Friday, August 13, 2010

ಮೈಸೂರಿನಲ್ಲಿ ನಾಳೆ ಐತಿಹಾಸಿಕ ಸಮ್ಮೇಳನ: ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ

ಮಂಗಳೂರು,ಆಗಸ್ಟ್13: ನಾಳೆ ಮೈಸೂರಿನಲ್ಲಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ಐತಿಹಾಸಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಮುಖ್ಯಮಂತ್ರಿ ಶ್ರೀ ಬಿ. ಎಸ್ ಯಡಿಯೂರಪ್ಪನವರು ಹೇಳಿದರು.

ಅವರಿಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಮುಖ ಜನಪರ ಕಾರ್ಯ ಕ್ರಮಗಳಲ್ಲಿ ಭಾಗವಹಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಪತ್ರಕರ್ತ ರೊಂದಿಗೆ ಮಾತನಾ ಡುತ್ತಿದ್ದರು. ಯಾವುದೇ ಸಮಾವೇಶಗಳಿಗೆ ಪ್ರತಿಯಾಗಿ ಈ ಸಮ್ಮೇಳನ ನಡೆಯುತ್ತಿಲ್ಲ ಎಂಬುದನ್ನು ಮುಖ್ಯ ಮಂತ್ರಿಗಳೂ ಸ್ಪಷ್ಟ ಪಡಿಸಿದರು, ಜಿಲ್ಲೆಯಲ್ಲಿ ಮರಳು ಮಾಫಿಯಾದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಲ್ಲಾಧಿಕಾರಿ ಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದು, ಅಕ್ರಮ ಮರಳು ಸಾಗಾಣಿಕೆ ತಡೆಗೆ ಸೂಕ್ತ ಕಾನೂನು ರೂಪಿಸುವುದಾಗಿ ನುಡಿದರು. ಹೊಸ ವಿಮಾನ ನಿಲ್ದಾಣ ಕಾರ್ಯೋನ್ಮುಖ ಗೊಂಡ 12ನೇ ದಿನದಂದು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ವಿಮಾನ ನಿಲ್ದಾಣವನ್ನು ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಮೇಯರ್ ರಜನಿ ದುಗ್ಗಣ್ಣ, ಗೃಹ ಸಚಿವ ಡಾ. ವಿ. ಎಸ್. ಆಚಾರ್ಯ, ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕರಾದ ಯೋಗೀಶ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮಂಗಳೂರು ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಮುಂತಾದವರು ಉಪಸ್ಥಿತರಿದ್ದು ಮುಖ್ಯ ಮಂತ್ರಿಗಳನ್ನು ಸ್ವಾಗತಿಸಿದರು.