Friday, October 19, 2012

ನ.15 ರೊಳಗೆ ಬಿಸಿರೋಡ್ ಫ್ಲೈ ಓವರ್ ಪೂರ್ಣಗೊಳಿಸಿ: ಸಚಿವ ಮುನಿಯಪ್ಪ

ಮಂಗಳೂರು, ಅಕ್ಟೋಬರ್. 19:- ನಗರದಲ್ಲಿ ರೈಲ್ವೇ ಮತ್ತು ಜಿಲ್ಲಾಡಳಿತ ಸಮನ್ವಯದಿಂದ ಹಲವು ಪ್ರಮುಖ ಕಾಮಗಾರಿಗಳು ಸಮಯಮಿತಿಯೊಳಗೆ ಸಾಗಬೇಕಿದ್ದು, ಸಂಬಂಧಪಟ್ಟವರು ಅಕ್ಟೋಬರ್ 23ರೊಳಗೆ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡುವುದರ ಜೊತೆಗೆ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಅವರು ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ  ರೈಲ್ವೇ ಮೇಲ್ಸೇತುವೆ, ಪ್ಲೈ ಓವರ್ ಕಾಮಗಾರಿಗಳ ಕುರಿತಂತೆ ಜನಪ್ರತಿನಿಧಿಗಳು, ಜಿಲ್ಲಾಡಳಿತ, ಸ್ಥಳೀಯಾಡಳಿತ ಹಾಗೂ ಸಂಬಂದಫಟ್ಟ ಅಧಿಕಾರಿಗಳ ಜೊತೆ ಸಚಿವ ಮುನಿಯಪ್ಪನವರು ಆಯೋಜಿಸಿದ ತುರ್ತು ಸಭೆಯಲ್ಲಿ ಈ ನಿರ್ದೇಶನ ನೀಡಿದ್ದಾರೆ.
ಕಳೆದ ಸುಮಾರು ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿರುವ ಬಿಸಿರೋಡ್ ಫ್ಲೈ ಓವರ್ ಕಾಮಗಾರಿ ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸದಿದ್ದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಕಾಮಗಾರಿ ಗುತ್ತಿಗೆ ವಹಿಸಿರುವ ಇರ್ಕಾನ್ ಸಂಸ್ಥೆಗೆ  ಸಚಿವರು ಎಚ್ಚರಿಕೆ ನೀಡಿದರು.
ಬಿಸಿರೋಡ್ ಮೇಲ್ಸೇತುವೆ ಕಾಮಗಾರಿ, ಸರ್ವಿಸ್ ರೋಡ್  ಗಳ ಕುರಿತಂತೆ ಸಾಕಷ್ಟು ಬಾರಿ ಸಭೆಗಳು ನಡೆದು ಅಂತಿಮ ಗಡುವನ್ನು ನೀಡಲಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಇದರಿಂದ ಜನಸಾಮಾನ್ಯರಿಗೆ ತೀರಾ ಸಮಸ್ಯೆಯಾಗಿದೆ. ಕೂಳೂರು ಸರ್ವಿಸ್ ರೋಡ್ ಕೂಡಾ ಸಂಪೂರ್ಣವಾಗಿಲ್ಲ ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಸಚಿವರ ಗಮನ ಸೆಳೆದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರಿಂದ ಕಾಮಗಾರಿ ವಿಳಂಬವಾಗುತ್ತಿದ್ದು, ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿಲ್ಲ. ಈ ಬಗ್ಗೆ ವರದಿಯನ್ನೂ ನೀಡಲಾಗಿದೆ. ಎನ್ ಎಂ ಪಿ ಟಿ ಬಳಿ, ಪಡೀಲು ಸೇತುವೆ ಬಳಿ, ಮಹಾಕಾಳಪಡ್ಪುವಿನ ಸೇತುವೆ, ಕಾಮಗಾರಿಗಳು ಆಗಬೇಕಿದೆ. ರೈಲ್ವೇಯವರ ಜಾಗದಲ್ಲಿ ಡಾಮರೀಕರಣಕ್ಕೂ ಅವಕಾಶವಾಗುತ್ತಿಲ್ಲ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೇ ಸಚಿವರ ಗಮನ ಸೆಳೆದರು. 
ಬಿಸಿರೋಡ್  ಕಾಮಗಾರಿಯನ್ನು ನವೆಂಬರ್ 15ರೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಇರ್ಕಾನ್  ಯೋಜನಾ ವ್ಯವಸ್ಥಾಪಕರು ಹೇಳಿದರು.
ಇದೇ ವೇಳೆ ಕೂಳೂರು ಪ್ಲೈ ಓವರ್ ಬಳಿಯ ಸರ್ವಿಸ್ ರಸ್ತೆಯನ್ನು  ಕೂಡಾ  ನವೆಂಬರ್ನೊಳಗೆ ಪೂರ್ಣಗೊಳಿಸುವಂತೆ ಸಚಿವರು  ಇರ್ಕಾನ್ ಸಂಸ್ಥೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಬೈಕಂಪಾಡಿ ಸೇತುವೆ ಕಾಮಗಾರಿಯ ಕುರಿತಾದ ತಾಂತ್ರಿಕ ಸಮಸ್ಯೆ ಸೇರಿದಂತೆ ಕುಂಟುತ್ತಾ ಸಾಗಿರುವ ವಿವಿಧ ಫ್ಲೈ ಓವರ್ಗಳು, ಜಪ್ಪು ಕುಡುಪಾಡಿ ಮತ್ತು ಪಡೀಲ್ ರೈಲ್ವೇ ಸೇತುವೆಗಳ ಕುರಿತಂತೆ ಸಮಗ್ರ  ಚರ್ಚೆಗಾಗಿ  ಅ.23ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಶೇಷ ಸಭೆ ನಡೆಯಲಿದೆ ಎಂದು ಸಚಿವ ಮುನಿಯಪ್ಪ ಈ ಸಂದರ್ಭ ತಿಳಿಸಿದರು.
ಸಭೆಯಲ್ಲಿ ಪಾಲ್ಘಾಟ್ ಮತ್ತು ಮೈಸೂರು ರೈಲ್ವೇ ವಿಭಾಗಗಳ ವ್ಯವಸ್ಥಾಪಕರು,  ನ್ಯಾಷನಲ್ ಹೈವೇ ಅಥಾರಿಟಿ ಮಹಾ ಪ್ರಬಂಧಕರು, ಇರ್ಕಾನ್ ಸಂಸ್ಥೆ ಅಧಿಕಾರಿಗಳು, ಮನಪಾ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದವರು ಹೇಳಿದರು.
ಸಭೆಯಲ್ಲಿ ಈಗಾಗಲೇ ಕಾರ್ಯಾರಂಭಿಸಿರುವ ಕೂಳೂರು ಸೇರಿದಂತೆ ಫ್ಲೈ ಓವರ್ಗಳ ಕಾಮಗಾರಿ ಗುಣಮಟ್ಟದಲ್ಲಿಲ್ಲ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕ ಹಾಗೂ ವಿಧನಸಭೆಯ ಉಪಾಧ್ಯಕ್ಷ ಯೋಗೀಶ್ ಭಟ್ ಸಚಿವರ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸಂಬಂಧಫಟ್ಟ ಅಧಿಕಾರಿಗಳಿಗೆ ಸಚಿವ ಮುನಿಯಪ್ಪ ಈ ಸಂದರ್ಭ ನಿರ್ದೇಶನ ನೀಡಿದರು.
ಶಿರಾಡಿ ಘಾಟಿ ರಸ್ತೆ ದುರಸ್ತಿಯ ಕುರಿತಂತೆ ಸಭೆಯಲ್ಲಿ ವ್ಯಕ್ತವಾದ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಮುನಿಯಪ್ಪ, 40 ಕಿ.ಮೀ. ಉದ್ದದ ರಸ್ತೆಯನ್ನು ಕಾಂಕ್ರಿಟೀಕರಣಗೊಳಿಸುವ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಸಭೆಯಲ್ಲಿ ಸಂಸತ್ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಸಂಸದ ಜಯಪ್ರಕಾಶ್ ಹೆಗ್ಡೆ, ರೈಲ್ವೇ ಡಿ ಆರ್ ಎಂ ಪಿಯುಷ್ ಅಗರ್ ವಾಲ್, ಮಂಗಳೂರು ಪೊಲೀಸ್ ಆಯುಕ್ತ ಮನೀಷ್ ಕರ್ಬಿಕರ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಹಾಗೂ ಸಂಬಂಧಪಟ್ಟ ಇತರ ಅಧಿಕಾರಿಗಳು, ಇತರ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.