Saturday, February 5, 2011

ಗುಣಮಟ್ಟದ ನ್ಯಾಯದಾನ ಮಾಡಿ-ನ್ಯಾ. ನಾಗಮೋಹನ್ ದಾಸ್

ಮಂಗಳೂರು,ಫೆಬ್ರವರಿ.05:ದೇಶದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿ ವರ್ಷ 50,000 ಕಟ್ಲೆಗಳು ವಿಲೇವಾರಿಯಾಗುತ್ತಿದೆ.ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ 16 ಲಕ್ಷ ಮೊಕದ್ದಮೆಗಳು ತೀರ್ಮಾನವಾಗುತ್ತವೆ. ಕೆಳಮಟ್ಟದ ಕೋರ್ಟ್ ಗಳಲ್ಲಿ 1.6 ಕೋಟಿ ದಾವೆಗಳು ಇತ್ಯರ್ಥವಾಗುತ್ತಿದ್ದರೂ, ನಮ್ಮ ನ್ಯಾಯಾಲಯಗಳಲ್ಲಿ ಇನ್ನು 3 ಕೋಟಿ ಮೊಕದ್ದಮೆಗಳು ಬಾಕಿ ಉಳಿದಿವೆ.ಆದ್ದರಿಂದ ನ್ಯಾಯಾಂಗದಲ್ಲಿರುವ ಎಲ್ಲರೂ ಕಕ್ಷಿದಾರರಿಗೆ ತ್ವರಿತ ಹಾಗೂ ಗುಣಮಟ್ಟದ ನ್ಯಾಯದಾನ ವಿತರಿಸಲು ಮುಂದಾಗಬೇಕೆಂದರು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶರಾದ ಎಚ್.ಎನ್.ನಾಗಮೋಹನದಾಸ್ ಅವರು ನ್ಯಾಯಾಂಗ ಇಲಾಖೆ ಹಾಗೂ ವಕೀಲರ ವೃಂದಕ್ಕೆ ಕರೆ ನೀಡಿದ್ದಾರೆ.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ನಿರ್ಮಿಸಿರುವ ಹೆಚ್ಚುವರಿ ಸಿವಿಲ್ ನ್ಯಾಯಾಲಯದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.ಇಂದು ದೇಶದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಿದ್ದರೆ ಅದಕ್ಕೆ ನಮ್ಮ ಬಲಯುತವಾದ ನ್ಯಾಯಾಂಗ ವ್ಯವಸ್ಥೆಯೇ ಕಾರಣ.ಇಂದಿಗೂ ಭಾರತೀಯರು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹೆಚ್ಚು ನಂಬಿಕೆ ಹೊಂದಿದವರಾಗಿದ್ದಾರೆ.ವ್ಯಾಜ್ಯಗಳನ್ನು ಶೀಘ್ರ ಇತ್ಯರ್ಥ ಪಡಿಸಬೇಕು.ಸಾಧ್ಯವಾದಷ್ಟು ಮಟ್ಟಿಗೆ ರಾಜಿ ಸಂಧಾನದ ಮೂಲಕ ವ್ಯಾಜ್ಯಗಳ ತೀರ್ಮಾನವಾಗಬೇಕು.ನಮ್ಮಲ್ಲಿ ಅಕ್ಷರಸ್ಥರ ಸಂಖ್ಯೆ ಶೇಕಡಾ 70 ಆದರೆ ಕಾನೂನು ಅರಿವು ಇರುವವರ ಸಂಖ್ಯೆ ಕೇವಲ ಶೇಕಡಾ 10 ಕ್ಕಿಂತ ಕಡಿಮೆಯಾಗಿರುತ್ತದೆ. ಆದ್ದರಿಂದ ಯುವ ವಕೀಲರು ಜನರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸಬೇಕು. ಜನರಿಗೆ ನ್ಯಾಯಾಂಗದಲ್ಲಿ ನಂಬಿಕೆ ಹೆಚ್ಚಾಗುವಂತೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ಅವರು ಮಾತನಾಡಿ ನ್ಯಾಯಾಲಯದ ಆವರಣದಲ್ಲಿ ಗಿಡಮರಗಳನ್ನು ಬೆಳೆಸಲು ಸಂಬಂಧಿಸಿದ ಇಲಾಖೆಯವರಿಗೆ ಸೂಚಿಸುವುದಾಗಿ ತಿಳಿಸಿದರು.ಕಾನೂನು ಸಂಸದೀಯ ಹಾಗೂ ಪೌರಾಡಳಿತ ಸಚಿವರಾದ ಎಸ್. ಸುರೇಶ್ ಕುಮಾರ್ ಅವರು ಮಾತನಾಡಿ ದಕ್ಷಿಣಕನ್ನಡ ಜಿಲ್ಲೆಯ ನ್ಯಾಯಾಂಗ ಇಲಾಖೆ ಸಿಬ್ಬಂದಿ ಹಾಗೂ ನ್ಯಾಯಾಧೀಶರುಗಳಿಗೆ ವಸತಿ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಲೋಕೋಪಯೋಗಿ ಸಚಿವರಾದ ಸಿ.ಎಂ.ಉದಾಸಿಯವರು ಮಾತನಾಡಿ ಬಂಟ್ವಾಳದಲ್ಲಿ ನಿಮರ್ಿಸಿರುವ ನ್ಯಾಯಾಲಯ ಕಟ್ಟಡಕ್ಕೆ ರೂ.1.6 ಕೋಟಿ ವೆಚ್ಚ ಮಾಡಲಾಗಿದೆ ಎಂದರು.
ಸಂಸದರಾದ ನಳಿನ್ ಕುಮಾರ್ ಕಟೀಲ್, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ವಿ.ಪಿಂಟೋ,ಅಡ್ವೋಕೇಟ್ ಜನರಲ್ ನಟರಾಜ್ ಮುಂತಾದವರು ಮಾತನಾಡಿದರು. ದ.ಕ.ಜಿಲ್ಲಾ ಪ್ರಧಾನ ನ್ಯಾಯಾಧೀಶ ಹೆಚ್.ಆರ್.ದೇಶಪಾಂಡೆ ಸ್ವಾಗತಿಸಿದರು.ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ರಮಾನಾಥ ರೈಅಧ್ಯಕ್ಷತೆವಹಿಸಿದ್ದರು.