Wednesday, July 24, 2013

ಧಾರ್ಮಿಕ ಕಟ್ಟಡಗಳ ಭದ್ರತೆಗೆ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು, ಜುಲೈ.24;-  ದೇವಾಲಯಗಳ ನಗರಿ ದಕ್ಷಿಣ ಕನ್ನಡದಲ್ಲಿ ಸಂರಕ್ಷಣೆಯ ದೃಷ್ಟಿಯಿಂದ ನವೀನ ತಾಂತ್ರಿಕತೆಯ ನೆರವನ್ನು ಬಳಸಿ ಜಿಲ್ಲೆಯ ಮಂದಿರ, ಮಸೀದಿ, ದೇವಾಲಯಗಳಲ್ಲಿರುವ ಪುರಾತನ ಸೊತ್ತು, ಸಂಪತ್ತುಗಳನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಹೇಳಿದರು.
ಈ ಸಂಬಂಧ ಜಿಲ್ಲೆಯ ಪ್ರಮುಖ ದೇವಳಗಳ ಆಡಳಿತಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳು ಗೃಹ ಸಚಿವಾಲಯದ ನಿರ್ದೇಶನದಂತೆ ಕರೆದಿದ್ದು, ಜಿಲ್ಲೆಯಲ್ಲಿರುವ ಪ್ರಮುಖ ಪುರಾತನ ದೇವಾಲಯಗಳಲ್ಲಿರುವ ಸುರಕ್ಷತಾ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಆಡಳಿತಾಧಿಕಾರಿಗಳು ಈ ಸಂಬಂಧ ಪೂರಕ ಮಾಹಿತಿ ನೀಡಿದರೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇನ್ಷೂರೆನ್ಸ್, ಆರ್ಮಡ್ ಸೆಕ್ಯುರಿಟಿ ನೇಮಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಮತ್ತು ಎಂಡೋಮೆಂಟ್ ಅಧಿಕಾರಿಗಳು ಉಪಸ್ಥಿತರಿದ್ದರು.