Saturday, December 31, 2011

ರಾಷ್ಟ್ರೀಯ ಯುವಜನೋತ್ಸವ:ಸ್ಥಳೀಯ ಯುವ ಕಲಾವಿದರಿಗೆ ಅವಕಾಶ

ಮಂಗಳೂರು,ಡಿಸೆಂಬರ್.31:ಮಂಗಳೂರಿನಲ್ಲಿ ನಡೆಯಲಿರುವ 17ನೇ ರಾಷ್ಟ್ರೀಯ ಯುವಜನೋತ್ಸವ 2012 ಇದರ ಅಂಗವಾಗಿ 13-1-2012 ರಿಂದ 15-1-2012 ರ ವರೆಗೆ 18 ರಿಂದ 35 ವರ್ಷ ವಯೋಮಿತಿಯ ಯುವ ಕಲಾವಿದರ ಶಿಬಿರವನ್ನು ಪ್ರತೀ ದಿನ ಬೆಳಿಗ್ಗೆ 9.00 ರಿಂದ ಸಂಜೆ 5.00 ರ ತನಕ ಏರ್ಪಡಿಸಲಾಗಿದೆ. ಇದರಲ್ಲಿ ವಿಕಲ ಚೇತನ ಕಲಾ ವಿದರು ಸಹಿತ ಮೂರು ವಿಭಾಗ ಗಳಿವೆ. ಆಶು ಚಿತ್ರಣ,ಆವೆ ಮಣ್ಣು ಮೂರ್ತಿ ಶಿಲ್ಪ,ಛಾಯಾ ಚಿತ್ರಣ ಎಂಬ ಮೂರು ವಿಭಾಗ ಗಳು.
ಆಶು ಚಿತ್ರಣ ಮತ್ತು ಆವೆ ಮಣ್ಣು ಮೂರ್ತಿ ಶಿಲ್ಪ ಶಿಬಿರಕ್ಕೆ ಮಂಗಳೂರು ಕದ್ರಿ ಪಾರ್ಕಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಛಾಯಾ ಚಿತ್ರಣಕ್ಕೆ ಪಿಲಿಕುಳ ನಿಸರ್ಗಧಾಮ,ಪಣಂಬೂರು ಕಡಲ ಕಿನಾರೆ ಮತ್ತು ಕದ್ರಿ ದೇವಸ್ಥಾನ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಆಕ್ರಿಲಿಕ್ ಬಣ್ಣ ಮತ್ತು 24''* 30'' ಅಳತೆಯ ಕ್ಯಾನ್ವಾಸ್ ಒದಗಿಸಿಕೊಡಲಾಗುವುದು.ಆವೆಮಣ್ಣನ್ನು ಸ್ಥಳದಲ್ಲಿಯೇ ನೀಡಲಾಗುವುದು.ಛಾಯಾಚಿತ್ರಕ್ಕೆ ಆಯಾ ಕಲಾವಿದರೇ ಉಪಕರಣಗಳನ್ನು ಒದಗಿಸಿಕೊಳ್ಳತಕ್ಕದ್ದು.ಇದಲ್ಲದೆ ಪಣಂಬೂರು ಬೀಚ್ ಪರಿಸರದಲ್ಲಿ ಮರಳು ಶಿಲ್ಪ ರಚಿಸುವ ಅವಕಾಶವೂ ಇದೆ.
ಈ ಶಿಬಿರದಲ್ಲಿ ಸ್ಥಳೀಯ ವಿಕಲಚೇತನರ ಕಲಾವಿದರನ್ನೊಳಗೊಂಡಂತೆ ಅಭ್ಯರ್ಥಿಗಳು ಜನವರಿ 7 ರ ಸಂಜೆ 5.30ರೊಳಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದೆಂದು ಯುವ ಕಲಾವಿದರ ಉಪ ಸಮಿತಿ ಅಧ್ಯಕ್ಷರಾದ ಡಾ.ವಾಮನ ನಂದಾವರ ತಿಳಿಸಿರುತ್ತಾರೆ.ಕೇವಲ 15 ಕಲಾವಿದರಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಅವಕಾಶವಿದೆ.