Saturday, April 16, 2011

ಅಕ್ರಮ ಗಣಿಗಾರಿಕೆ;ಸುಪ್ರೀಂ ಕೋರ್ಟ್ ಸೂಚಿಸಿದರೆ ನಷ್ಟ ವಸೂಲಿ:ಮುಖ್ಯಮಂತ್ರಿ ಯಡಿಯೂರಪ್ಪ

ಮಂಗಳೂರು,ಏಪ್ರಿಲ್.16:ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಯಿಂದ ಆಗಿರುವ ನಷ್ಟವನ್ನು ವಸೂಲು ಮಾಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದರೆ ಗಣಿ ಮಾಲಕರಿಗೆ ದಂಡ ವಿಧಿಸಿ ವಸೂಲು ಮಾಡಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಇಂದು ವಿವಿಧ ಅಭಿವೃದ್ದಿ ಕಾರ್ಯ ಕ್ರಮಗಳಲ್ಲಿ ಪಾಲ್ಗೊಳ್ಳಲು ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಮುಖ್ಯ ಮಂತ್ರಿ ಗಳು ಬಜ್ಪೆ ವಿಮಾನ ನಿಲ್ದಾಣ ದಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು.ಸರ್ವೋಚ್ಚ ನ್ಯಾಯಾಲಯ ನೇಮಿಸಿದ್ದ ಕೇಂದ್ರ ಉನ್ನತಾ ಧಿಕಾರ ಸಮಿತಿ (ಸಿಇಸಿ) ಸಲ್ಲಿಸಿದ ವರದಿಯಲ್ಲಿ ಐದು ಪಟ್ಟು ದಂಡ ವಸೂಲಿ ಮಾಡುವಂತೆ ಶಿಫಾರಸು ಮಾಡಿರುವುದಾಗಿ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ ಎಂದರು.
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಮತ್ತು ಅದಿರು ರಫ್ತು ಬಗ್ಗೆ ನಾನು ವಿಧಾನಸಭೆಯಲ್ಲಿ ನೀಡಿದ ಮಾಹಿತಿ ಆಧಾರದಲ್ಲಿ ಸಿಇಸಿ ಸುಪ್ರೀಂ ಕೋರ್ಟಿಗೆ ವರದಿ ಸಲ್ಲಿಸಿದೆ. ವರದಿ ಸಿದ್ಧಪಡಿಸಲು ಬೇಕಾದ ಎಲ್ಲ ಸಹಕಾರವನ್ನು ರಾಜ್ಯ ಸರ್ಕಾರ ನೀಡಿದೆ ಎಂಬುದಾಗಿ ಕೂಡಾ ಸಿಇಸಿ ವರದಿಯಲ್ಲಿ ಹೇಳಿದೆ.ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪಿಗೆ ಸರಕಾರ ಬದ್ಧವಾಗಿದೆ ಎಂದರು.ಸಿಇಸಿ ಮನವಿ ಪ್ರಕಾರ ಕ್ರಮ ಕೈಗೊಳ್ಳಲು ಸರಕಾರ ಸಿದ್ಧವಿದೆ. ಅಕ್ರಮ ಗಣಿಗಾರಿಕೆ ಮತ್ತು ರಫ್ತು ನಿಲುಗಡೆಯಾಗಬೇಕು ಎಂಬುದು ರಾಜ್ಯದ ಸ್ಪಷ್ಟ ನಿಲುವು. ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಮ್ಮ ಸರಕಾರ ದೇಶದಲ್ಲೇ ಮೊದಲ ಬಾರಿಗೆ ಅದಿರು ರಫ್ತನ್ನು ನಿಷೇಧಿಸಿ ಅಕ್ರಮ ಗಣಿಗಾರಿಕೆ ತಡೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದರು.
ಅಕ್ರಮ ಗಣಿಗಾರಿಕೆ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಕೇಂದ್ರ ಸರಕಾರ ಮುಂದೆ ಬರಬೇಕು. ಈ ಕುರಿತು 2010ರ ಜುಲೈ ತಿಂಗಳಲ್ಲಿ ನಡೆದ ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಕೂಡಾ ನಾನು ಪ್ರಸ್ತಾಪಿಸಿದ್ದೆ. ಆದರೆ ಪ್ರಧಾನಮಂತ್ರಿಗಳು ಆ ಬಗ್ಗೆ ಗಮನ ಹರಿಸಿಲ್ಲ, ಕೂಡಲೇ ಪ್ರಧಾನ ಮಂತ್ರಿಗಳು ಗಮನ ಹರಿಸಬೇಕಿದೆ.ಇಡೀ ದೇಶದಲ್ಲಿ ಇದು ಜಾರಿಗೆ ಬಂದು ಖನಿಜ ಸಂಪತ್ತು ಲೂಟಿಯಾಗುವುದು ನಿಲ್ಲಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಧ್ಯಪ್ರವೇಶ ಮಾಡಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

ರೈತರ ಭೂಸ್ವಾಧೀನ ಇಲ್ಲ,ಮುಖ್ಯಮಂತ್ರಿ ಸ್ಪಷ್ಟನೆ:
ಕರಾವಳಿ ಜಿಲ್ಲೆಗಳಲ್ಲಿ ರೈತರ ವಶದಲ್ಲಿರುವ ಕುಮ್ಕಿ, ಕಾನೆ,ಬಾಣೆ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳಲಾಗುವುದಿಲ್ಲ.ಯಾವುದೇ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ವಿಧಾನಸಭಾ ಉಪಾಧ್ಯಕ್ಷ ಎನ್. ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಮೇಯರ್ ಪ್ರವೀಣ್, ಜಿ.ಪಂ. ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್ ಮುಂತಾದವರು ಉಪಸ್ಥಿತರಿದ್ದರು.