, ಆರೋಗ್ಯ ಸಹಾಯಕಿಯರು, ಕಾರ್ಯಕರ್ತರು ಸಮೀಕ್ಷೆ ನಡೆಸಿರುವರು. ಸಮೀಕ್ಷೆಯ ವರದಿಯನ್ನು ಇಂದು ಸಂಜೆಯೇ ಸರಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಪ್ರಸ್ತುತ ಸಮೀಕ್ಷೆಯ ಪ್ರಕಾರ ಎಂಡೋ ಸಲ್ಫಾನ್ ಪೀಡಿತರಲ್ಲಿ 179 ಮಂದಿ ಪೂರ್ಣ ಹಾಸಿಗೆ ಹಿಡಿದವರು. ಅಂತಹವರಿಗಾಗಿ ಕೊಕ್ಕಡ ಮತ್ತು ಕೊಯಿಲದಲ್ಲಿ ಎರಡು ಡೇ ಕೇರ್ ಸೆಂಟರ್ಗಳಿವೆ. ಸಂತ್ರಸ್ತರ ತಪಾಸಣೆಗಾಗಿ ತಜ್ಞ ವೈದ್ಯರ ತಂಡ ನೇಮಕ ಮಾಡುವಂತೆ ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗಿದೆ. ವೈದ್ಯರ ತಂಡ ತಪಾಸಣೆ ನಡೆಸಿ ಬಾಧಿತರನ್ನು ಗುರುತಿಸಿ ಕೊಟ್ಟಲ್ಲಿ ಶಾಶ್ವತವಾದ ಪುನರ್ ವಸತಿ ಕೇಂದ್ರವನ್ನು ತೆರೆಯುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಪ್ರಕಾರ 42 ಗ್ರಾಮಗಳಿಗೆ ಮಾತ್ರ ಎಂಡೋ ಸಲ್ಫಾನ್ ಬಾಧಿಸಿದೆ. ಆದರೆ ಜಿಲ್ಲಾಡಳಿತ ವಿವಿಧ ಸಂಘಟನೆಗಳು, ಎಂಡೋ ಸಲ್ಫಾನ್ ಸಂತ್ರಸ್ತರ ಸಮಿತಿ ಮೊದಲಾದವರಿಂದ ಮಾಹಿತಿ ಪಡೆದು ಕೊಂಡು 103 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದೆ. ನೈಜ ಬಾಧಿತರನ್ನು ದೂರ ಮಾಡುವ ಪ್ರಶ್ನೆಯೇ ಇಲ್ಲ. ಒಂದು ವೇಳೆ ಅರ್ಹರು ಬಿಟ್ಟು ಹೋಗಿದ್ದರೆ ಪರಿಗಣಿಸುವ ಅವಕಾಶವನ್ನು ಮುಕ್ತವಾಗಿರಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟ ಪಡಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಉಪಸ್ಥಿತರಿದ್ದರು.