Tuesday, July 30, 2013

ಮಹಿಳಾ ಮತ್ತು ಮಕ್ಕಳ ಮಾರಾಟ ತಡೆಗೆ ಇಲಾಖೆಗಳ ಸಮನ್ವಯತೆ ಅವಶ್ಯ-ಎನ್.ಪ್ರಕಾಶ್


ಮಂಗಳೂರು, ಜುಲೈ. 30:-ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಗೊಂದು ಈಗೊಂದು ಎಂಬಂತೆ ಬೆಳಕಿಗೆ ಬರುವ ಮಹಿಳೆ ಹಾಗೂ ಮಕ್ಕಳ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಿ ಇತ್ಯರ್ಥ ಪಡಿಸುವಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಹಾಗೂ ಸ್ವಯಂ  ಸೇವಾ ಸಂಸ್ಥೆಗಳ ನಡುವೆ ಸಮನ್ವಯತೆ ಅವಶ್ಯ ಎಂದು ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಕಾವಲು ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ  ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಜಿಲ್ಲಾ ಮಟ್ಟದ ಕಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 1-4-2012 ರಿಂದ 30-6-13 ರ ತನಕ 3 ಮಹಿಳೆಯರು ಹಾಗೂ 3 ಮಕ್ಕಳಿಗೆ  ಸಂಬಂಧಿಸಿ ದಾಖಲಾಗಿದ್ದ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಂದು ಪ್ರಕರಣಕ್ಕೆ  ಮೂಡಬಿದ್ರಿ ಪೋಲೀಸರು ಎಫ್.ಐ.ಆರ್.ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಗಟ್ರೂಡ್ ವೇಗಸ್ ಅವರು ಜಿಲ್ಲಾಧಿಕಾರಿಗಳು ಹಾಗೂ ಸಭೆಗೆ ತಿಳಿಸಿದರು.
ಜನನ ಪ್ರಮಾಣ ಪತ್ರದಲ್ಲಿ ದಾಖಲಿಸುವ ತಾಯಿಯ ಹೆಸರು ಬೇರೊಬ್ಬರದು.ಇದು ಮಕ್ಕಳ ಮಾರಾಟ ಜಾಲದ ಇನ್ನೊಂದು  ಚಾಣಾಕ್ಷ ಬುದ್ಧಿವಂತಿಕೆಯ ವಂಚನೆ ಜಾಲವಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಗೆ ತಿಳಿಸಿದರು.
ಇಂತಹ ಅನೈತಿಕ ವಂಚನೆ ಜಾಲದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೋಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳವರು ನಿರಂತರ ಗಮನ ಹರಿಸಿ ಅನೈತಿಕ ಜಾಲದಿಂದ ಅನ್ಯಾಯವಾಗುವುದನ್ನು ತಡೆ ಹಿಡಿಯಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಸ್ವಯಂ ಸೇವಾ ಸಂಸ್ಥೆಗಳವರು ಮಕ್ಕಳನ್ನು ಅಥವಾ ಮಹಿಳೆಯರನ್ನು ರಕ್ಷಿಸಿ ಕರೆತಂದಾಗ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಕೆಲಸಕ್ಕೆ ವೇಗ ದೊರಕಬೇಕಿದೆ ಎಂದು ಪ್ರಜ್ಞಾದ ಶ್ರೀಮತಿ ಹಿಲ್ಡಾ ರಾಯಪ್ಪ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ಆಶಾ ನಾಯಕ್  ಅವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಗ್ರೇಸಿ ಗೊನ್ಸಾಲ್ವೀಸ್ ಮುಂತಾದವರು ಹಾಜರಿದ್ದರು.