Friday, October 19, 2012

ಜೀತಪದ್ಧತಿ ವರದಿ ನೀಡಿ: ಜಿಲ್ಲಾಧಿಕಾರಿ

ಮಂಗಳೂರು, ಅಕ್ಟೋಬರ್. 19 :- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೀತಪದ್ಧತಿಯ ಕುರಿತು ಸಮಗ್ರ ಸಮೀಕ್ಷೆ ನಡೆಸಿ ವರದಿ ನೀಡಲು ಈಗಾಗಲೇ ಜಿಲ್ಲೆಯ ಉಪವಿಭಾಗಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಪ್ರಗತಿ ವರದಿಯನ್ನು ತಕ್ಷಣವೇ ಸಲ್ಲಿಸಿ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಸುಶಿಕ್ಷಿತರಿದ್ದು, ಇಂತಹ ಅನಿಷ್ಠ ಪದ್ದತಿ ಇರುವ ಬಗ್ಗೆ ಮಾಹಿತಿ ಇಲ್ಲ. ಆದರೂ ಕಲ್ಲು ಕೋರೆಗಳಲ್ಲಿ, ಮರಳುಗಾರಿಕೆಯಲ್ಲಿ ಹಾಗೂ ಪ್ಲಾಂಟೇಷನ್ ಗಳನ್ನೂ ದೃಷ್ಟಿಯಲ್ಲಿರಿಸಿ ಸಮಗ್ರ ಸಮೀಕ್ಷೆಯಾಗಬೇಕೆಂದರು.
ಈ ಕುರಿತು ಯಾರಿಗಾದರೂ ಮಾಹಿತಿ ದೊರೆತರೆ ತಕ್ಷಣವೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಮಾತನಾಡಿ, ನಿಗದಿತ ಗುಂಪುಗಳನ್ನು ಗಮನದಲ್ಲಿರಿಸಿ ಕಾರ್ಮಿಕ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ವಾರ್ತಾ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಜೀತಪದ್ಧತಿಗೆ ಸಂಬಂಧಿಸಿದ ಕಾನೂನಿನ ಕುರಿತು ಮಾಹಿತಿ ನೀಡುವ ಕೆಲಸವಾಗಬೇಕೆಂದರು.
ಎಲ್ಲ ಪಿಡಿಒ ಗಳು, ಗ್ರಾಮಕರಣಿಕರಲ್ಲಿ ಸ್ಥಳೀಯ ಮಟ್ಟದ ಮಾಹಿತಿ ಸಂಗ್ರಹಿಸಿ ತಮ್ಮ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಜೀತಪದ್ಧತಿ ಪಾಲನೆಯಾಗುತ್ತಿಲ್ಲ ಎಂಬ ವರದಿಯನ್ನು ತರಿಸಿ ಎಂದೂ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ನವೆಂಬರ್ ಎರಡನೇ ವಾರ ಈ ಸಂಬಂಧ ಒಂದು ಕಾರ್ಯಾಗಾರ ಆಯೋಜಿಸಲು ಸಭೆ ನಿರ್ಧರಿಸಿತು. ಮಂಗಳೂರು ಉಪವಿಭಾಗದಿಂದ ನವೆಂಬರ್ 15ರೊಳಗೆ ಸಮೀಕ್ಷೆ ವರದಿ ಸಿದ್ಧವಿರಬೇಕೆಂದ ಅವರು, ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ ರೆನ್ನಿ ಡಿಸೋಜ ಅವರ ಅಭಿಪ್ರಾಯ ಹಾಗೂ ಸಹಕಾರವನ್ನು ಕೋರಲಾಯಿತು. ಲೀಡ್ ಬ್ಯಾಂಕ್ ನ ಹೇಮಂತ್ ಭಿಡೆ ಅವರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ನಿಂದ ನಾಗೇಂದ್ರ ಅವರು ಸಭೆಯಲ್ಲಿ ಪಾಲ್ಗೊಂಡಿದ್ದರು.