Tuesday, July 23, 2013

ಆಗಸ್ಟ್ 3ರಂದು ಲಕ್ಷ ವೃಕ್ಷ ಆಂದೋಲನಕ್ಕೆ ಚಾಲನೆ

ಮಂಗಳೂರು,ಜುಲೈ. 23:- ಆಗಸ್ಟ್ ಮೂರರಂದು ನಗರದ ಟೌನ್ಹಾಲ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರಾದ ಬಿ. ರಮಾನಾಥ ರೈ ಅವರು ರಾಜ್ಯ ಮಟ್ಟದ ವೃಕ್ಷ ಲಕ್ಷ ಆಂದೋಲನಕ್ಕೆ ಚಾಲನೆ ನೀಡುವರು. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆ ಕಾಳಜಿ ಹಾಗೂ ಸಸಿ ನೆಡುವ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಿ ಎಂದು ದ.ಕ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಅರಣ್ಯ ಇಲಾಖೆಯವರಿಗೆ ಸೂಚಿಸಿದರು.
            ಈಗಾಗಲೇ ನಗರದೆಲ್ಲೆಡೆ ಮಂಗಳೂರು ಮಹಾನಗರಪಾಲಿಕೆ ಹಾಗೂ ವಿವಿಧ ಕಂಪೆನಿಗಳ ಸಹಕಾರದಿಂದ ಐದಾರು ಸಾವಿರದಷ್ಟು ಸಸಿಗಳನ್ನು ನೆಡಲಾಗಿದ್ದು, ಸಸಿ ಬೆಳೆಸುವುದು ಅರಣ್ಯ ಇಲಾಖೆಯ ನಿರಂತರ ಕೆಲಸ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಓ. ಪಾಲಯ್ಯ ಅವರು ಸಭೆಗೆ ಮಾಹಿತಿ ನೀಡಿದರು.
ಆಗಸ್ಟ್ ಮೂರರಂದು ಸಾವಿರದಷ್ಟು ಮಕ್ಕಳು, ಸುಮಾರು 500ರಷ್ಟು ಸಾರ್ವಜನಿಕರು ಹಾಗೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿವರು ಎಂದು ಕಾರ್ಯಕ್ರಮದ ಆಯೋಜಕರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಎನ್ ಎಂ ಪಿ ಟಿಯವರು ಈಗಾಗಲೇ 20,000 ಸಸಿಗಳನ್ನು ನೆಟ್ಟಿದ್ದಾರೆ. ಎನ್ ಎಸ್ ಎಸ್ ನವರು ವಿಶ್ವವಿದ್ಯಾನಿಲಯದಲ್ಲಿ ಸಾವಿರದಷ್ಟು ಸಸಿಗಳನ್ನು ನೆಟ್ಟಿರುವರು ಎಂದು ಎನ್ ಎಸ್ ಎಸ್ ಸಂಯೋಜಕಿ ಶ್ರೀಮತಿ ವಿನೀತಾ ರೈ ಅವರು ಸಭೆಯಲ್ಲಿ ಮಾಹಿತಿ ನೀಡಿದರು. ಎಂ ಆರ್ ಪಿಎಲ್, ಎಂಸಿಎಫ್, ಎಸ್ ಇ ಝಡ್, ಎನ್ ಎಸ್ ಎಸ್, ಎನ್ ಸಿ ಸಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ಕೆ ಎ ದಯಾನಂದ, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪದ್ಮನಾಭ ಗೌಡ,  ಆರ್ ಎಫ್ ಒ ಕ್ಲಿಫರ್ಡ್ ಲೋಬೋ ಅವರನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.