Tuesday, August 10, 2010

ಸರ್ವ ಶಿಕ್ಷಣ ಅಭಿಯಾನ ಯೋಜನೆ ಅನುಷ್ಠಾನಕ್ಕೆ 30.30 ಕೋಟಿ ರೂ.

ಮಂಗಳೂರು,ಆಗಸ್ಟ್10: 2010-11ನೇ ಸಾಲಿನಲ್ಲಿ ಸರ್ವ ಶಿಕ್ಷಣ ಅಭಿಯಾನದ ವಿವಿಧ ಚಟುವಟಿಕೆಗಳಿಗೆ ಮಂಜೂರಾದ 30.30 ಕೋಟಿ ರೂ. ಯೋಜನಾ ಅನುಷ್ಠಾನಕ್ಕೆ ಜಿಲ್ಲಾ ಸಮಿತಿಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಈ ಸಂಬಂಧ ದ.ಕ.ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಂಜೂರಾತಿ ಗೊಂಡ ಕ್ರಿಯಾ ಯೋಜನೆಯನ್ನು ಸರ್ವ ಶಿಕ್ಷಣ ಅಭಿಯಾನದ ಎ ಪಿ ಸಿ ಪೀತಾಂಬರ ಅವರು ಮಂಡಿಸಿದರು. ಬೆಳ್ತಂಗಡಿಯಲ್ಲಿ ನೂತನವಾಗಿ ಪ್ರಾರಂಭಿಸಿದ 2 ಶಾಲೆಗಳಿಗೆ ತಲಾ 2 ಶಿಕ್ಷಕರ ಹುದ್ದೆ ಮಂಜೂರು ಗೊಂಡಿದೆ. ವೇತನಕ್ಕೆ 1.92 ಲಕ್ಷ ರೂ., ಪ್ರಾಥಮಿಕ ಶಾಲಾ ಶಿಕ್ಷಕರ ವೇತನಕ್ಕೆ 2.84 ಕೋಟಿರೂ., 220 ಟಿಜಿಟಿ ಶಿಕ್ಷಕರ ಹುದ್ದೆ ಮಂಜೂರಾಗಿದ್ದು, ಅವರವೇತನಕ್ಕೆ 4.75 ಕೋಟಿ ರೂ., ಪ್ರಸಕ್ತ ವರ್ಷ ಮಂಜೂರಾದ 621 ಕಿ.ಪ್ರಾ. ಶಾಲಾ ಶಿಕ್ಷಕರಿಗೆ 3.10 ಲಕ್ಷರೂ., ಮತ್ತು 6135 ಹಿ.ಪ್ರಾ.ಶಾಲಾ ಶಿಕ್ಷಕರಿಗೆ 30.67 ಲಕ್ಷ ರೂ., ಅನುದಾನ ಮಂಜೂರಾಗಿದೆ ಎಂದರು.
ಬ್ಲಾಕ್ ಸಂಪನ್ಮೂಲ ಕೇಂದ್ರ (ಬಿ ಆರ್ ಸಿ) ವೇತನ 2.11 ಲಕ್ಷ ರೂ., ಸಾದಿಲ್ವಾರು 3.50 ಲಕ್ಷ ರೂ., ಸಭೆಗಳುಮತ್ತು ಪ್ರವಾಸ ಭತ್ಯೆ 11.76 ಲಕ್ಷ ರೂ., ಕಲಿಕಾ ಬೋಧನಾ ಸಾಮಗ್ರಿ 2.94 ಲಕ್ಷ ರೂ., ಶಿಕ್ಷಕರಿಗೆ ವಲಯ ಮಟ್ಟದಲ್ಲಿ ಸೇವಾ ನಿರತ ತರಬೇತಿ ನೀಡಲು 67.56 ಲಕ್ಷ ರೂ., ಕ್ಲಸ್ಟರ್ ಮಟ್ಟದ ತರಬೇತಿಗೆ 33.78 ಲಕ್ಷ ರೂ., ಹೊಸದಾಗಿ ನೇಮಕ ಗೊಳ್ಳುವ 363 ಶಿಕ್ಷಕರಿಗೆ 30 ದಿನಗಳ ತರಬೇತಿ ನೀಡಲು 10.89 ಲಕ್ಷ ರೂ., ಸಮನ್ವಯಾಧಿಕರಿ ಸಂಪನ್ಮೂಲ ವ್ಯಕ್ತಿಗಳ ತರಬೇತಿಗೆ 2.38 ಲಕ್ಷ ರೂ., ಚಿಣ್ಣರ ಅಂಗಳ ಆರಂಭಿಸಲು 7.50 ಲಕ್ಷ ರೂ., ಟೆಂಟ್ ಶಾಲೆ ನಿರ್ಮಾಣಕ್ಕೆ 90 ಸಾವಿರ ರೂ., ಮೀನಾ ಕಾರ್ಯಕ್ರಮಕ್ಕೆ 9.80 ಲಕ್ಷ ರೂ., ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣಕ್ಕೆ 1.13 ಕೋಟಿ ರೂ., ಉಚಿತ ಪಠ್ಯ ಪುಸ್ತಕ ಪೂರೈಸಲು 76.90 ಲಕ್ಷ ರೂ., ಹಾಗೂ 1.13 ಕೋಟಿ ರೂ., ಸಿವಿಲ್ ಕೆಲಸಗಳಿಗಾಗಿ ಅನುದಾನ ಮಂಜೂರಾಗಿದೆ ಎಂದು ವಿವರ ನೀಡಿದರು.
ಮಾಧ್ಯಮಿಕ ಶಿಕ್ಷಣ ಅಭಿಯಾನಕ್ಕೆ 40.60 ಕೋಟಿ ರೂ.ಪ್ರಸ್ತಾವನೆ:
ಸರಕಾರಿ ಪ್ರೌಢಶಾಲೆಗಳ ಉನ್ನತೀ ಕರಣಕ್ಕೆ 2010 -17 ರ ಅವಧಿಗೆ ವಿವಿಧ ಯೋಜೆನ ಹಮ್ಮಿ ಕೊಳ್ಳಲಾಗಿದೆ. ಇದಕ್ಕೆ 40.60 ಕೋಟಿ ರೂ. ಕ್ರಿಯಾ ಯೋಜನೆ ತಯಾರಿಸಿ ಮಂಜೂ ರಾತಿಗೆ ಕಳುಹಿಸಲಾಗಿದೆ ಎಂದು ಎಪಿಸಿ ಗೀತಾ ತಿಳಿಸಿದರು.ಪ್ರೌಢ ಶಾಲೆಗಳಿಗೆ 43 ಕೊಠಡಿ, 29 ವಿಜ್ಞಾನ ಪ್ರಯೋ ಗಾಲಯ, 26 ಗ್ರಂಥಾಲಯ, 26 ಶೌಚಾಲಯ ಕುಡಿಯುವ ನೀರು 1664 ಪರಿಶಿಷ್ಟ ಜಾತಿ ಪಂಗಡದ 9ನೇ ತರಗತಿ ವಿದ್ಯಾರ್ಥಿನಿಯರಿಗೆ ತಲಾ 3 ಸಾವಿರ ರೂ., ನಿಖರ ಠೇವಣಿಯಿಟ್ಟು ವಿದ್ಯಾರ್ಥಿನಿಯರಿಗೆ 18 ವರ್ಷ ತುಂಬುವ ಸಂದರ್ಭದಲ್ಲಿ ವಿದ್ಯಾಭ್ಯಾಸ ಮುಂದುವರಿಸಲು ಠೇವಣಿ ಹಿಂಪಡೆಯುವ ಯೋಜನೆ ಸೇರಿದೆ ಎಂದರು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಾಜಶ್ರೀ ಹೆಗ್ಡೆ ಅವರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸಿ ಕಾರ್ಯನಿರ್ವಹಿಸಿದಾಗ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದರು. ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಅವರುಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು ಟಿ ಖಾದರ್, ಜಿ.ಪಂ. ಉಪಾಧ್ಯಕ್ಷ ಜಗನ್ನಾಥ್ ಸಾಲ್ಯಾನ್, ಸರ್ವಶಿಕ್ಷಣ ಅಭಿಯಾನದ ಕಾರ್ಯಧ್ಯಕ್ಷ ಹಾಗೂ ಜಿ.ಪಂ. ಸಿಇಒ ಪಿ.ಶಿವಶಂಕರ್ , ಸಮಿತಿಯ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಸಿ. ಚಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು. 2009-10ನೇ ಸಾಲಿನ ಜಿಲ್ಲೆಯ ಶೈಕ್ಷಣಿಕ ಸಾಧನೆ ಮತ್ತು ಪ್ರಗತಿಯ ವರದಿಯನ್ನು ಸರ್ವ ಶಿಕ್ಷಣ ಅಭಿಯಾನದ ಎನ್. ಶಿವಪ್ರಕಾಶ್ ಮಂಡಿಸಿದರು.