Friday, June 1, 2012

ನಕ್ಸಲ್ ಸಮಸ್ಯೆ ಪರಿಹರಿಸಲು ಎಲ್ಲ ಇಲಾಖೆಗಳ ಸಹಕಾರ ಅಗತ್ಯ:ಐಜಿಪಿ ಪ್ರತಾಪ್ ರೆಡ್ಡಿ

ಮಂಗಳೂರು ಜೂನ್.01: ಜಿಲ್ಲೆಯ ನಕ್ಸಲ್ ಪೀಡಿತ 12 ಗ್ರಾಮಗಳ ಜನರ ಸಮಸ್ಯೆಗಳನ್ನು ಒಂದು ಹಂತದವರೆಗೆ ಪರಿಹರಿಸಲು ವಿವಿಧ ಇಲಾಖೆಗಳ ಸಹಕಾರ ಹಾಗೂ ಸಮನ್ವಯತೆಯಿಂದ ಸಮಗ್ರ ಯೋಜನೆಯೊಂದನ್ನು ರೂಪಿಸಿ ಪರಿಹಾರ ಕಾಣುವಂತಾಗಬೇಕು ಎಂದು ಪಶ್ಚಿಮ ವಲಯ ಐಜಿಪಿ  ಪ್ರತಾಪ್ ರೆಡ್ಡಿ ಅವರು ಹೇಳಿದರು.
 ಅವರಿಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾ ರಿಗಳ ಸಭೆ ಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ವಿವಿಧ ಇಲಾಖೆಗಳು ತಮ್ಮ ವ್ಯಾಪ್ತಿ ಯಡಿ ಬರುವ ಯೋಜನೆಗಳ 10 ಶೇಕಡಾ ಅನುದಾ ನವನ್ನು ಪ್ರತ್ಯೇಕ ವಾಗಿ ಈ ಪ್ರದೇಶದ ಅಭಿವೃದ್ಧಿಗೆ ಮೀಸಲಿಡುವ ಮುಖಾಂತರ ಒಂದು ಹೊಸ ಮಾದರಿ ಸೃಷ್ಟಿ ಸಾಧ್ಯ. ಇಲ್ಲದೆ  ಹೋದರೆ  ಇಲ್ಲಿ ನಡೆಯುವ ಜನಸಂಪರ್ಕ ಸಭೆಗಳಿಗೊಂದು ಅರ್ಥ ಕೊಡಲು ಅಸಾಧ್ಯ ಎಂದ ಅವರು, ಜನಸಂಪರ್ಕ ಸಭೆಗಳ ಬಗ್ಗೆ ಜನರು ವಿಶ್ವಾಸವನ್ನು ಕಳೆದುಕೊಳ್ಳುವಂತಾಗುತ್ತದೆ ಎಂದರು.
 ಈ ಪ್ರದೇಶಗಳಿಗೆ ತಾವು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದು ಸಮಸ್ಯೆಗಳನ್ನು ನಮ್ಮ ಮಟ್ಟದಲ್ಲೇ ಪರಿಹರಿಸಲು ಸಾಧ್ಯವಾಗುವಂತೆ ಕಾರ್ಯಯೋಜನೆ ರೂಪಿಸುವ ಒಂದು ಪ್ರಥಮ ಪ್ರಯತ್ನಕ್ಕೆ ಮುಂದಾಗಿದ್ದು ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದರು.
ಕೆಳಹಂತದಲ್ಲಿರುವ ಸಮಸ್ಯೆಗಳನ್ನು ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದರಿಂದ ಸಮಸ್ಯೆಗಳ ಪರಿಹಾರ ಸಾಧ್ಯವಿದೆ ಎಂದ ಅವರು, ತಾವು ಈ ಪ್ರದೇಶಗಳ ಭೇಟಿ ಸಂದರ್ಭದಲ್ಲಿ ಮನಗಂಡಿರುವ ಸಮಸ್ಯೆಗಳನ್ನು ಸಭೆಯ ಮುಂದಿಟ್ಟರು.
ಸರ್ಕಾರದ ವಿಶೇಷ ಪ್ಯಾಕೇಜ್ ಗಾಗಿ ಕಾಯದೆ ಎಲ್ಲ ಇಲಾಖೆಗಳ ಸಹಕಾರದಿಂದ ಇಂತಹ ಒಂದು ಮಾದರಿ ಯತ್ನ ಸಾಧ್ಯ ಎಂದ ಅವರು, ಪೊಲೀಸ್ ಇಲಾಖೆ ನಕ್ಸಲ್ ಪೀಡಿತ ಪ್ರದೇಶಗಳ ಸಮಸ್ಯೆಗಳನ್ನು ಮನನ ಮಾಡಿಕೊಂಡಿದ್ದು, ಕಾನೂನು ಮತ್ತು ಸುವ್ಯವಸ್ಥೆಯಿಂದ ಮಾತ್ರ ನಕ್ಸಲ್ ಸಮಸ್ಯೆಗೆ ಪರಿಹಾರ ದೊರಕಿಸಲು ಸಾಧ್ಯವಿಲ್ಲ ಎಂದರು.
ಅಲ್ಲಿನ ಜನರ ಅಗತ್ಯಗಳನ್ನು ಪೊಲೀಸ್ ಇಲಾಖೆ ಅರಿತಿದ್ದು, ಅವರಿಗೆ ಮೂಲ ಸೌಕರ್ಯ ನೀಡುವ ಮೂಲಕ, ನಡೆದಾಡಲು ರಸ್ತೆ, ಶಿಕ್ಷಣ, ಆರೋಗ್ಯ ಹಾಗೂ ವಿದ್ಯುಚ್ಛಕ್ತಿ  ಸೌಲಭ್ಯ ಇವರಿಗೆ ಬೇಕಿದೆ. ಅವರ ಬದುಕನ್ನು ಸಹನೀಯವಾಗಿಸುವ ಮೂಲಕ ನಕ್ಸಲ್ ಸಮಸ್ಯೆ ಬಗೆಹರಿಸಲು ಖಂಡಿತ ಸಾಧ್ಯವಿದೆ. ಇಲ್ಲಿ ಈವರಗೆ ನಡೆದಿರುವ ಜನಸಂಪರ್ಕ ಸಭೆಗಳಿಂದ ಜನರ ಅಗತ್ಯಗಳನ್ನು ಇಲಾಖೆ ಮನಗಂಡಿದ್ದು, ಎಲ್ಲ ಇಲಾಖೆಗಳ ಸಹಕಾರದಿಂದ ಅವರ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ನಡೆದಾಡಲು ರಸ್ತೆ, ಕುಡಿಯಲು ನೀರು, ಚಿಕಿತ್ಸೆ ನೀಡಲು ಡಾಕ್ಟರ್ ಹಾಗೂ ಪ್ರಾಥಮಿಕ ಶಿಕ್ಷಣ ಸೌಲಭ್ಯವನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಳ್ಳಿ ಎಂದರು. ಉಳಿದೆಡೆಗಳಲ್ಲಿರುವಂತೆ ಜನಸಂಖ್ಯೆಗನುಗುಣವಾಗಿ ಎ ಎನ್ ಎಮ್ ಗಳು ಹಾಗೂ ಶಾಲೆ ಮತ್ತು ಶಿಕ್ಷಕರನ್ನು ಇಲ್ಲಿ ನೇಮಿಸಲು ಅಥವಾ ನೀಡಲು ಸಾಧ್ಯವಿಲ್ಲ; ಈ ಪ್ರದೇಶಗಳನ್ನು ವಿಶೇಷವೆಂದು ಪರಿಗಣಿಸಿ ವಿಶೇಷ ಕ್ರಮಗಳನ್ನು ಕೈಗೊಳ್ಳುವಂತಾಗಬೇಕು ಎಂದರು.
ಅರಣ್ಯ ಇಲಾಖೆಯ ಸಹಕಾರ ನೆಟ್ ವರ್ಕಿಂಗ್ ಹಾಗೂ ಸೌಲಭ್ಯ ಕ್ರೂಢೀಕರಣಕ್ಕೆ ಅಗತ್ಯವಾಗಿದ್ದು, ವೈಲ್ಡ್ ಲೈಫ್ ನ ಸಹಕಾರ ಪೊಲೀಸ್ ಇಲಾಖೆಗೆ ಬೇಕಿದೆ ಎಂದರು.
ಇದೇ ಮಾದರಿಯಲ್ಲಿ ನಕ್ಸಲ್ ಪೀಡಿತ ಪ್ರದೇಶಗಳ ಸಾಮಾಜಿಕ ಆರ್ಥಿಕ ಸ್ಥಿತಿ ಅಧ್ಯಯನ ಹಾಗೂ ಪುನರ್ ವಸತಿಯ ಬಗ್ಗೆಯೂ ಜಿಲ್ಲಾಡಳಿತ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಐಜಿಪಿ ಅವರು ವಿವರಿಸಿದರು. ಎಸ್ ಪಿ ಅಭಿಷೇಕ್ ಗೋಯಲ್ ಅವರು ಪೊಲೀಸ್ ಇಲಾಖೆಯ ಸಮೀಕ್ಷೆಯನ್ನು ಸಭೆಯಲ್ಲಿ ಮಂಡಿಸಿದರು.
ದ.ಕ. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಮಾತನಾಡಿ, ವಿವಿಧ ಇಲಾಖೆಗಳ ಯೋಜನೆಗಳಡಿ ಫಲಾನುಭವಿಗಳ ಆಯ್ಕೆ ಸಂದರ್ಭದಲ್ಲಿ ಕೈಗೊಳ್ಳಬಹುದಾದ ನಿರ್ಣಯಗಳು ಹಾಗೂ ಜನರ ಸಮಸ್ಯೆಗೆ ಸ್ಪಂದಿಸಲು ಇಲಾಖೆಗಳಿಗೆ ಸೂಚಿಸಿದರು.
ಇಲ್ಲಿನ ಸ್ಥಳೀಯರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಲು ವಾರ್ತಾ ಇಲಾಖೆ ಹೊಣೆ ಹೊರಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾ ಆರೋಗ್ಯ ಇಲಾಖೆ ಈ ಪ್ರದೇಶಗಳಲ್ಲಿ ಮೊಬೈಲ್ ಆರೋಗ್ಯ ಕೇಂದ್ರ ಹಾಗೂ ಮೊಬೈಲ್ ಆಹಾರ ಪೂರೈಕೆ ವ್ಯವಸ್ಥೆಯನ್ನು ಆರಂಭಿಸಲು ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಡಳಿತದ ಮಿತಿಯಲ್ಲಿ ಅತ್ಯುತ್ತಮ ಪರಿಹಾರ ನೀಡಲು ಸಾಧ್ಯವಿಲ್ಲ; ಆದರೆ ಉತ್ತಮ ಪರ್ಯಾಯ ವ್ಯವಸ್ಥೆಗಳನ್ನು  ನೀಡಲು ಜಿಲ್ಲಾಡಳಿತ ಬದ್ಧ ಎಂದರು.
ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಜಿಲ್ಲಾ ಪಂಚಾಯತ್ ಅಲ್ಲಿನ ಜನರ ಅಭಿವೃದ್ಧಿಗೆ ವಿಶೇಷ ಕಾಳಜಿಯನ್ನು ವಹಿಸುವ ಭರವಸೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ನೀಡಿದರು. ಉದ್ಯೋಗ ಖಾತ್ರಿ ಯೋಜನೆಯಡಿ ನಕ್ಸಲ್ ಪೀಡಿತ ಪ್ರದೇಶ ಜನರಿಗೆ ಉದ್ಯೋಗ ನೀಡುವುದಾಗಿಯೂ ನುಡಿದರು. ಪೊಲೀಸ್ ಅಧೀಕ್ಷಕರು ಗಮನಸೆಳೆದಂತೆ ಅಂಗನವಾಡಿಗಳನ್ನು ಆರಂಭಿಸಲಾಗುವುದು ಎಂದರು. ಆರೋಗ್ಯ ಶಿಬಿರಗಳನ್ನು ನಡೆಸಲಾಗುವುದು. ಜನಸಂಪರ್ಕ ಸಭೆಗಳನ್ನು ನಡೆಸಲಾಗುವುದು. ಜುಲೈ 15ರೊಳಗೆ ಈ ಪ್ರದೇಶಗಳ ಫಲಾನುಭವಿಗಳ ಪಟ್ಟಿಯನ್ನು ತಯಾರಿಸಿ ಪೊಲೀಸ್ ಇಲಾಖೆಯ ಗಮನಕ್ಕೆ ತರಲಾಗುವುದು. ಜನರಿಗೆ ಗುಣಮಟ್ಟದ ಸೇವೆಗಳನ್ನು ನೀಡಲಾಗುವುದು. ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಸಭೆಯಲ್ಲಿ ಇದುವರೆಗೆ ಆದ ಸಾಧನೆಗಳು ಹಾಗೂ ಆಗಬೇಕಾದ ಕೆಲಸಗಳ ಬಗ್ಗೆ ಸಭೆಯಲ್ಲಿ ಗಹನ ಚರ್ಚೆ ನಡೆಯಿತು. ಅಪರ ಜಿಲ್ಲಾಧಿಕಾರಿ ದಯಾನಂದ, ಎಎಸ್ ಪಿ ಅನುಚೇತ್, ಡಿಸಿಎಫ್ ಪಾಲಯ್ಯ ಅವರನ್ನೊಳಗೊಂಡಂತೆ ಎಲ್ಲ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.