Monday, July 22, 2013

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕ್ರಮವಹಿಸಿ- ಜಿಲ್ಲಾಧಿಕಾರಿ

ಮಂಗಳೂರು, ಜುಲೈ.22:-ಸವೋಚ್ಛ ನ್ಯಾಯಾಲಯದ ಆದೇಶದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ನಡೆಸಿದ ಸಮೀಕ್ಷೆಯಿಂದ ಗುರುತಿಸಲಾದ 1579 ಅನಧಿಕೃತ ಧಾರ್ಮಿಕ ಕಟ್ಟಡ ಮತ್ತು ರಚನೆಗಳನ್ನು ಗುರುತಿಸಲಾಗಿದ್ದು, 332 ಕಟ್ಟಡ ಮತ್ತು ರಚನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿದ್ದ 277 ಕಟ್ಟಡಗಳನ್ನು  ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದ ಕಾರಣಕ್ಕಾಗಿ ನೆಲಸಮಗೊಳಿಸಿ ತೆರವು ಮಾಡಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರಾದ ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.
 ಅವರು ಇಂದು ತಮ್ಮ ಕಚೇರಿಯಲ್ಲಿ ಈ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ  ಸಾರ್ವಜನಿಕ ರಸ್ತೆ ಉದ್ಯಾನವನ ಇತರೆಡೆಗಳಲ್ಲಿ ತಲೆ ಎತ್ತಿರುವ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡ ಅಥವಾ ರಚನೆಗಳನ್ನು ಕೂಡಲೇ ಪರಿಶೀಲಿಸಿ ದಿನಾಂಕ 29-7-13 ರೊಳಗೆ ಜಿಲ್ಲಾ ಸಮಿತಿಗೆ  ಪ್ರಗತಿ ವರದಿ ಸಲ್ಲಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಉಪವಿಭಾಗಾಧಿಕಾರಿ ಗಳಿಗೆ ಹಾಗೂ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ನೀಡುವ ಅನಧಿಕೃತ ಕಟ್ಟಡ ಅಥವಬಾ ರಚನೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. 55 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸಾರ್ವಜನಿಕರಿಗೆ ತೊಂದರೆ ಇಲ್ಲ ಎಂಬ ಕಾಣಕ್ಕಾಗಿ ಸಕ್ರಮಗೊಳಿಸಲಾಗಿದ್ದು ಸಮಿತಿಯ ಮುಂದೆ 332 ಪ್ರಕರಣಗಳು ಇದ್ದು, 1242 ಪ್ರಕರಣಗಳು ಬಾಕಿ ಇವೆ ಎಂದು ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಉಪಸ್ಥಿತರಿದ್ದರು.