Monday, July 8, 2013

ಮೀನು ಮಾರಾಟಕ್ಕೆ ಸ್ವಚ್ಛ ಪರಿಸರ ಅಗತ್ಯ -ಅಭಯಚಂದ್ರ

  ಮಂಗಳೂರು, ಜುಲೈ. 0 8:-ಮೀನು ಮಾರಾಟ ಮಾಡುವವರಿಗೂ ಮೀನು ಕೊಳ್ಳುವವರಿಗೂ ಸ್ವಚ್ಚತೆಯಿಂದ ಕೂಡಿದ ಉತ್ತಮ ಪರಿಸರ ವ್ಯವಸ್ಥೆಯನ್ನು ಕಲ್ಪಿಸುವುದೇ ಸರ್ಕಾರದ ಉದ್ದೇಶ.ಈ ದಿಸೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೆಮ್ರಾಲ್ ನಲ್ಲಿ ರೂ.10.00 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆ ಅತ್ಯಂತ ಸ್ವಚ್ಛ ಪರಿಸರ ಹೊಂದಿದೆ ಎಂದು ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವರಾದ  ಅಭಯಚಂದ್ರ ಅವರು ತಿಳಿಸಿದ್ದಾರೆ.
      ಅವರು ಇಂದು ಕೆಮ್ರಾಲ್ ನಲ್ಲಿ ನೂತನ ಮೀನು ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿದರು. ಜನರ ತೆರಿಗೆ ಹಣದಿಂದ ನಿರ್ಮಿಸುವ ಯಾವುದೇ ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆಯೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಹಳ್ಳಿಗಳಲ್ಲೂ ಪಟ್ಟಣ/ನಗರಗಳಂತೆ ಉತ್ತಮ ಮಾರುಕಟ್ಟೆ ಸೌಲಭ್ಯಗಳು ಆವಶ್ಯಕತೆ ಇದೆ. ಇದನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪೂರೈಸಲಾಗುತ್ತಿರುವುದು ಪ್ರಗತಿಯ ಸೂಚಕವಾಗಿದೆ ಎಂದರು.
ಜಿಲ್ಲಾ  ಪಂಚಾಯತ್ ಸದಸ್ಯ ಈಶ್ವರ ಕಟೀಲ್, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಬೇಬಿ.ಎಸ್. ಕೋಟ್ಯಾನ್,ಶ್ರೀಮತಿ ಸಾವಿತ್ರಿ ಜಿ.ಸುವರ್ಣ ,ಕೆಮ್ರಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಚರ್ಡ್ ಡಿ ಸೋಜಾ ಮುಂತಾದವರು ಹಾಜರಿದ್ದರು.
      ಇದೇ ಸಂದರ್ಭದಲ್ಲಿ  ಜಲಾನಯನ ಇಲಾಖೆ ವತಿಯಿಂದ ಸಸಿಗಳನ್ನು ವಿತರಿಸಲಾಯಿತು. ಮಂಗಳೂರಿನ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಕೆ.ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಮಂಗಳ ಪೇಟೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೂ.10.00 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಮೀನುಗಾರಿಕಾ ಹಾಗೂ ಯುವಜನ ಸೇವಾ ಖಾತೆ ಸಚಿವರಾದ ಅಭಯಚಂದ್ರ ಅವರು ಶಿಲಾನ್ಯಾಸ ನೆರವೇರಿಸಿದರು.