Monday, July 15, 2013

`ಸಕಾಲ'ಕ್ಕೆ 110 ಸೇವೆಗಳ ಸೇರ್ಪಡೆ: ಡಾ. ಶಾಲಿನಿ ರಜನೀಶ್

ಮಂಗಳೂರು,ಜುಲೈ.15: ಕಾಲಮಿತಿಯೊಳಗೆ ಸಾರ್ವಜನಿಕರಿಗೆ ನೀಡುವ ಸೇವೆ `ಸಕಾಲ' ಕ್ಕೆ ಹೊಸದಾಗಿ 110 ಸೇವೆಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಸರಕಾರದ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಾಲಿನಿ ರಜನೀಶ್ ಹೇಳಿದ್ದಾರೆ.
 ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಸಾರ್ವಜನಿಕರಿಗೆ 21 ಇಲಾಖೆಗಳ 375 ಸೇವೆಗಳನ್ನು ಸಕಾಲದ ಮೂಲಕ ಒದಗಿಸಲಾಗುವುದು. ಇದರಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ 76 ಸೇವೆಗಳು, ರೇಶ್ಮೆ ಇಲಾಖೆ 5, ಗ್ರಂಥಾಲಯ 2 ಹಾಗೂ ಮಾರುಕಟ್ಟೆ ಇಲಾಖೆಗೆ ಸಂಬಂಧಿಸಿ ಒಂದು ಸೇವೆಯನ್ನು ಒದಗಿಸಲಾಗುವುದು. ಇದರ ಅನುಷ್ಠಾನಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಅಧಿಕಾರಿಗಳಿಗೆ ಒಂದು ತಿಂಗಳ  ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಕಾಲ ಯೋಜನೆ ಪ್ರಾರಂಭಿಕ ಹಂತದಲ್ಲಿ ಸಮಗ್ರವಾಗಿ ಜನರಿಗೆ ಮುಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಇದೀಗ `ಹೆಲ್ಪ್ ಡೆಸ್ಕ್' ಪ್ರಾರಂಭಿಸಿದ್ದು, ಇದುವರೆಗೆ 25,000 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ
ರಾಜ್ಯದಲ್ಲಿ ಇದುವರೆಗೆ 2.84 ಕೋಟಿ ವಿವಿಧ ಅರ್ಜಿಗಳು ಸ್ವೀಕಾರ ಆಗಿದ್ದು ಈ  ಪೈಕಿ 2.75 ಕೋಟಿ ಅರ್ಜಿಗಳ ವಿಲೇವಾರಿ ಆಗಿದೆ. ದಕ್ಷಿಣ ಕನ್ನಡದಲ್ಲಿ 9,64,555 ಅರ್ಜಿಗಳ ಪೈಕಿ 9,39,401 ಅರ್ಜಿಗಳು ವಿಲೇವಾರಿ ಆಗಿದೆ ಎಂದವರು ತಿಳಿಸಿದರು.
 ಆನ್ಲೈನ್ ಸೇವೆಗೆ ಆದ್ಯತೆ
ಸರಕಾರಿ ಸೇವೆಗಳನ್ನು ಆನ್ ಲೈನ್ ಮೂಲಕ ನಿರ್ವಹಿಸಲು ಆದ್ಯತೆ ನೀಡಲಾಗುತ್ತಿದೆ. ಸದ್ಯ 31 ಸೇವೆಗಳಷ್ಟೇ ಆನ್ ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಆ.16ರಿಂದ 21 ಇಲಾಖೆಗಳ 375 ಸೇವೆಗಳನ್ನು ಆನ್ಲೈನ್ನಲ್ಲಿ ಸೇರ್ಪಡೆಗೊಳಿಸಲಾಗುವುದು. ಅಲ್ಲದೆ ಕಂಪ್ಯೂಟರ್ ಕೇಂದ್ರಗಳನ್ನು ಹೊಂದಿರುವವರು ಮುಂದೆ ಬಂದರೆ ಅವರಿಗೆ ಸಕಾಲದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅವರಿಂದಲೇ ಅರ್ಜಿ ಸಲ್ಲಿಸುವಿಕೆಯನ್ನು ನಿರ್ವಹಿಸುವ ಬಗ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.
ವಿನೂತನವನ್ನು ಈ ಯೋಜನೆಯಡಿ ಅಳವಡಿಸಲು ಉದಾಹರಣೆಗೆ ಪಡಸಾಲೆಯಂತಹ  ನಿರ್ಮಾಣಗಳಿಗೆ (ಫೆಸಿಲಿಟೇಷನ್ ಸೆಂಟರ್) ಅಥವಾ ಯೋಜನೆಗಳಿಗೆ ರೂ. 1 ಕೋಟಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರತಿ ಜಿಲ್ಲೆಯಲ್ಲಿ ಪಡಸಾಲೆ ನಿರ್ಮಾಣ ಅಥವಾ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ರೂ. 1 ಕೋಟಿಯನ್ನು ಸದ್ಬಳಕೆ ಮಾಡಬಹುದಾಗಿದೆ. ಸರಕಾರದ ಸೇವೆಗಳು ಸಾರ್ವಜನಿಕರಿಗೆ ತಲುಪುವಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಈ ಹಣ ಬಳಕೆಯಾಗಲಿದೆ.