Friday, July 12, 2013

ಪುತ್ತೂರು ಬಾಲವನಕ್ಕೆ ಜಿಲ್ಲಾಧಿಕಾರಿ ಭೇಟಿ

ಮಂಗಳೂರು ಜುಲೈ 12:- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಇಂದು ಪುತ್ತೂರಿನ ಕಾರಂತ ಬಾಲವನಕ್ಕೆ ಭೇಟಿ ನೀಡಿ ಇತ್ತೀಚಿಗಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಬಾಲವನದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಕಲಾ ಗ್ಯಾಲರಿ ಅದ್ಭುತವಾಗಿದ್ದು, ಜೀವನದ ಜಂಜಾಟ ಮರೆತು ಹೊಸ ಸುಂದರ ಲೋಕಕ್ಕೆ ಕೊಂಡೊಯ್ಯುವಷ್ಟು ಸುಂದರವಾಗಿದೆ ಎಂದರು. ಇದನ್ನು ರಾಜ್ಯದ ಒಂದು ಪ್ರವಾಸಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಪುತ್ತೂರಿನ ಸಹಾಯಕ ಆಯುಕ್ತರು ರೂಪಿಸಿರುವ ಯೋಜನೆಗಳಿಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು ಅಭಿವೃದ್ಧಿ ಹಾಗೂ ಸಂರಕ್ಷಣೆ ಸಂಬಂಧ ಎಸಿ ಪ್ರಸನ್ನ ಅವರೊಂದಿಗೆ ಚರ್ಚೆ ನಡೆಸಿದರು.
ಪೂರ್ವಾಹ್ನ ಸುಳ್ಯದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಹಾಗೂ ಯಾವುದೇ ದೂರುಗಳು ಬಾರದಂತೆ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಕಚೇರಿಯನ್ನು ಪರಿಶೀಲಿಸಿದರು. ಕಡತ ವಿಲೇವಾರಿ ನಿಗದಿತ ಸಮಯದಲ್ಲಾಗಬೇಕು ಇಲ್ಲದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.
 ನಗರಪಂಚಾಯತ್ನ ಘನತ್ಯಾಜ್ಯ ವಿಲೇ ನಿರ್ವಹಣೆಗೆ ಮೀಸಲಿಟ್ಟ ಜಾಗವನ್ನು ವ್ಯವಸ್ಥಿತ ನಿರ್ವಹಣೆ ಮಾಡುವಂತೆ ಇಂಜಿನಿಯರ್ ಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ವೈಜ್ಞಾನಿಕವಾಗಿ ಹಾಗೂ ಸುತ್ತಮುತ್ತಲ ಜನರಿಗೆ ತ್ಯಾಜ್ಯ ವಿಲೇಯಿಂದ ಯಾವುದೇ ತೊಂದರೆಯಾಗದಂತೆ ನಿರ್ವಹಿಸಿ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪುತ್ತೂರು ಪ್ರಸನ್ನ ಕುಮಾರ್ ಹಾಗೂ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ ಜೊತೆಗಿದ್ದರು.