Friday, June 22, 2012

ಅರಣ್ಯ ಪ್ರದೇಶದ ಆದಿವಾಸಿಗಳಿಗೆ ಮೂಲಭೂತ ಸೌಕರ್ಯ:ಜಿಲ್ಲಾಧಿಕಾರಿ ಸಂವಾದ

ಮಂಗಳೂರು ಜೂನ್ 22: ಬೆಳ್ತಂಗಡಿಯ ಅರಣ್ಯ ಪ್ರದೇಶದ ಸುತ್ತಲಿನ ಒಂಬತ್ತು ಗ್ರಾಮ ಪಂಚಾಯತ್ ನ ಹಿಂದುಳಿದ ಹಾಗೂ ಆದಿವಾಸಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆ ಮೂಲಕ ಅವರು ಸ್ವಯಂ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಅವರ ಅಭಿವೃದ್ಧಿಗೆ ಪೂರಕವಾಗಿ, ಪ್ರೇರಕವಾಗಿ ನಿಲ್ಲುವ ಭರವಸೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ನೀಡಿದರು.
ಇಂದು ಬೆಳ್ತಂಗಡಿ ತಾಲೂಕು ಪಂಚಾಯತಿಯಲ್ಲಿ ಆದಿವಾಸಿ ಮುಖಂಡರು ಹಾಗೂ ಕಾರ್ಯಕರ್ತರು ಮತ್ತು ಒಂಬತ್ತು ಪಂಚಾಯಿತಿ ಪಿಡಿಒ ಗಳು ಹಾಗೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಒಂಬಡ್ಸ್ ಮನ್ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಆದಿವಾಸಿಗಳ ಅಳಲು ಹಾಗೂ ಸಮಸ್ಯೆಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ತತ್ ಕ್ಷಣದಿಂದ ಜಿಲ್ಲಾಡಳಿತದಿಂದ ಸಾಧ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳುವುದಾಗಿ ಹೇಳಿದರು.
ನಾವೂರು ಮತ್ತು ಕುತ್ಲೂರಿಗೆ ಜಲವಿದ್ಯುತ್ ಘಟಕ, ಸಂಪರ್ಕ ರಸ್ತೆ, ತರಬೇತಿ, ಅಂಗನವಾಡಿ, ಆರೋಗ್ಯಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ ಅವರು, ಆರೋಗ್ಯ ಶಿಬಿರಗಳನ್ನು ಆಯೋಜಿಸುವುದಾಗಿ ನುಡಿದರು.
ಪ್ರತೀ ತಿಂಗಳು ಪಂಚಾಯತ್ ಸಭೆ ನಡೆಸಿ ಅಭಿವೃದ್ಧಿಯನ್ನು ಪರಿಶೀಲಿಸಬೇಕೆಂದು ಪಿಡಿಒಗಳಿಗೆ ಸೂಚಿಸಿದರು. 2012-13ನೇ ಸಾಲಿನಲ್ಲಿ ಈ ಪ್ರದೇಶ ವ್ಯಾಪ್ತಿಯ ಎಲ್ಲ ಕುಟುಂಬಗಳಿಗೆ ಉದ್ಯೋಗ ಚೀಟಿ ದೊರಕಿಸಿ ಪ್ರತಿಯೊಂದು ಕುಟುಂಬಕ್ಕೂ ಉದ್ಯೋಗ ಹಾಗೂ ಜಮೀನು ಅಭಿವೃದ್ಧಿಗೆ ಕ್ರಮಕೈಗೊಳ್ಳುವುದಾಗಿ ಒಂಬಡ್ಸ್ ಮನ್ ಶೀನಶೆಟ್ಟಿ ಹೇಳಿದರು.
ಕಾರ್ಕಳದ ಮಿಯಾರಿನ ಮುಂಗುಲಿ ಕೊರಗ ಅವರು ತಮ್ಮ ಯಶೋಗಾಥೆಯನ್ನು ಹಂಚಿಕೊಳ್ಳುವ ಮೂಲಕ ಸಭೆಯಲ್ಲಿ ನೆರೆದವರು ಸ್ವಯಂ ಅಭಿವೃದ್ಧಿಯಾಗುವ ಬಗ್ಗೆ ಪ್ರೇರಪಣೆ ನೀಡಿದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವರಾಮೇಗೌಡ, ತಹಸೀಲ್ದಾರ್ ಕುಸುಮ ಕುಮಾರಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.