Saturday, July 4, 2009

ಜನಸ್ಪಂದನ


ಮಂಗಳೂರು, ಜು. 4: ಹಕ್ಕು ಪತ್ರ ಇಲ್ಲದ ಬವಣೆ, ನೆಮ್ಮದಿ ಕೇಂದ್ರದಲ್ಲಿ ಎದುರಿಸಿದ ಸಮಸ್ಯೆ, ರಸ್ತೆಗಳಿಲ್ಲದೆ ಒದ್ದಾಡುವ ತೊಂದರೆ, ವಿಧವೆಯರು, ವಯಸ್ಕರಿಗೆ ಸರ್ಕಾರದ ಯೋಜನೆಗಳು ತಲುಪುವಲ್ಲಿ ಆಗುತ್ತಿರುವ ವಿಳಂಬ ಮತ್ತು ಮೋಸ, ಮೆಸ್ಕಾಂ ವಿರುದ್ಧ ಸಾರ್ವಜನಿಕರ ಆಕ್ರೋಶ ಇಂದಿನ ಜನಸ್ಪಂದನ ಸಭೆಯಲ್ಲಿ ವ್ಯಕ್ತವಾದವು.
ಶಾಸಕ ಯೋಗೀಶ್ ಭಟ್ ಅವರ ನೇತೃತ್ವದಲ್ಲಿ ಇಂದು ಪುರಭವನದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀ ನಾಗರಾಜ ಶೆಟ್ಟಿ ಅವರ ಉಪಸ್ಥಿತಿಯಲ್ಲಿ, ಮೇಯರ್ ಶಂಕರ ಭಟ್, ಮೂಡಾ ಅಧ್ಯಕ್ಷ ಮಾಧವ ಭಂಡಾರಿ ಸೇರಿದಂತೆ ಜಿಲ್ಲಾಡಳಿತದ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ಜನರ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಿದರು.
ರಸ್ತೆ ಕಾಮಗಾರಿಗಳ ಬಗ್ಗೆ, ಅತ್ಯಗತ್ಯ ಸಂದರ್ಭದಲ್ಲಿ ಮೆಸ್ಕಾಂನ್ನು ಸಂಪರ್ಕಿಸಬೇಕಾದ ಅಧಿಕಾರಿಗಳ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಆಧಿಕಾರಿ ಮಾಹಿತಿ ನೀಡಿದರು. ಮಹಾನಗರಪಾಲಿಕೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಮನಾಪ
ಆಯುಕ್ತ ಶ್ರೀ ರಮೇಶ್ ಅವರು ಉತ್ತರಿಸಿದರು. ನೆಮ್ಮದಿ ಕೇಂದ್ರದಲ್ಲಿ ಪ್ರಮಾಣ ಪತ್ರ ವಿತರಿಸಲು ಕೈಗೊಂಡ ಕ್ರಮಗಳ ಬಗ್ಗೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಕಾರ್ಯಕ್ರಮದ ಬಗ್ಗೆ ತಹಸೀಲ್ದಾರ್ ರವಿಚಂದ್ರ ನಾಯಕ್ ಸಭೆಯಲ್ಲಿ ವಿವರಿಸಿದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀ ಕಾಂತಪ್ಪ, ಉಪಮೇಯರ್ ರಜನಿ ದುಗ್ಗಣ್ಣ, ಆರ್ ಟಿ ಒ ಪುರುಷೋತ್ತಮ್, ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದು, ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸುವ ಭರವಸೆಯನ್ನು ಜನತೆಗೆ ನೀಡಿದರು.
ಸ್ಥಳೀಯ ಜನಪ್ರತಿನಿಧಿಗಳನ್ನು ಸೇರಿಸಿ ಪೊಲೀಸ್ ಇಲಾಖೆ ಶಾಂತಿ ಸಭೆ ಕರೆಯುವ ಸಂಬಂಧ, ಮಳೆಗಾಲದಲ್ಲಿ ಹಾನಿತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಾಸಕರು ಸೂಚನೆಯನ್ನು ನೀಡಿದರು.