Wednesday, December 21, 2011

ಯುವಜನೋತ್ಸವಕ್ಕೆ ಪೋಲಿಸರ ಸರ್ವ ಸಹಕಾರ ;ಸೀಮಂತ್ ಕುಮಾರ್ ಸಿಂಗ್

ಮಂಗಳೂರು.ಡಿಸೆಂಬರ್.21:17ನೇ ರಾಷ್ಟ್ರೀಯ ಯುವಜನೋತ್ಸವವನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಪೋಲೀಸ್ ಕಮೀಷನರೇಟ್ ವತಿಯಿಂದ ಸರ್ವ ಸಹಕಾರ ನೀಡುವುದಾಗಿ ಪೋಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.ಅವರು ಮಂಗಳವಾರ ಸಂಜೆ (20-12-11) ಮಂಗಳಾ ಕ್ರೀಡಾಂಗಣದ ಯುವಜನೋತ್ಸವದ ಕ್ಯಾಂಪ್ ಕಚೇರಿಯಲ್ಲಿ ಈ ಸಂಬಂಧ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಎಲ್ಲಾ ಉಪ ಸಮಿತಿಗಳ ಮುಖ್ಯಸ್ಥರು ಹಾಗೂ ನೋಡೆಲ್ ಅಧಿಕಾರಿಗಳು ಸ್ಥಳೀಯ ಪೋಲೀ ಸರೊಂದಿಗೆ ನಿಕಟ ಸಂಪರ್ಕ ವನ್ನಿರಿ ಸಿಕೊಂಡು ಮಾಹಿತಿ ನೀಡ ಬೇಕೆಂದ ಅವರು, ಎಲ್ಲಾ ಕಾರ್ಯ ಕ್ರಮಗಳ ಕುರಿತು ವಿವರ ಮಾಹಿತಿಯನ್ನು ಕಮಿಷನರೇಟ್ ಗೆ ನೀಡಬೇಕೆಂದರು. ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಇವರು ಕಾನೂನು ಮತ್ತು ಸುರಕ್ಷಾ ವ್ಯವಸ್ಥೆಯ ಸದಸ್ಯ ಕಾರ್ಯದರ್ಶಿಗಳಾಗಿದ್ದು ಯಾವುದೇ ಸಂದರ್ಭದಲ್ಲೂ ಅಧಿಕಾರಿಗಳು ಪೋಲಿಸ್ ಆಯುಕ್ತರ ಮೊಬೈಲ್ ಸಂಖ್ಯೆ 9480802304ನ್ನು ಸಂಪರ್ಕಿಸಬಹುದು. ಅದೇ ರೀತಿ ಅಪರಾಧ ವಿಭಾಗದ ಡಿಸಿಪಿ ಧರ್ಮಯ್ಯ ಅವರು 9480802305 ನಲ್ಲಿ ಲಭ್ಯರಿರುತ್ತಾರೆ. ಟ್ರಾಫಿಕ್ ಎಸಿಪಿ ಸುಬ್ರಹ್ಮಣ್ಯ ಅವರ ಮೊಬೈಲ್ ನಂಬರ್ 9480802312 ಎಂದು ಸಭೆಗೆ ಮಾಹಿತಿ ನೀಡಿದರು. ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್ಗಳು ಸೇರಿದಂತೆ ಕಾರ್ಯಕ್ರಮಗಳು ನಡೆಯುವ ಪ್ರಮುಖ ಪ್ರದೇಶಗಳಲ್ಲಿ ಪೋಲೀಸ್ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಯುವ ಜನೋತ್ಸವ ಸಂಬಂಧ ರಚಿಸ ಲಾಗಿರುವ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯ ದರ್ಶಿಗಳು ಕಾರ್ಯಕ್ರಮ ಸಂಬಂಧ ಇದುವರೆಗೆ ಆಗಿರುವ ಅಭಿವೃದ್ಧಿಯ ಮಾಹಿತಿಯನ್ನು ನೀಡಿದರು. ಆರ್ ಟಿ ಒ ಮತ್ತು ಪೊಲೀಸ್ ಇಲಾಖೆ ಜನವರಿ 12ರಿಂದ 16ರವರೆಗೆ ಸಮನ್ವಯ ಸಾಧಿಸಿ ಟ್ರಾಫಿಕ್ ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ಗೊಂದಲಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರಾದ ವೈ.ಆರ್.ಕಾಂತ ರಾಜೇಂದ್ರ ಮತ್ತು ನೆಹರು ಯುವ ಕೇಂದ್ರದ ವಲಯ ನಿರ್ದೇಶಕರಾದ ನಟರಾಜನ್ ಅವರು ಉಪಸ್ಥಿತರಿದ್ದರು. ಎಲ್ಲಾ ಸಮಿತಿ ಮುಖ್ಯಸ್ಥರು ಮತ್ತು ಸದಸ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.