Saturday, July 27, 2013

108 ಅಂಬುಲೆನ್ಸ್ ಸಮಸ್ಯೆಗೆ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ

ಮಂಗಳೂರು, ಜುಲೈ. 27:- ಆರೋಗ್ಯ ತುರ್ತು ಸೇವೆಗಳಿಗೆ ಮೀಸಲಾಗಿರುವ 108 ಅಂಬುಲೆನ್ಸ್ ನ ಸಿಬ್ಬಂದಿ ಮುಷ್ಕರಕ್ಕೆ ಕರೆ ಕೊಟ್ಟಿರುವುದರಿಂದ, ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ತಕ್ಷಣ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ  ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ಮುಂಜಾನೆ ಉಳ್ಳಾಲದ ಕೋಟೆಪುರ, ಮೊಗವೀರ ಪಟ್ಟಣ, ಮುಕ್ಕಚೇರಿ, ಸುಭಾಷ್ನಗರ ಮುಂತಾದೆಡೆಗಳಲ್ಲಿ ಕಡಲ ಕೊರೆತದಿಂದ ಅಪಾಯಕ್ಕೆ ಈಡಾಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರೊಂದಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
108 ಅಂಬುಲೆನ್ಸ್ ವಾಹನಗಳು ಅದರಲ್ಲಿನ ಯಂತ್ರೋಪಕರಣಗಳು ಸರ್ಕಾರದ ಸ್ವತ್ತುಗಳಾಗಿದ್ದು, ಅದರಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಜಿವಿಕೆ ಖಾಸಗಿ ಸಂಸ್ಥೆಗೆ ಸೇರಿದವರಾಗಿದ್ದು, 2008ರಲ್ಲಿ ಜಿವಿಕೆ ಹಾಗೂ ಸರ್ಕಾರದ ನಡುವೆ ಆಗಿರುವ ಒಪ್ಪಂದದಂತೆ 108 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳಾದ ವೇತನ ಸೇವಾ ಭದ್ರತೆ ಇತರೆ ವಿಷಯಗಳ ಬಗ್ಗೆ ಜಿವಿಕೆ ಸಂಸ್ಥೆ ನೇರವಾಗಿ ಹೊಣೆಯಾಗಿದೆ. ಆದ್ದರಿಂದ 108 ರ ಸಿಬ್ಬಂದಿ ಯಾರಾದರೂ ಅನ್ಯಾಯವಾಗಿದೆ ಎಂದು ಸರ್ಕಾರಕ್ಕೆ ದೂರು ನೀಡಿದಲ್ಲಿ, ಕೂಡಲೇ ಸರ್ಕಾರ ಪರಿಶೀಲನೆ ನಡೆಸಿ ಜಿವಿಕೆ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಂಡು ದಂಡ ವಿಧಿಸಲೂ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.108ರ ಪರ್ಯಾಯವಾಗಿ ಬಳಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.