Friday, July 31, 2009

ಪಿಳಿಕುಳ ಸಂಸ್ಕ್ರತಿ ಗ್ರಾಮದಲ್ಲಿ ಆಟಿಡೊಂಜಿ ದಿನ..

ಮಂಗಳೂರು,ಜುಲೈ31.ಆಷಾಡ ಮಾಸದಲ್ಲಿ ಬಹು ಸಂಸ್ಕೃತಿಯುಳ್ಳ ಕರಾವಳಿಯ ತುಳು ನಾಡಿನ ವಿಶಿಷ್ಟ ಆಚಾರಣೆಗಳಲ್ಲಿ 'ಆಟಿಡೊಂಜಿ ದಿನ 'ಕಾರ್ಯಕ್ರಮ ಮಂಗಳೂರಿನ ಪಿಲಿಕುಳ ನಿಸರ್ಗಧಾಮದ ಸಂಸ್ಕೃತಿ ಗ್ರಾಮದಲ್ಲಿ ಇತ್ತೀಚೆಗೆ ನಡೆಯಿತು.ಪಿಲಿಕುಳ ನಿಸರ್ಗಧಾಮ ಸೊಸೈಟಿ ವಿವಿಧ ಸಂಘಸಂಸ್ಥಗಳ ಸಹಯೋಗದೊಂದಿಗೆ ಸಂಸ್ಕೃತಿ ಗ್ರಾಮದ ಗುತ್ತಿನ ಮನೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಜನ ಮೆಚ್ಚುಗೆಯನ್ನು ಪಡೆಯಿತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಾಲ್ತಾಡಿ ರಾಮಕ್ರಷ್ಣ ಆಚಾರ್ ಅವರು ಮಳೆ ಮತ್ತು ಬಿಸಿಲು ಅಧಿಕವಾಗಿರುವ ಈ ಆಶಾಡ ಮಾಸದಲ್ಲಿನ ಆಚರಣೆಗಳಿಗೆ ತನ್ನದೆ ಆದ ವೈಜ್ಙಾನಿಕ ತಳಹದಿ ಇದ್ದು, ಇದು ಸಂಶೋಧನೆಗಳಿಂದ ಕೂಡ ಧೃಡ ಪಟ್ಟಿದೆ ಎಂದರು.ಈ ಸಮಯದಲ್ಲಿ ಸೇವಿಸುವ ಗ್ರಾಮೀಣ ಸ್ವಾದದ ತಿಂಡಿಗಳು ಔಷಧಿಯ ಗುಣಗಳನ್ನು ಹೊಂದಿದೆ ಮತ್ತು ಮದುವೆಯಾಗಿರುವ ಹೆಣ್ಣು ಮಕ್ಕಳು ತವರು ಮನೆಗೆ ಹೋಗುವುದಕ್ಕೂ ವೈಜ್ಙಾನಿಕ ಹಿನ್ನೆಲೆ ಇರುವುದನ್ನು ಪ್ರತಿಪಾದಿಸಿದರು.
ಹೊರಗೆ ಬಿಡದೆ ಸುರಿಯುತ್ತಿದ್ದ ಮಳೆಯಾದರೆ,ಒಳಗೆ ಚೆನ್ನೆಮಣೆ ಆಟ, ಮಹಿಳಾ ಸಂಘಟನೆಗಳು ತಯಾರಿಸಿದ ಆಟಿ ತಿಂಗಳ ವಿಶೇಷ ತಿಂಡಿಗಳಾದ ಹಲಸಿನ ಗಟ್ಟಿ,ಹಪ್ಪಳ,ತಿಮರೆ ಚಟ್ನಿ,ಪುಂಡಿಗಸಿ,ಉಪ್ಪಡ್ ಪಚ್ಚಿರ್,ಮುಳ್ಳು ಸೌತೆ ಗಟ್ಟಿ ಸೇರಿದಂತೆ 20 ಕ್ಕೂ ಅಧಿಕ ತಿಂಡಿಗಳು ಕಾರ್ಯಕ್ರಮದ ವಿಶೇಷ ಅಕರ್ಷಣೆಯಾಗಿದ್ದುವು. ಮನೆಯ ಛಾವಡಿಯಲ್ಲಿ ಕರಾವಳಿಯ ಹಿಂದಿನ ಸಂಸ್ಕೃತಿಯನ್ನು ನೆನಪಿಸುವ ಕೃಷಿ ಉಪಕರಣ,ದೈವ ಸಾಮಗ್ರಿಗಳು,ಹಳೇ ತಾಮ್ರ ಮತ್ತು ಮಣ್ಣಿನ ಪಾತ್ರೆಗಳು,ಔಷಧಿಯ ಸಸ್ಯಗಳ ಪ್ರದರ್ಶನವನ್ನು ಸಮಗ್ರ ಮಾಹಿತಿಯೊಂದಿಗೆ ಏರ್ಪಡಿಸಲಾಗಿತ್ತು. ಸಂಸ್ಕೃತಿ ಗ್ರಾಮದ ಯೋಜನಾಧಿಕಾರಿ ಡಾ.ವಾಮನ ನಂದಾವರ,ನಿಸರ್ಗಧಾಮ ಸೊಸೈಟಿ ಕಾರ್ಯನಿರ್ವಾಹಕ ನಿರ್ದೇಶಕ ಜೆ.ಆರ್.ಲೋಬೋ,ನಗರ ಪಾಲಿಕೆ ಉಪಮೇಯರ್ ರಜನಿ ದುಗ್ಗಣ್ಣ,ಆಕಾಶವಾಣಿ ನಿಲಯ ನಿರ್ದೇಶಕ ಡಾ.ಶಿವಾನಂದ ಬೇಕಲ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹರ್ಷಾ,ವಿವಿಧ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.