Thursday, October 25, 2012

ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಜಾಥಾ

ಮಂಗಳೂರು, ಅಕ್ಟೋಬರ್. 25 :-ಹಾನಿಕಾರಕ ಹಾಗೂ ಮರುಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ನಿಂದ ತಯಾರಿಸಲಾದ ತೆಳುಬ್ಯಾಗ್,ಚಾ-ಕಾಫಿ ಹಾಗೂ ತಂಪು ಪಾನೀಯ ಕಪ್, ಪ್ಲಾಸ್ಟಿಕ್ ಬ್ಯಾನರ್ ಗಳನ್ನು ನವೆಂಬರ್  ತಿಂಗಳಿಂದ  ನಿಷೇಧಿಸಲಾಗುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ನವೆಂಬರ್ 1 ರಂದು ಬೆಳಿಗ್ಗೆ 7.30 ಗಂಟೆಗೆ ಕಾಲೇಜು ವಿದ್ಯಾರ್ಥಿಗಳು,ಸ್ಕೌಟ್ಸ್ ಮತ್ತು ಗೈಡ್ಸ್ ,ಎನ್ ಸಿ ಸಿ,ಎನ್ಎಸ್ ಎಸ್ ಹಾಗೂ ವಿವಿಧ ಸಂಘಟನೆಗಳಿಂದ ಮಂಗಳಾ ಕ್ರೀಡಾಂಗಣದಿಂದ  ನೆಹರೂ ಮೈದಾನದವರೆಗೆ ಕಾಲ್ನಾಡಿಗೆ ಜಾಥಾವನ್ನು ಏರ್ಪಡಿಸಲಾಗಿದೆಯೆಂದು ದ.ಕ.ಜಿಲ್ಲಾ ಅಪರ ಜಿಲ್ಲಾಧಿಕಾರಿ  ದಯಾನಂದ ಕೆ.ಎ.ತಿಳಿಸಿದರು. ಅವರು ಇಂದು ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಮಂಗಳೂರು ಕಾರ್ಯಕ್ರಮದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
          ದ.ಕ ಜಿಲ್ಲೆಯಲ್ಲಿ ಹಂತ ಹಂತ ವಾಗಿ ಪ್ಲಾಸ್ಟಿಕ್ ಬಳಕೆ ಯನ್ನು ನಿಷೇಧಿ ಸಲಾ ಗುವುದು. ಈ ಕುರಿತು ಶಾಲಾ ಕಾಲೇಜು ಗಳಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುವುದು.ಜಾಥಾದಲ್ಲಿ ಭಾಗವಹಿಸುವ ಎಲ್ಲರಿಗೂ ನಗರದ ಸ್ಕೌಟ್ಸ್ ಭವನದಲ್ಲಿ ಉಪಹಾರ ವ್ಯವಸ್ಥೆ ಮಾಡಲಾಗಿದೆ ಹಾಗೂ ಭಾಗವಹಿಸುವ ತಂಡಗಳಿಗೆ ಸಮವಸ್ತ್ರ,ಶಿಸ್ತು ಹಾಗೂ ಘೋಷಣೆಗಳಿಗೆ ಪ್ರತ್ಯೇಕವಾದ 3 ಬಹುಮಾನಗಳನ್ನು ಇರಿಸಲಾಗಿದೆ. ಅಂದು ಕನ್ನಡ ರಾಜ್ಯೋತ್ಸವದ ಮೆರವಣಿಗೆ  ಜ್ಯೋತಿ ವೃತ್ತದಿಂದ ಪ್ರಾರಂಭವಾಗಿ ನೆಹರೂ ಮೈದಾನದಲ್ಲಿ ಅಂತ್ಯಗೊಳ್ಳಲಿರುವುದರಿಂದ  ಎರಡೂ ಕಾರ್ಯಕ್ರಮಗಳನ್ನು ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ  ಸಚಿವರ ಅಧ್ಯಕ್ಷತೆಯಲ್ಲಿ ನಡೆಯಲಿದೆಯೆಂದು ಅವರು ತಿಳಿಸಿದರು.
 ಈ ಜಾಥಾ ಕಾರ್ಯಕ್ರಮದಲ್ಲಿ ಪ್ರತೀ ಕಾಲೇಜಿನಿಂದ ಕನಿಷ್ಠ 100 ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ  ಸುರೇಶ್ ಹೇಳಿದರು.
    ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು, ಎಂ.ವಿ.ಶೆಟ್ಟಿ,ಯೇನಪೋಯಕಾಲೇಜು, ಶ್ರೀ ದೇವಿ ಕಾಲೇಜು ಹಾಗೂ ಕರಾವಳಿ ಕಾಲೇಜು ಪ್ರತಿನಿಧಿಗಳು,ಮಂಗಳೂರು ಮಹಾನಗರಪಾಲಿಕೆ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.