Tuesday, July 14, 2009

ಆರ್ ಟಿ ಸಿ ಟ್ಯಾಂಪರ್: ನಾಲ್ವರ ಅಮಾನತು

ಮಂಗಲೂರು, ಜು. 14: ಮಂಗಳೂರು ತಾಲೂಕು ಕಚೇರಿಯ ಸಿಬ್ಬಂದಿಗಳಾದ ಗ್ರೆಟ್ಟಾ, ರವಿ, ಕೇಶವ, ನಾರಾಯಣ ಎಂಬವರನ್ನು ಆರ್ ಟಿ ಸಿ ಟ್ಯಾಂಪರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದ.ಕ. ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿ ಶ್ರೀ ಪ್ರಭಾಕರ ಶರ್ಮಾ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಮಂಗಳೂರು ತಾಲೂಕಿನ ಅತ್ತಾವರ ಗ್ರಾಮದ ಸ.ನಂ. 111/1 ರಲ್ಲಿ 1-39 ಎಕರೆ ಜಮೀನಿನ ಮೂಲ ಆರ್ ಟಿ ಸಿ ಯನ್ನು ಟ್ಯಾಂಪರ್ ಮಾಡಿ ಕಲಂ ನಂ. 11ರಲ್ಲಿ ಚಾ.ಗೇ.ಕೂಸ/ಕೋಂ ತುಕ್ರ ಪೂಜಾರಿ ಎಂದು ಅಕ್ರಮ ಸೇರ್ಪಡೆ ಮಾಡಿ ಪೋರ್ಜರಿ ದಾಖಲೆ ಸೃಷ್ಟಿಸಿ ಸದ್ರಿ ಜಮೀನು ಶ್ರೀಮತಿ ಸುಗಂಧಿ ಎಂಬವರ ಹೆಸರಲ್ಲಿ ಎಲ್ಆರ್ ಟಿ ಪ್ರಕರಣ ಸಂ. 2416/2000 ದಂತೆ ಮಂಜೂರು ಮಾಡಿಸಿಕೊಳ್ಳಲು ಕಾರಣರಾದವರನ್ನು ಸೇರಿದಂತೆ ಈ ಪ್ರಕರಣದಲ್ಲಿ ಭಾಗಿಗಳೆಂದು ಗುರುತಿಸಲಾದ ಗ್ರಾಮ ಸಹಾಯಕರಾದ ಶೈಲೇಶ್, ಭಾಸ್ಕರ ವಿರುದ್ಧ ನೇಮಕಾತಿ ಪ್ರಾಧಿಕಾರಿಯಾದ ತಹಸೀಲ್ದಾರರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ. ಹಾಗೂ ಅರ್ಜಿದಾರರಾದ ಸುಗಂಧಿ ಹಾಗೂ ಆಕೆಯ ಜಿಪಿಎ ಹೋಲ್ಡರ್ ಪ್ರಾಣೇಶ್ ಸಹಿತ ಎಲ್ಲಾ ನೌಕರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಆದೇಶಿಸಲಾಗಿದೆ.